ಸಾರಾಂಶ
ಹೊಸಪೇಟೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ ನಕಲಿ ಎಸ್ಟಿ ಜಾತಿ ಪ್ರಮಾಣಪತ್ರ ಪಡೆಯುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸಂಘಟಿತ ಹೋರಾಟಕ್ಕೆ ಎಲ್ಲರೂ ಅಣಿಯಾಗಬೇಕು ಎಂದು ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಜ.ಶ್ರೀ ಪ್ರಸನ್ನಾನಂದ ಸ್ವಾಮಿ ಹೇಳಿದರು.
ನಗರದ ನೂತನ ಲಿಂ.ಶ್ರೀ ಪುಣ್ಯಾನಂದಪುರಿ ಕಲ್ಯಾಣ ಮಂಟಪ ಲೋಕಾರ್ಪಣೆ ಮತ್ತು ತಾಲೂಕು ವಾಲ್ಮೀಕಿ ನಾಯಕ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಾಲ್ಮೀಕಿ, ನಾಯಕ, ಬೇಡ, ತಳವಾರ ಎಂಬುವುದು ನಮ್ಮ ಸಮಾಜದ ವಿವಿಧ ಹೆಸರುಗಳಾಗಿದೆ. ಇತರೆ ಜಾತಿಗಳಲ್ಲಿಯೂ ತಳವಾರಿಕೆ ವೃತ್ತಿ ಮಾಡುತ್ತಿದ್ದರು. ಈಗ ಅವರು ಸಹ ನಾವು ತಳವಾರರು ಎಸ್ಟಿ ಜಾತಿಗೆ ಒಳಪಡುತ್ತೇವೆ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದರಿಂದಾಗಿ ನಾಯಕ, ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ಜಾಗೃತಿಗೊಂಡು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ₹೧೮೭ ಕೋಟಿ ಹಗರಣವಾಗಿ ೨೦೨೩ ಮತ್ತು ೨೦೨೪ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಇತರೆ ಸೌಲಭ್ಯಗಳು ಸಿಗದೇ ಪರುದಾಡುವಂತಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಒಂದು ರುಪಾಯಿ ಹಣ ಪೋಲ್ ಆಗದಂತೆ ನೋಡಿ ಕೊಳ್ಳುವುದಾಗಿ ಹೇಳಿದ್ದಾರೆ, ಈ ಬಗ್ಗೆ ಸಮಾಜದ ಎಲ್ಲ ಶಾಸಕರು ಸಹ ಧ್ವನಿ ಎತ್ತಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.ಹೊಸಪೇಟೆ ತಾಲೂಕು ವಾಲ್ಮೀಕಿ ನಾಯಕ ಸಂಘದ ನೂತನ ಪದಾಧಿಕಾರಿಗಳು ಕಲ್ಯಾಣ ಮಂಟಪದ ಆವರಣದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಇಂದು ಲೋಕಾರ್ಪಣೆಗೊಂಡಿರುವ ಶ್ರೀ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಎಲ್ಲಾ ಸಮಾಜ ಬಾಂಧವರು ಸಹ ಸಭೆ ಸಮಾರಂಭಗಳನ್ನು ಮಾಡಬಹುದು ಎಂದರು.
ವಾಲ್ಮೀಕಿ ಗುರು ಪೀಠದ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಧರ್ಮದರ್ಶಿ ಬಿ.ಎಸ್. ಜಂಬಯ್ಯನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.ಆರಂಭದಲ್ಲಿ ಹಂಪಿ ಭುವನೇಶ್ವರಿ ದೇವಾಲಯದಿಂದ ಜ್ಯೋತಿಯನ್ನು ತರಲಾಯಿತು. ಬಳಿಕ ಕಲ್ಯಾಣ ಮಂಟಪದ ಆವರಣದಲ್ಲಿರುವ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ದೇವಸ್ಥಾನಕ್ಕೆ ಮತ್ತು ಕಳಸಾರೋಹಣವನ್ನು ನೆರವೇರಿಸಲಾಯಿತು.
ಉಪಾಧ್ಯಕ್ಷ ಕಿನ್ನಾಳ ಹನುಮಂತ ಸ್ವಾಗತಿಸಿದರು. ಕಟಿಗಿ ವಿಜಯಕುಮಾರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದೇಣಿಗೆ ಸಲ್ಲಿಸಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಪದಗ್ರಹಣ:
ತಾಲೂಕು ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶ್ರೀನಾಥ, ಪ್ರಧಾನ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ, ಸಹ ಕಾರ್ಯದರ್ಶಿ ಗುಡಿಗುಡಿ ಸೋಮನಾಥ, ಖಜಾಂಚಿ ಬೆಳಗೋಡ್ ಅಂಬಣ್ಣ, ನಿರ್ದೇಶಕರಾಗಿ ಗೋಸಲ ಭರಮಪ್ಪ, ಜಂಬಾನಹಳ್ಳಿ ವಸಂತ, ಕಣ್ಣಿ ಶ್ರೀಕಂಠ, ಎಸ್.ಎಸ್. ಚಂದ್ರಶೇಖರ್, ಸಿಂದಿಗೇರಿ ದೇವೇಂದ್ರಪ್ಪ, ತಾರಿಹಳ್ಳಿ ವೆಂಕಟೇಶ್, ಗುಜ್ಜಲ ಚಂದ್ರಶೇಖರ್, ಗುಡಿಗುಂಟಿ ಮಲ್ಲಿಕಾರ್ಜುನ, ಕಟಗಿ ಜಂಬಯ್ಯ ನಾಯಕ, ನಿರ್ಲೀಗಿ ಕರೆ ಹನುಮಂತ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕಾರ ಮಾಡಿದರು. ನಗರದ ಏಳುಕೇರಿ ದೈವಸ್ಥರು, ಸಮಾಜದ ಮುಖಂಡರು, ಯುವಕರು ಇತರರು ಭಾಗವಹಿಸಿದ್ದರು.