ಮೃತಳ ಹೆಸರಿನಲ್ಲಿದ್ದ ಕೋಟ್ಯಂತರ ಮೌಲ್ಯದ ಜಮೀನು ಕಬಳಿಕೆ: ನಾಲ್ವರ ಬಂಧನ

| Published : Feb 06 2025, 12:16 AM IST

ಮೃತಳ ಹೆಸರಿನಲ್ಲಿದ್ದ ಕೋಟ್ಯಂತರ ಮೌಲ್ಯದ ಜಮೀನು ಕಬಳಿಕೆ: ನಾಲ್ವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಮೃತ ಮಹಿಳೆ ಹೆಸರಿನಲ್ಲಿದ್ದ ಕೋಟ್ಯಂತರ ರುಪಾಯಿ ಮೌಲ್ಯದ ಕೃಷಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿ, ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಪೊಲೀಸರು ನಾಲ್ವರ ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೃತ ಮಹಿಳೆ ಹೆಸರಿನಲ್ಲಿದ್ದ ಕೋಟ್ಯಂತರ ರುಪಾಯಿ ಮೌಲ್ಯದ ಕೃಷಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿ, ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಪೊಲೀಸರು ನಾಲ್ವರ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿಕೆ ಗ್ರಾಮದ ಸಾಗರ ದತ್ತಾತ್ರಯ ಜಾಧವ, ಮುತ್ಯಾನಟ್ಟಿ ಗ್ರಾಮದ ಸುರೇಶ ಯಲ್ಲಪ್ಪ ಬೆಳಗಾವಿ, ಕಡೋಲಿ ಗ್ರಾಮದ ಸಾಹುಕಾರ ಗಲ್ಲಿಯ ಶಾಂತಾ ಮೋಹನ ನಾರ್ವೇಕರ ಮತ್ತು ಕಡೋಲಿ ಕಲ್ಮೇಶ್ವರ ಗಲ್ಲಿಯ ನಿವಾಸಿ ಹಾರೂಣ ರಶೀದ ಅಬ್ದುಲಮಜೀದ ತಹಸೀಲ್ದಾರ ಬಂಧಿತ ಆರೋಪಿಗಳು.ಕಮಲಾಬಾಯಿ ಯಶವಂತಪ್ರಭು ಅಸಗಾಂವಕರ ಎಂಬುವರ ಮಾಲಿಕತ್ವಕ್ಕೆ ಸೇರಿದ ಬೆಳಗಾವಿ ಬಾಚಿ ಗ್ರಾಮದ ರಿ.ಸ.ನಂ.59, 60, 61ಯ1 ಒಟ್ಟು 8 ಎಕರೆ, 21 ಗುಂಟೆ ಜಾಗವನ್ನು ಆರೋಪಿಗಳು ನಕಲಿ ದಾಖಲೆ ಸೃಷ್ಟಿಯಿಸಿ, ವಂಚನೆ ಮಾಡಿದ್ದರು. ಕಮಲಾಬಾಯಿ 22-7-2001ರಲ್ಲಿ ಮೃತರಾಗಿದ್ದಾರೆ. ಇವರಿಗೆ 12 ಮಕ್ಕಳಿದ್ದಾರೆ. ಕಮಲಾಬಾಯಿ ಅವರು ತಾವು ಸಾಯುವ ಮುನ್ನವೇ ತಮ್ಮ ಪುತ್ರ ವಿಜಯ ಅಸಗಾಂವಕರ ಹೆಸರಿಗೆ ವ್ಹೀಲ್‌ ಬರೆಸಿದ್ದರು. ವಿಜಯ ಅವರು 27-7-2003 ರಂದು ನಿಧನರಾಗಿದ್ದಾರೆ. ವಿಜಯ ಪತ್ನಿ ವಿನಿತಾ ವಿಜಯ ಅಸಗಾಂವಕರ ಅವರು ತನ್ನ ಗಂಡನ ಹೆಸರಿನಲ್ಲಿದ್ದ ಜಮೀನು ದಾಖಲೆ ಪರಿಶೀಲಿಸಿದ ವೇಳೆ, ಆರೋಪಿಗಳು 20-4-2023 ರಂದು ಸಾಗರ ದತ್ತಾತ್ರಯ ಜಾಧವ ಎಂಬುವರಿಗೆ ಬೆಳಗಾವಿ ಸಬ್‌ರಜಿಸ್ಟರ್‌ ಕಚೇರಿಯಲ್ಲಿ ಮಾರಾಟ ಮಾಡಿರುವುದಾಗಿ ನೋಂದಣಿ ಮಾಡಿಸಿರುವುದು ಪತ್ತೆಯಾಗಿದೆ. ಈ ಕುರಿತು ವಿನಿತಾ ಅಸಗಾಂವಕರ ಅವರು 20-4-2024 ರಂದು ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸಿದ ವೇಳೆ, ಮೃತ ಕಮಲಾಬಾಯಿ ಯಶವಂತ ಪ್ರಭು ಅಸಗಾಂವಕರ ತಾನೇ ಎಂದು ಪ್ರತಿಬಿಂಬಿಸಿ ಆರೋಪಿ ಶಾಂತಾ ಮೋಹನ ನಾರ್ವೇಕರ ಅವರು ನಕಲಿ ದಾಖಲೆ ಸೃಷ್ಟಿಸಿ, ಜಮೀನನ್ನು ಬೇರೊಬ್ಬರ ಹೆಸರಿಗೆ ವರ್ಗಾವಣೆ ಮಾಡಿ ವಂಚನೆ ಮಾಡಿರುವುದು ಪತ್ತೆ ಆಗಿದೆ. ಈ ಪ್ರಕರಣಕ್ಕೆಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.