ಸಾರಾಂಶ
- ನಾಗೇನಹಳ್ಳಿಯಲ್ಲಿ ಕೆರೆ ಪುನಶ್ಚೇತನಾ ಕಾಮಗಾರಿಗೆ ಚಾಲನೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಕೆರೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದು ರೈತರ ಮೇಲೆ ಅವರಿಗೆ ಇರುವ ಕಾಳಜಿಯಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ಎಸ್.ನಾಗೇಂದ್ರಪ್ಪ ಹೇಳಿದರು.ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಸೋಮವಾರ ನಮ್ಮೂರು-ನಮ್ಮಕೆರೆ ಯೋಜನೆಯಡಿ ಕೆರೆ ಹೂಳು ತೆಗೆಸಿ, ಪುನಶ್ಚೇತನಗೊಳಿಸುವ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂತೆಬೆನ್ನೂರು ಯೋಜನಾ ಕಚೇರಿ ವ್ಯಾಪ್ತಿಯಿಂದ ಕೆರೆ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕೆರೆಗಳು ಸಮೃದ್ಧಿಯಾಗಿದ್ದರೆ ಗ್ರಾಮಗಳಿಗೂ ಒಳ್ಳೆಯ ಕಳೆಬರುವುದು. ನಮ್ಮೂರು-ನಮ್ಮಕೆರೆ ಕಾರ್ಯಕ್ರಮ ಉತ್ತಮವಾದ ಕಾರ್ಯಕ್ರಮವಾಗಿದ್ದು, ಇದರ ಪ್ರಯೋಜನ ಗ್ರಾಮೀಣರು ಪಡೆಯಬೇಕಿದೆ ಎಂದರು.ತಾಲೂಕು ಯೋಜನಾಧಿಕಾರಿ ಎ.ಜಿ. ಪ್ರವೀಣ್ ಮಾತನಾಡಿ, ಗ್ರಾಮಗಳಲ್ಲಿ ಕೆರೆಗಳು ತುಂಬಿಕೊಂಡಿದ್ದರೆ ಪಕ್ಷಿ, ಪ್ರಾಣಿಗಳಿಂದ ಹಿಡಿದು ಗ್ರಾಮದ ದನಕರುಗಳಿಗೆ ಕುಡಿಯುವ ನೀರಿಗೆ ಆಸರೆಯಾಗಲಿದೆ. ಅಂತರ್ಜಲಮಟ್ಟ ವೃದ್ಧಿಸಲಿದೆ ಎಂದರು.
ಚಿತ್ರದುರ್ಗದ ಪ್ರಾದೇಶಿಕ ವ್ಯಾಪ್ತಿಯ ಕೆರೆ ಅಭಿವೃದ್ಧಿ ಅಭಿಯಂತರ ಹರೀಶ್ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಯೋಜನೆಯಡಿ 12 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ನಾಗೇನಹಳ್ಳಿಯ ಕೆರೆ 13ನೇ ಕೆರೆಯಾಗಿದೆ ಎಂದರು.ಸಮಾರಂಭದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಿಂಗನಗೌಡ, ಗ್ರಾಪಂ ಅಧ್ಯಕ್ಷೆ ಸಂಜಿವಮ್ಮ, ಸಮಿತಿ ಸದಸ್ಯರಾದ ನಾಗರಾಜ್, ಮಮತ, ಮಧುಸೂಧನ, ನಾಗರಾಜ್, ಲೀಲಾ, ಸುಮಾ, ರೂಪ, ಕೃಷಿ ಅಧಿಕಾರಿ ಅಜ್ಜಪ್ಪ, ಸೇವಾ ಪ್ರತಿನಿಧಿಗಳಾದ ರೇಖಾ, ವೀರಭದ್ರಪ್ಪ, ಓಬಳೇಶ್ವರ, ರಂಗಮ್ಮ, ಶಾರದ, ಗ್ರಾಮಸ್ಥರು ಹಾಜರಿದ್ದರು.
- - - -24ಕೆಸಿಎನ್ಜಿ2.ಜೆಪಿಜಿ:ಚನ್ನಗಿರಿ ತಾಲೂಕಿನ ನಾಗೇನಹಳ್ಳಿಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ಎಸ್.ನಾಗೇಂದ್ರಪ್ಪ ಅವರು ಕೆರೆ ಪುನಶ್ಚೇತನ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.