ಮಹಿಳೆಯರ ಟ್ರೇಡ್ ಯೂನಿಯನ್ನವರು ಜಾಮೀನು ನೀಡಿ ಬಂಧಿತ ಮಹಿಳಾ ಕೆಲಸಗಾರರನ್ನು ಬಂಧನದಿಂದ ಬಿಡಿಸಿದರು.
ಕೊಪ್ಪಳ: ಹೆಣ್ಣುಮಕ್ಕಳು ಅಬಲೆಯರಲ್ಲ ಸಬಲೆಯರು. ಅವರು ಕುಟುಂಬದ ರಕ್ಷಣೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಅವುಗಳೆಲ್ಲವನ್ನು ಸದ್ಬಳಕೆ ಮಾಡಿಕೊಂಡು ತಾವೆಲ್ಲರೂ ಸಕಾರಾತ್ಮಕ ಆಲೋಚನೆಗಳೊಂದಿಗೆ ಬೆಳೆಯಬೇಕು ಎಂದು ಸಾಹಿತಿ ಸಾವಿತ್ರಿ ಮುಜುಮದಾರ ಹೇಳಿದರು.
ನಗರದ ಎನ್ಜಿಒ ಕಾಲನಿಯ ಶಿವಶಕ್ತಿ ಮಹಿಳಾ ಮಂಡಳದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ ಇಪ್ಪತೈದು ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಹದಿಮೂರು ವಾರಗಳ ಕಾಲ ಮುಷ್ಕರ ನಡೆಸಿದ್ದರಿಂದ ಬಂಧಿಸಲಾಗಿತ್ತು. ಮಹಿಳೆಯರ ಟ್ರೇಡ್ ಯೂನಿಯನ್ನವರು ಜಾಮೀನು ನೀಡಿ ಬಂಧಿತ ಮಹಿಳಾ ಕೆಲಸಗಾರರನ್ನು ಬಂಧನದಿಂದ ಬಿಡಿಸಿದರು. ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾಜೆಟ್ಕಿನ್ ನೇತೃತ್ವದಲ್ಲಿ ಡೆನ್ಮಾರ್ಕ್ನ ಕೋಪೆನ್ ಹೇಗನ್ನಲ್ಲಿ ಎರಡನೆಯ ಅಂತಾರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ ಹದಿನೇಳು ದೇಶಗಳ ಪ್ರತಿನಿಧಿಗಳು ಸೇರಿದ್ದರು. ಸಮ್ಮೇಳನಕ್ಕೆ ಅಂತಾರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್ನ ಮುಖ್ಯಸ್ಥೆಯಾಗಿದ್ದ ಕ್ಲಾರಾಜೆಟ್ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ಪ್ರಮುಖ ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ. ಇದೇ ಸಮ್ಮೇಳನದಲ್ಲಿ ಮಾ. ೮ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕು ಎಂದು ಕ್ಲಾರಾಜೆಟ್ಕಿನ್ ನಿರ್ಣಯ ಮಂಡಿಸಿದರು.ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಭಾರತದಲ್ಲೂ ಮಹಿಳೆಯರು ಸ್ವಚ್ಛಂದವಾಗಿ ಬದುಕಲು ನಮಗೂ ಅನೇಕ ಹಕ್ಕುಗಳನ್ನು ಸಂವಿಧಾನ ನೀಡಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ನಮಗೆಲ್ಲರಿಗೂ ಸಮಾನ ಮೂಲಭೂತ ಹಕ್ಕು, ಕರ್ತವ್ಯಗಳನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇತಿಹಾಸ ಅರಿತು ಶಿಕ್ಷಣ ಪಡೆದು ಸಂಘಟಿತರಾಗಬೇಕಿದೆ ಎಂದರು.
ಶಿಕ್ಷಕಿಯರಾದ ಮಂಜುಳಾ ಹಿರೇಮಠ, ತೇಜಸ್ವಿನಿ ಮಾತನಾಡಿದರು. ರೇಖಾ ನಾಯಕ ಎನ್. ಡೊಳ್ಳಿನ, ರೇಣುಕಾ ದಿವಟರ, ಅಧ್ಯಕ್ಷೆ ಗೌರಮ್ಮ ಗಾರವಾಡಮಠ, ಉಪಾಧ್ಯಕ್ಷೆ ಗಂಗಮ್ಮ ಪಾಟೀಲ, ಗೌರವಾಧ್ಯಕ್ಷೆ ಸುಮಿತ್ರಾ ಪುರಾಣಿಕಮಠ ಉಪಸ್ಥಿತರಿದ್ದರು. ಶಾರದಾ ಚಾಕಲಬ್ಬಿ ಹಾಗೂ ಸಾವಿತ್ರಿ ಮುಜುಂದಾರ ಅವರನ್ನು ಸನ್ಮಾನಿಸಲಾಯಿತು. ಶಿಲ್ಪಾ ರಾಣಿ ಪುರಾಣಿಕಮಠ ಕಾರ್ಯಕ್ರಮ ನಿರೂಪಿಸಿದರು. ಸಹನಾ ಪಾಟೀಲ ವಂದಿಸಿದರು.