ಶಿರಾ ತಾಲೂಕಿನ 70 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ: ಟಿ.ಬಿ.ಜಯಚಂದ್ರ

| Published : Mar 16 2024, 01:46 AM IST

ಶಿರಾ ತಾಲೂಕಿನ 70 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ: ಟಿ.ಬಿ.ಜಯಚಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಯಲ್ಲಿ ಶಿರಾ ತಾಲೂಕಿನ 70 ಸಾವಿರ ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳಿ ೨೦೦೦ ರು.ವರ್ಗಾವಣೆಯಾಗುತ್ತಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಯಲ್ಲಿ ಶಿರಾ ತಾಲೂಕಿನ 70 ಸಾವಿರ ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳಿ ೨೦೦೦ ರು.ವರ್ಗಾವಣೆಯಾಗುತ್ತಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ಅವರು ಶುಕ್ರವಾರ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇನ್ನೇನು ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಕಾರ್ಯಕ್ರಮಗಳು ನಿಲ್ಲಬಾರದು ಎಂಬ ಉದ್ದೇಶದಿಂದ ಇಂದು ತುರ್ತಾಗಿ ಫಲಾನುಭವಿ ಗಳಿಗೆ ಸವಲತ್ತು ಕೊಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ೯ ತಿಂಗಳಾಗಿದೆ. ಚುನಾವಣೆಯಲ್ಲಿ ಘೋಷಣೆ ಮಾಡಿದ ಅನೇಕ ಗ್ಯಾರಂಟಿಗಳನ್ನು ಮತ್ತು ಆಶ್ವಾಸನೆಗಳನ್ನು ಈಡೇರಿಸುವುದು ಸರ್ಕಾರಕ್ಕೆ ದೊಡ್ಡ ಸವಾಲು ಇತ್ತು. ಆ ಎಲ್ಲಾ ಸವಾಲುಗಳನ್ನು ಎದುರಿಸಿ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಇದರ ಜೊತೆಗೆ ಶಕ್ತಿ ಯೋಜನೆಯಡಿ ಲಕ್ಷಾಂತರ ಹೆಣ್ಣು ಮಕ್ಕಳು ಉಚಿತವಾಗಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ನಮ್ಮ ಸರ್ಕಾರದ ಸಾಧನೆ ಎಂದ ಅವರು, ದೇಶದಲ್ಲಿ ಚುನಾವಣೆಯಲ್ಲಿ ಘೋಷಣೆ ಮಾಡಿದ ಘೋಷಣೆಗಳು ಯಥಾವತ್ತಾಗಿ ಜಾರಿ ಮಾಡಿ, ಪ್ರಗತಿಯತ್ತ ದಾಪುಗಾಲು ಹಾಕಿದ್ದೇವೆ ಎಂದರು.

ತಾಲೂಕು ಪಂಚಾಯಿತಿ ಇಒ ಎಚ್.ಹನುಮಂತಪ್ಪ ಮಾತನಾಡಿ, ಇಂದು ಸುಮಾರು ೧.೩೮ ಕೋಟಿ ರು. ವೆಚ್ಚದಲ್ಲಿ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗುತ್ತಿದೆ. ಇದರಲ್ಲಿ ೧೩ ಜೀತ ಮುಕ್ತರಿಗೆ ವಸತಿ ಯೋಜನೆ ಕಾರ್ಯಾದೇಶ, ೧೩ ಸ್ವಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿ ವಿತರಣೆ, ಪರಿಶಿಷ್ಟ ಜಾತಿ ಉಪಯೋಜನೆಯಡಿ ವಿಶೇಷ ನೆರವು, ಉದ್ಯಮ ಸೇವಾ ಕೇಂದ್ರ ಯೋಜನೆಯಡಿ ಸಮುದಯ ಉದ್ಯಮ ನಿಧಿ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ವಿವಿಧ ಕಾಮಗಾರಿಗಳ ಕಾರ್ಯಾದೇಶ, ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ, ತೋಟಗಾರಿಕಾ ಇಲಾಖೆಯಿಂದ ಸೀಡ್ ಕಿಟ್ ವಿತರಣೆ, ಜೇನು ಪೆಟ್ಟಿಗೆ ವಿತರಣೆ, ಪ್ರಧಾನಮಂತ್ರಿ ಕೃಷಿ ಸಿಂಚಾ ಯಿ ಯೋಜನೆಯ ಸಹಾಯಧನ, ರೇಷ್ಮೆ ಇಲಾಖೆಯ ರೇಷ್ಮೆ ಶೆಡ್ ನಿರ್ಮಾಣ ಕಾರ್ಯಾದೇಶ ಪತ್ರ ವಿತರಣೆ, ಕೃಷಿ ಇಲಾಖೆ ಯಿಂದ ಹೈಟೆಕ್ ಕೃಷಿ ಯಂತ್ರೋಪಕರಣಗಳು ಪವರ್ ಟಿಲ್ಲರ್, ಪವರ್ ವೀಡರ್ ವಿತರಣೆ, ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸುಕನ್ಯಾ ಸಮೃದ್ಧಿ ಯೋಜನೆಯಡಿ ಅಂಚೆ ಕಚೇರಿಯಿಂದ ಪಾಸ್ ಬುಕ್ ವಿತರಣೆ, ಆರೋಗ್ಯ ಇಲಾಖೆಯಿಂದ ಎ.ವಿ.ಎ.ಆರ್.ಕೆ. ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಪೂಜಾ ಪೆದ್ದರಾಜು, ತಹಸೀಲ್ದಾರ್ ದತ್ತಾತ್ರೇಯ ಜೆ ಗಾದಾ, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜ ನಾಯ್ಕ್, ಪೌರಾಯುಕ್ತ ರುದ್ರೇಶ್, ತಾ.ಪಂ. ವ್ಯವಸ್ಥಾಪಕ ಅನಿಲ್, ಎ.ಡಿ. ನಾರಾಯಣ ನಾಯ್ಕ್, ಮಾಜಿ ಜಿ.ಪಂ ಸದಸ್ಯರಾದ ಅರೇಹಳ್ಳಿ ರಮೇಶ್, ಪರ್ವತಪ್ಪ, ಬೊಮ್ಮಣ್ಣ, ಬೆಜ್ಜೆಹಳ್ಳಿ ರಾಮಚಂದ್ರ ಪ್ಪ, ಬಗರ್ ಹುಕುಂ ಸಕ್ರಮೀಕರಣ ಸಮಿತಿ ಸದಸ್ಯ ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ, ಸೇರಿದಂತೆ ಹಲವರು ಹಾಜರಿದ್ದರು.