ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಹೊಸದುರ್ಗ ತಾಲೂಕಿನಲ್ಲಿ ಈ ಬಾರಿ ಅನುಕೂಲಕರವಾದ ಮಳೆ ಇಲ್ಲದೇ. ಶೇ.75ರಷ್ಟು ಮುಂಗಾರು ಮತ್ತು ಹಿಂಗಾರು ಬೆಳೆಗಳು ನಾಶವಾಗಿದ್ದು ಬೆಳೆಯ ನಷ್ಟಕ್ಕೆ ಸರ್ಕಾರ ಶೀಘ್ರವೇ ಮಧ್ಯಂತರ ಪರಿಹಾರ ಕೊಡಬೇಕೆಂದು ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ಈ ವರ್ಷದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ರೈತರು ಹಾರ್ದಿಕ ಶಕ್ತಿಯನ್ನು ಕಳೆದುಕೊಂಡು ಹತಾಶರಾಗಿದ್ದಾರೆ. ಬಹಳಷ್ಟು ರೈತರು ಬೆಳೆಗಳಿಂದ ಒಂದು ರು. ಆದಾಯ ಪಡೆಯಲು ಸಾಧ್ಯವಾಗಿಲ್ಲ. ರೈತರ ಹಿತದೃಷ್ಟಿಯಿಂದ ಕೃಷಿ ಇಲಾಖೆ ಮುತುವರ್ಜಿ ವಹಿಸಿ, ಕೆಲಸ ಮಾಡಬೇಕಿತ್ತು. ಆದರೆ, ಇದುವರೆಗೂ ಅಂತಹ ಕೆಲಸಗಳಾಗಿಲ್ಲ. ಸರ್ಕಾರ ವಿಮಾ ಕಂಪನಿಯವರನ್ನು ಕರೆಸಿ ಅವರೊಂದಿಗೆ ಮಾತುಕತೆ ನಡೆಸಿ, ಬೆಳೆ ನಷ್ಟಕ್ಕೆ ಶೀಘ್ರವೇ ಮಧ್ಯಂತರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಚಿತ್ರದುರ್ಗ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು. ವಿಮಾ ಕಂಪನಿಗಳ ಮೇಲೆ ನಿಯಂತ್ರಣ ಸಾಧಿಸಿ, ಬೆಳೆಗಳಿಗೆ ಪರಿಹಾರ ಕೊಡುವ ಕೆಲಸವಾಗಬೇಕು. ಬೆಳೆ ಬೆಳೆಯಲು ರೈತರು ಬಹಳಷ್ಟು ಹಣ ಖರ್ಚು ಮಾಡಿದ್ದು, ಎಕರೆಗೆ ಕನಿಷ್ಠ 25 ಸಾವಿರ ರು. ಕೊಡಲೇಬೇಕು. ಎಲ್ಲಾ ಬ್ಯಾಂಕುಗಳಲ್ಲೂ ರೈತರು ತೆಗೆದುಕೊಂಡಿರುವ ಬೆಳೆ ಸಾಲವನ್ನು ಸರ್ಕಾರ ರದ್ದು ಮಾಡಬೇಕು. ಮುಂದಿನ ಬೆಳೆ ಬೆಳೆಯಲು ಸಾಲ ನೀಡುವಂತಹ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಚಿತ್ರದುರ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊರಟಗೆರೆ ಮಹೇಶ್ವರಪ್ಪ, ಜಿಲ್ಲಾ ಸಂಪನ್ಮೂಲ ಮುಖಂಡ ಕರಿಸಿದ್ದಯ್ಯ, ಹೊಳಲ್ಕೆರೆ ರೈತ ಸಂಘದ ಅಧ್ಯಕ್ಷ ರಂಗಸ್ವಾಮಿ, ಹೊಸದುರ್ಗ ರೈತ ಸಂಘದ ಚಿತ್ತಪ್ಪ, ಗೌರವಾಧ್ಯಕ್ಷ ಬೋರೇಶ, ಕಾರ್ಯದರ್ಶಿಗಳಾದ ಶಶಿಕುಮಾರ್ ಮತ್ತು ನಿರಂಜನ್ ಸೇರಿ ವಿವಿಧ ಗ್ರಾಮಗಳ ರೈತರಿದ್ದರು.