ಸಾರಾಂಶ
ಹಳಿಯಾಳ: ತಾಲೂಕಿನ ಸಾಂಬ್ರಾಣಿ ಗ್ರಾಮದಲ್ಲಿ ಶ್ರೀ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಹನ್ನೆರಡು ವರ್ಷಗಳ ಆನಂತರ ನಡೆಯುವ ಈ ಶ್ರೀ ಗ್ರಾಮದೇವಿಯರ ಜಾತ್ರೆಯ ಸಂಭ್ರಮಾಚರಣೆಗೆ ಇಡೀ ಗ್ರಾಮ ಸಜ್ಜಾಗಿದೆ.
ಸಾಂಬ್ರಾಣಿ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಸೋದೆ ಅರಸರ ಆಳ್ವಿಕೆಗೆ ಒಳಪಟ್ಟ ಸಾಂಬ್ರಾಣಿ ಅಂದು ಅವರ ಸಾಮ್ರಾಜ್ಯದ ಎರಡನೇ ರಾಜಧಾನಿಯಾಗಿತ್ತಂತೆ. ಈ ಗ್ರಾಮದಲ್ಲಿ ಮಹಾರಾಣಿ ವಾಸಿಸುತ್ತಿದ್ದರಿಂದ ಈ ಗ್ರಾಮಕ್ಕೆ ಸಾಂಬರಾಣಿ ಎಂದು ಹೆಸರು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಮಹಾರಾಣಿಯ ರಕ್ಷಣೆಗಾಗಿ ಗಜಪಡೆ ಈ ಗ್ರಾಮದಲ್ಲಿ ನೆಲೆಸಿತ್ತು. ಗ್ರಾಮದಲ್ಲಿದ್ದ ಅಂದಿನ ಅರಸರ ಕೋಟೆಯ ಕುರುಹುಗಳು ಸಂರಕ್ಷಣೆಯಿಲ್ಲದೇ ನಾಶವಾದವು ಎಂದು ಹೇಳಲಾಗುತ್ತಿದೆ.ಸಾಂಬ್ರಾಣಿ ಪುಟ್ಟ ಗ್ರಾಮವಾದರೂ ಗ್ರಾಮದೇವಿಯ ವ್ಯಾಪ್ತಿಗೊಳಪಡುವ ಸಾಂಬ್ರಾಣಿ, ಗುದಮುರಗಿ, ಶೇಖನಕಟ್ಟಾ, ಬುಕ್ಕಿನ ಗ್ರಾಮಗಳಲ್ಲಿ ನೆಲೆಸಿರುವ ನೆಲೆಸಿರುವ ಸರ್ವ ಧರ್ಮೀಯರು ಈ ಜಾತ್ರಾ ಮಹೋತ್ಸವವದಲ್ಲಿ ಭಕ್ತಿ-ಶ್ರದ್ಧೆಯಿಂದ ಪಾಲ್ಗೊಂಡು ಮತೀಯ ಸಾಮರಸ್ಯ ಸಾರುತ್ತಿರುವುದು ವಿಶೇಷವಾಗಿದೆ.
ಜಾತ್ರೆಗೆ ಸಿದ್ಧತೆ: ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗಿದ್ದು, ಗ್ರಾಮದಲೆಲ್ಲ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಇಡೀ ಗ್ರಾಮದ ಮೇಲೆ ನಿಗಾವಹಿಸಲಾಗುತ್ತಿದೆ. ಆರೋಗ್ಯ ಸಮಸ್ಯೆಗಳು ಎದುರಾಗದಂತೆ ವಿಶೇಷ ಆರೋಗ್ಯ ತುರ್ತು ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗಿದೆ.ಇಂದು ರಥೋತ್ಸವ: ಗ್ರಾಮದೇವಿಯರ ಗ್ರಾಮಸಂಚಾರ ಕೈಗೊಂಡು ಭಕ್ತಾದಿಗಳನ್ನು ಹರಸುವ ಹೊನ್ನಾಟವು ಶನಿವಾರ ಮತ್ತು ಭಾನುವಾರ ವಿಜೃಂಭ್ರಣೆಯಿಂದ ನಡೆಯಿತು. ಇನ್ನೂ ಗ್ರಾಮದೇವಿ ಜಾತ್ರೆಗೆ ಆಧ್ಯಾತ್ಮಿಕ ದೈವಿಕಳೆಯನ್ನು ತರುವ ಭವ್ಯ ರಥೋತ್ಸವ ಫೆ. 3ರಂದು ಮಧ್ಯಾಹ್ನ ನಡೆಯಲಿದೆ. ರಥೋತ್ಸವಕ್ಕಾಗಿ 65 ಅಡಿ ಎತ್ತರದ 5 ಅಂಕಣಗಳ ರಥ ಸಿದ್ಧಪಡಿಸಲಾಗಿದೆ. ಪ್ರತಿ ಅಂಕಣದಲ್ಲಿ ಗ್ರಾಮದಲ್ಲಿನ ಎಲ್ಲ ದೇವಸ್ಥಾನಗಳ ದೇವಿ ಹಾಗೂ ದೇವರ ಚಿತ್ರಗಳನ್ನು, ಜತೆಯಲ್ಲಿ ಶರಣರ, ದಾಸರ, ರಾಷ್ಟ್ರ ಮಹಾಪುರುಷರ ಚಿತ್ರಗಳನ್ನು ಅಳವಡಿಸಿ ಅಲಂಕರಿಸಲಾಗಿದೆ. ಫೆಬ್ರವರಿ 4ರಿಂದ 6ರ ವರೆಗೆ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ಫೆ. 7ರಂದು ಸೀಮೋಲ್ಲಂಘನ, ಫೆ. 10ರಂದು ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.ನಾಳೆ ರಥಸಪ್ತಮಿ ಪ್ರಯುಕ್ತ ಸೂರ್ಯನಮಸ್ಕಾರ ಕಾರ್ಯಕ್ರಮ
ಕಾರವಾರ: ಇಲ್ಲಿನ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಆಶ್ರಯದಲ್ಲಿ ರಥಸಪ್ತಮಿ ಪ್ರಯುಕ್ತ ಫೆ. 4ರಂದು ಬೆಳಗ್ಗೆ 5.30ಕ್ಕೆ ನಗರದ ಕಾಜುಭಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ 108 ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ಮಾಡಬಹುದು. ವಯಸ್ಸಿನ ಮಿತಿ ಇಲ್ಲದೆ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವವರು ಯೋಗ ಗುರು ಪ್ರಶಾಂತ ರೇವಣಕರ(ಮೊ. 9341893449), ನಂದಾ ನಾಯ್ಕ(ಮೊ. 9845706305), ಪ್ರತೀಕ್ಷಾ ರಾಣಿ(8904846202) ಅವರನ್ನು ಸಂಪರ್ಕಿಸಬಹುದು.