ರಾಂ ಅಜೆಕಾರು ಕನ್ನಡಪ್ರಭವಾರ್ತೆ ಕಾರ್ಕಳ
ವಿಶ್ವ ಪರಿಸರ ದಿನದ ಅಂಗವಾಗಿ ಕಾರ್ಕಳ ತೆಳ್ಳಾರು ದುರ್ಗಾಮಲೆ ಮೀಸಲು ಅರಣ್ಯದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪುಟಾಣಿಗಳ ಪರಿಸರ ಪ್ರೀತಿ ಗಮನ ಸೆಳೆದಿದೆ.ಈ ಅರಣ್ಯದಲ್ಲಿ ಮಕ್ಕಳು, ಸ್ವತಃ ಹಾರೆ, ಪಿಕ್ಕಾಸಿ ಹಿಡಿದು ಮಾವು, ಹೆಬ್ಬಲಸು, ಹಲಸು ಬೀಜಗಳನ್ನು ನಾಟಿ ಮಾಡಿದರು. ಅರಣ್ಯದಲ್ಲಿ ಸಸಿಗಳು ಹಾಗೂ ಬೀಜ ನಾಟಿ ಮಾಡುವ ವೈಜ್ಞಾನಿಕ ವಿಧಾನಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರಾಯೋಗಿಕವಾಗಿ ಕಲಿಸಿಕೊಟ್ಟರು. ಕಾರ್ಯಕ್ರಮಕ್ಕೆ ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಮತ್ತು ಸಿಬ್ಬಂದಿ ವರ್ಗದವರಾದ ರೋಹಿಣಿ, ಅರಣ್ಯ ಸಿಬ್ಬಂದಿ ಸಾಥ್ ನೀಡಿದರು.ಕ್ರೈಸ್ಟ್ ಕಿಂಗ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು100 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪರಿಸರ ಪಾಠದ ಜೊತೆಗೆ, ಪರಿಸರ ಸಂರಕ್ಷಣೆಯ ಜವಾಬ್ದಾರಿಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
1,100 ಬೀಜ ಬಿತ್ತನೆ: ಪರಿಸರವಾದಿಗಳಾದ ಆರತಿ ಅಶೋಕ್, ಅಬೂಬಕ್ಕರ್, ಮತ್ತು ಶೈಲೇಶ್ ಪುಚ್ಚೆಬೆಟ್ಟು ಅವರ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪರಿಸರ ಪ್ರೇಮಿಗಳು ಸೇರಿದಂತೆ 70 ಮಂದಿ ಪಾಲ್ಗೊಂಡರು. ಒಟ್ಟು 800 ಮಾವು, 200 ಹೆಬ್ಬಲಸು ಮತ್ತು 100 ಹಲಸಿನ ಬೀಜಗಳನ್ನು ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲಾಯಿತು. ಮಕ್ಕಳಿಗೆ ಪಠ್ಯ ಜೊತೆಗೆ ಪರಿಸರದ ಪಾಠವನ್ನು ನೀಡುವುದು ಇಂದಿನ ಅಗತ್ಯವಾಗಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಅವರಿಗೇ ಪರಿಸರದ ಮೌಲ್ಯವನ್ನು ಮನದಟ್ಟು ಮಾಡಿಕೊಟ್ಟರೆ ಮಾತ್ರ ಮುಂದಿನ ಭವಿಷ್ಯ ಸುರಕ್ಷಿತ.-ರೋಹಿಣಿ, ಅರಣ್ಯಾಧಿಕಾರಿ, ಕಾರ್ಕಳ