ಅಳ್ನಾವರ: ಕೆರೆಗಳ ಹೂಳು ತೆಗೆದು ದುರಸ್ತಿ ಮಾಡಿ ನೀರು ಸಂಗ್ರಹಿಸುವುದರಿಂದ ಗ್ರಾಮೀಣ ಭಾಗದ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಜಿಲ್ಲಾ ನಿರ್ದೇಶಕ ಹನುಮಂತ ನಾಯ್ಕ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಪಟ್ಟಣ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ ಅಳ್ನಾವರದ ಚವಟಗೆರೆ ಕೆರೆಯ ಹೂಳೆತ್ತುವ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯಾದ್ಯಂತ ಈ ಯೋಜನೆಯಡಿ ಸಾವಿರಕ್ಕೂ ಅಧಿಕ ಕೆರೆಗಳ ಹೂಳು ತೆಗೆಯುವ ಕಾಮಗಾರಿ ಕೈಗೊಳ್ಳಲಾಗಿದೆ. ಕೆರೆಗಳ ಅಭಿವೃದ್ಧಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ದಾಂಡೇಲಿ ತಾಲೂಕು ಯೋಜನಾಧಿಕಾರಿ ಬೋಜಾ ಪ್ರಾಸ್ತಾವಿಕವಾಗಿ ಮಾತನಾಡಿ, ಕೆರೆಯ ವಿಸ್ತೀರ್ಣ ೧೧.೯ ಎಕರೆ ಇದ್ದು, ಅದರಲ್ಲಿ ೧೦.೨೦ ಎಕರೆ ಪ್ರದೇಶದಲ್ಲಿ ಹೂಳು ತೆಗೆಯಲು ಉದ್ದೇಶಿಸಲಾಗಿದೆ. ಕೆರೆ ಅಭಿವೃದ್ಧಿಯಿಂದ ಈ ಭಾಗದ ರೈತರ ಬದುಕು ಹಸನಾಗುವುದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಾಗಿ ಸುತ್ತಮುತ್ತಲಿನ ರೈತರಿಗೆ ಪ್ರಯೋಜನವಾಗಲಿದೆ. ಕೆರೆಯ ಪುನಃಶ್ಚೇತನದಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯವೂ ದೊರೆಯಲಿದೆ ಎಂದರು.ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರ್ಜುನ್ ಅಷ್ಟೇಕರ ಅಧ್ಯಕ್ಷತೆ ವಹಿಸಿದ್ದರು. ಸಚಿವ ಸಂತೋಷ್ ಲಾಡ್ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ಪಪಂ ಮಾಜಿ ಅಧ್ಯಕ್ಷ ಅಮೋಲ್ ಗುಂಜೀಕರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವಿನಾಯಕ ಕುರುಬರ, ಬಳಿರಾಮ ಅಳವಣಿ, ಪುಂಡಲಿಕ ಪಾರ್ದಿ, ಸುನಂದಾ ಕಲ್ಲು, ರಾಯಪ್ಪ ಹುಡೆದ, ರಮೇಶ್ ಸುರೋಜಿ, ಸತೀಶ ಬಡಸ್ಕರ್, ರಮೇಶ್ ಕುನ್ನೂರಕರ, ಪರಶುರಾಮ ಕಾಕತ್ಕರ, ಪ್ರವೀಣ ಪವಾರ, ಕೆರೆ ವಿಭಾಗದ ಎಂಜಿನೀಯರ್ ನಿಂಗರಾಜ ಮಾಳವಾಡ, ಅಳ್ನಾವರ ಕಾರ್ಯಕ್ಷೇತ್ರದ ಸ್ವಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಮತ್ತಿತರರು ಇದ್ದರು.