ಮಂಡ್ಯದಲ್ಲಿ ಒಂದು ಅಂತಾರಾಷ್ಟ್ರೀಯ ಕಬಡ್ಡಿ ಟೂರ್ನಿಮೆಂಟ್ ನಡೆಸುವಂತಹ ಯೋಜನೆಗಾಗಿ ಸಿಎಸ್ಆರ್ ಫಂಡ್ನಲ್ಲಿ ವ್ಯವಸ್ಥೆ ಮಾಡಲು ಆಲೋಚಿಸಿದ್ದೇವೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಕಬಡ್ಡಿ ಟೂರ್ನಿಮೆಂಟ್ ಮಾಡಲಾಗುವುದು, ಜಿಲ್ಲೆ ಕಬಡ್ಡಿ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಸರ್ಕಾರಗಳು ಕೂಡ ಆದ್ಯತೆ ಕೊಡುತ್ತಿರುವುದರಿಂದ ಒಲಂಪಿಕ್ ಮತ್ತು ಏಷ್ಯನ್ಗೇಮ್ಸ್-ಅಥ್ಲೆಟಿಕ್ ಕ್ರೀಡೆಗಳಲ್ಲಿ ಪಾಲ್ಗೊಂಡ ದೇಶದ ಸ್ಪರ್ಧಿಗಳು ಪದಕ ಪಡೆದು ಕೀರ್ತಿ ತಂದಿದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ನಗರದ ಪಿಇಟಿ ಪ್ಲೇಸ್ಮೆಂಟ್ ಸಭಾಂಗಣದಲ್ಲಿ ಜಿಲ್ಲೆ ಬ್ಯಾಡ್ಮಿಂಟನ್ ಅಸೋಸಿಯೇಷನ್, ಪೀಪಲ್ಸ್ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಂಡರ್ 19 ಮತ್ತು ಹಿರಿಯರ ವಿಭಾಗ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಂಡ್ಯದಲ್ಲಿ ಒಂದು ಅಂತಾರಾಷ್ಟ್ರೀಯ ಕಬಡ್ಡಿ ಟೂರ್ನಿಮೆಂಟ್ ನಡೆಸುವಂತಹ ಯೋಜನೆಗಾಗಿ ಸಿಎಸ್ಆರ್ ಫಂಡ್ನಲ್ಲಿ ವ್ಯವಸ್ಥೆ ಮಾಡಲು ಆಲೋಚಿಸಿದ್ದೇವೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಕಬಡ್ಡಿ ಟೂರ್ನಿಮೆಂಟ್ ಮಾಡಲಾಗುವುದು, ಜಿಲ್ಲೆ ಕಬಡ್ಡಿ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.ಕೇಂದ್ರ ಸರ್ಕಾರ ಕ್ರೀಡಾ ಸಚಿವರನ್ನು ಮಂಡ್ಯಕ್ಕೆ ಕರೆತಂದು ತಾಲೂಕಿನ ವಿ.ಸಿ.ಫಾರಂನಲ್ಲಿ ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡಿದ್ದೇವೆ. ನಿವೇಶನ ಕೇಳಿದ್ದೀರಿ. ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗುವುದು ಎಂದರು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೆಷನ್ ಅಧ್ಯಕ್ಷ ಎಸ್.ಕುಮಾರ್ ಬಂಗಾರಪ್ಪ ಮಾತನಾಡಿ, ಒಲಂಪಿಕ್ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್ ಒಂದು ಪ್ರಮುಖ ಕ್ರೀಡೆ. ಭಾರತೀಯರು ಈ ಕ್ರೀಡೆಗಳಲ್ಲಿ ಹಲವು ಬಾರಿ ಚಿನ್ನ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂದರು.ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ 1950ರಲ್ಲಿ ಸ್ಥಾಪನೆಯಾಗಿ ಇಂದು 75 ವರ್ಷಗಳ ಸಂಭ್ರಮದಲ್ಲಿದ್ದೇವೆ. 2028 ಮತ್ತು 2030 ಒಲಂಪಿಕ್ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳಿಗೆ ಭಾರತ- ಕರ್ನಾಟಕದಿಂದ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ 30 ಸಾವಿರ ಬ್ಯಾಡ್ಮಿಂಟನ್ ಕೋರ್ಟ್ ಗಳಿವೆ. 6 ಲಕ್ಷಕ್ಕೂ ಹೆಚ್ಚು ಕ್ರೀಡಾಪಟುಗಳಿದ್ದಾರೆ ಎಂದು ನುಡಿದರು.
ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಸೇರಿ ಹಲವರು ರಾಷ್ಟ್ರ- ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾ ಪ್ರತಿಭೆಗಳಿದ್ದಾರೆ. ಏಷ್ಯಾದಲ್ಲೇ 10 ಕಾಯಂ ಕೋರ್ಟ್ ಗಳನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದೆ ಎಂದು ಸ್ಮರಿಸಿದರು.ಮಂಡ್ಯ ಜಿಲ್ಲೆಯಲ್ಲಿ ಉತ್ತಮ ತರಬೇತಿ ನೀಡಲು ಬ್ಯಾಡ್ಮಿಂಟನ್ ಕೋರ್ಟ್ ಅಗತ್ಯವಿದೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ಗೆ ಒಂದು ನಿವೇಶನ ಬೇಕಿದೆ. ಕೇಂದ್ರ ಸಚಿವರು ಕ್ರೀಡಾ ಸ್ಪರ್ಧಿಗಳಿಗಾಗಿ ಆದ್ಯತೆ ನೀಡಿ ಕೋರ್ಟ್ ಮತ್ತು ನಿವೇಶನವನ್ನು ಕೊಡಿಸಬೇಕಾಗಿ ಮನವಿ ಮಾಡುತ್ತೇವೆ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಆನಂದ್, ಶಾಸಕ ಎಚ್.ಟಿ.ಮಂಜು, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ, ಅಸೋಸಿಯೆಷನ್ ಅಧ್ಯಕ್ಷ ಬಿ.ಶಿವಕುಮಾರ್, ಕಾರ್ಯಾಧ್ಯಕ್ಷ ಅನಿಲ್ಕುಮಾರ್, ಕಾರ್ಯದರ್ಶಿ ಮನೋಹರ್ ಹಜಾರೆ, ಕ್ರೀಡಾ ಸಮಿತಿ ಛೇರ್ಮನ್ ಡಾ.ಕೆ.ಎಂ.ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.