ಸಾರಾಂಶ
ಕನ್ನಡಪ್ರಭ ವಾರ್ತೆ ಅಮೀನಗಡ
ಸರ್ಕಾರಿ ಶಾಲೆಗಳು ಇಂದು ಎಲ್ಲ ರೀತಿಯ ಮೂಲ ಸೌಲಭ್ಯಗಳೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿವೆ ಎಂಬುವುದಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದಿರುವುದೇ ಸಾಕ್ಷಿ ಎಂದು ಹುನಗುಂದ ಕ್ಷೇತ್ರ ಶಿಕ್ಷಾಣಧಿಕಾರಿ ಜಾಸ್ಮಿನ್ ಕಿಲ್ಲೇದಾರ ಹೇಳಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಶುಕ್ರವಾರ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನವನ್ನು ಬಲೂನ್ ಹಾರಿ ಬಿಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಇಂದು ಸರ್ಕಾರಿ ಶಾಲೆಗಳಲ್ಲಿ ನುರಿತ, ಅನುಭವಿ, ತರಬೇತಿ ಪಡೆದ ಶಿಕ್ಷಕರಿದ್ದು, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಪಟ್ಟಣದ ಈ ಶಾಲೆ ಪ್ರಧಾನಮಂತ್ರಿ ವಿಶೇಷ ಯೋಜನೆಗೆ ಆಯ್ಕೆಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಎಲ್ಕೆಜಿ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಶಾಲೆ ಎಲ್ಲ ಶಾಲೆಗಳಿಗೂ ಮಾದರಿಯಾಗಲಿದ್ದು, ಪಟ್ಟಣದ ನಾಗರಿಕರು ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಬಿಆರ್ಸಿಒ ವಿನೋದ ಬೋವಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ದೈಹಿಕ ಮಾನಸಿಕ ಸದೃಢರಾಗಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು. ಬಿಆರ್ಪಿ ಎಂ.ಆರ್. ಬಾಗವಾನ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಣ ಅಧಿಕಾರಿಗಳು, ಶಿಕ್ಷಕರು ಎಲ್ಕೆಜಿ ಮತ್ತು ಒಂದನೇ ತರಗತಿ ಮಕ್ಕಳಿಗೆ ಗುಲಾಬಿ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಿದರು.ಡಯಟ್ ಉಪನ್ಯಾಸಕಿ ಕೆ.ಎ. ಚವ್ಹಾಣ, ತಾಲೂಕು ದೈಹಿಕ ಪರಿವೀಕ್ಷಕ ಎಸ್.ಟಿ. ಪೈಲ್, ಸಿಆರ್ಪಿ ಆಶೀಕ್ ಎಮ್ಮಿ, ಮುಖ್ಯ ಶಿಕ್ಷಕ ಎಂ.ಎಸ್. ಹರಗಬಲ್, ಶಿಕ್ಷಕರಾದ ಮಲ್ಲಿಕಾರ್ಜುನ ಸಜ್ಜನ, ಬಿ.ಬಿ. ಭಾಪ್ರಿ, ಆರ್.ಎಂ. ಎಮ್ಮಿ, ಐ..ಬಿ. ಬಾಪುರೆ, ಎಸ್.ಎಸ್. ಲಮಾಣಿ ಹಾಗೂ ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.