ಆಂಜನೇಯ ಸ್ವಾಮಿ ದೇಗುಲ ಜೀರ್ಣೋದ್ಧಾರಕ್ಕೆ ಅನುದಾನ

| Published : Oct 14 2024, 01:25 AM IST

ಸಾರಾಂಶ

ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಈಗಾಗಲೇ ನುಗ್ಗೇಹಳ್ಳಿ ಹಾಗೂ ಜಂಬೂರು ಮತ್ತು ಪಿ. ದಾಸಪುರ ಕೆರೆಗಳಿಗೆ ನೀರು ಹರಿಸಲಾಗಿದೆ. ಜಂಬೂರು ಕೆರೆ ಸದ್ಯದಲ್ಲೇ ತುಂಬಲಿದ್ದು, ನಂತರ ಕಲ್ಕೆರೆ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಈ ಭಾಗದ ಕೆರೆಗಳು ತುಂಬಿದ ನಂತರ ಪುನ: ನುಗ್ಗೇಹಳ್ಳಿ ಹಿರೇಕೆರೆಗೆ ನೀರು ಹರಿಸಿ ತುಂಬಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿಯ ಒಂಟಿ ಮಾವಿನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಮುಂಬರುವ ಆರ್ಥಿಕ ವರ್ಷದಲ್ಲಿ 5 ಲಕ್ಷ ರು. ಅನುದಾನ ಕೊಡುವುದಾಗಿ ಶಾಸಕ ಸಿ. ಎನ್ ಬಾಲಕೃಷ್ಣ ಭರವಸೆ ನೀಡಿದರು.

ಹೋಬಳಿಯ ಒಂಟಿ ಮಾವಿನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ವಿಜಯದಶಮಿ ದಿನದಂದು ನೂತನ ಗರುಡಗಂಬ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಿಂದ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ನಾನು ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದು, ಮುಂಬರುವ ಆರ್ಥಿಕ ವರ್ಷದಲ್ಲಿ ಸುಮಾರು 5 ಲಕ್ಷ ರು. ಅನುದಾನ ಕೊಡುವುದಾಗಿ ಭರವಸೆ ನೀಡಿದ ಅವರು, ಗ್ರಾಮಸ್ಥರ ಒತ್ತಾಯದಂತೆ ಒಂಟಿ ಮಾವಿನಹಳ್ಳಿ ಗ್ರಾಮದಿಂದ ಭುವನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯನ್ನು ಮುಂಬರುವ ದಿನಗಳಲ್ಲಿ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಈಗಾಗಲೇ ನುಗ್ಗೇಹಳ್ಳಿ ಹಾಗೂ ಜಂಬೂರು ಮತ್ತು ಪಿ. ದಾಸಪುರ ಕೆರೆಗಳಿಗೆ ನೀರು ಹರಿಸಲಾಗಿದೆ. ಜಂಬೂರು ಕೆರೆ ಸದ್ಯದಲ್ಲೇ ತುಂಬಲಿದ್ದು, ನಂತರ ಕಲ್ಕೆರೆ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಈ ಭಾಗದ ಕೆರೆಗಳು ತುಂಬಿದ ನಂತರ ಪುನ: ನುಗ್ಗೇಹಳ್ಳಿ ಹಿರೇಕೆರೆಗೆ ನೀರು ಹರಿಸಿ ತುಂಬಿಸಲಾಗುತ್ತದೆ ಎಂದರು.

ಶ್ರೀ ರಾಮದೂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯರಾಮ್ ಮಾತನಾಡಿ, ದೇವಾಲಯ ನಿರ್ಮಾಣಕ್ಕೆ 40 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗುತ್ತಿದ್ದು, ಈಗಾಗಲೇ ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಿದ್ದಾರೆ. ಆದರೆ ದೇವಾಲಯ ಪೂರ್ಣಗೊಳಲು ಇನ್ನು 20 ಲಕ್ಷ ಹಣದ ಕೊರತೆಯಾಗಿದ್ದು, ಭಕ್ತರು ಹಾಗೂ ಗ್ರಾಮಸ್ಥರು

ದೇವಾಲಯ ಪೂರ್ಣಗೊಳ್ಳಲು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.

ಗರುಡಗಂಬ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮವನ್ನು ಅಮರಗಿರಿ ರಂಗನಾಥ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಸ್ವಾಮೀಜಿ ನೆರವೇರಿಸಿದರು.

ಶ್ರೀರಾಮದೂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯರಾಮ್ , ಗ್ರಾಪಂ ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜಯರಾಮ್, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎಂ.ಜಿ ಚೇತನ್, ಉಪಾಧ್ಯಕ್ಷ ರಂಗನಾಥ ಎಂ ಆರ್., ಖಜಾಂಚಿ ಗೋವಿಂದ್ ರಾಜ್, ಮುಖಂಡರಾದ ಪುಟ್ಟಸ್ವಾಮಿ, ಅವೇರಹಳ್ಳಿ ನಾಗಣ್ಣ, ಯುವ ಮುಖಂಡ ಹುಲಿಕೆರೆ ಸಂಪತ್ ಕುಮಾರ್, ಫ್ಲೆಕ್ಸಿಡ್ ಫಿಟ್ನೆಸ್ ಜಿಮ್ ಮಾಲೀಕ ಒಂಟಿ ಮಾವಿನಹಳ್ಳಿ ಅರ್ಜುನ್ ಸೇರಿ ಗ್ರಾಮಸ್ಥರು ಹಾಜರಿದ್ದರು.