ವರ್ತಕ ಸಂಘದ ಅಧ್ಯಕ್ಷ ಕೆ.ವಿ.ಎನ್. ಶಿವು ಮಾತನಾಡಿ, ವಾರದಲ್ಲಿ ಎರಡು ದಿನ ನಡೆಯುವ ಟೆಂಡರ್‌ನಲ್ಲಿ ಖರೀದಿಸಿದ ಕೊಬ್ಬರಿಯನ್ನು ಮುಂದಿನ ದಿನ ವಿವಿಧ ಗುಣಮಟ್ಟಗಳ ಆಧಾರದ ಮೇಲೆ ವಿಂಗಡಿಸಿ ಎಪಿಎಂಸಿ ಆವರಣದಲ್ಲಿರುವ ಅಂಗಡಿಗಳಿಗೆ ಸಾಗಿಸಲಾಗುತ್ತದೆ. ಈ ವೇಳೆ ಜಿಎಸ್‌ಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ಹೆಸರಿನಲ್ಲಿ ಮಧ್ಯಪ್ರವೇಶಿಸುತ್ತಿದ್ದು, ವ್ಯಾಪಾರ ಪ್ರಕ್ರಿಯೆ ನಿಧಾನಗೊಳ್ಳುವಂತಾಗಿದೆ. ರೈತರು ಹಾಗೂ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆನಗರದ ಎಪಿಎಂಸಿ ಮಂಡಿಯಲ್ಲಿ ಕೊಬ್ಬರಿ ವ್ಯಾಪಾರ ನಡೆಸುತ್ತಿರುವ ಕಮಿಷನ್ ಏಜೆಂಟರು ಮತ್ತು ವ್ಯಾಪಾರಿಗಳು ಜಿಎಸ್‌ಟಿ ಅಧಿಕಾರಿಗಳ ಪರಿಶೀಲನಾ ಕ್ರಮಗಳಿಂದ ವ್ಯವಹಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ಆರೋಪಿಸಿ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಮನವಿ ಸಲ್ಲಿಸಿದರು.

ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವರ್ತಕರು ತಮ್ಮ ಸಮಸ್ಯೆಗಳನ್ನು ವಿವರಿಸಿ, ಟೆಂಡರ್‌ ಪ್ರಕ್ರಿಯೆಯ ಮೂಲಕ ಖರೀದಿಸಲಾಗುವ ಕೊಬ್ಬರಿಯನ್ನು ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಿ ಸಂಗ್ರಹಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಅದೇ ವೇಳೆ ಜಿಎಸ್‌ಟಿ ಅಧಿಕಾರಿಗಳು ನಡೆಸುತ್ತಿರುವ ದಿಢೀರ್ ಪರಿಶೀಲನೆಗಳು ವ್ಯಾಪಾರಿಗಳಲ್ಲಿ ಅನಗತ್ಯ ಗೊಂದಲ ಹಾಗೂ ಆತಂಕವನ್ನು ಸೃಷ್ಟಿಸುತ್ತಿವೆ ಎಂದು ತಿಳಿಸಿದರು. ವರ್ತಕ ಸಂಘದ ಅಧ್ಯಕ್ಷ ಕೆ.ವಿ.ಎನ್. ಶಿವು ಮಾತನಾಡಿ, ವಾರದಲ್ಲಿ ಎರಡು ದಿನ ನಡೆಯುವ ಟೆಂಡರ್‌ನಲ್ಲಿ ಖರೀದಿಸಿದ ಕೊಬ್ಬರಿಯನ್ನು ಮುಂದಿನ ದಿನ ವಿವಿಧ ಗುಣಮಟ್ಟಗಳ ಆಧಾರದ ಮೇಲೆ ವಿಂಗಡಿಸಿ ಎಪಿಎಂಸಿ ಆವರಣದಲ್ಲಿರುವ ಅಂಗಡಿಗಳಿಗೆ ಸಾಗಿಸಲಾಗುತ್ತದೆ. ಈ ವೇಳೆ ಜಿಎಸ್‌ಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ಹೆಸರಿನಲ್ಲಿ ಮಧ್ಯಪ್ರವೇಶಿಸುತ್ತಿದ್ದು, ವ್ಯಾಪಾರ ಪ್ರಕ್ರಿಯೆ ನಿಧಾನಗೊಳ್ಳುವಂತಾಗಿದೆ. ರೈತರು ಹಾಗೂ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಶಾಸಕ ಕೆ. ಎಂ. ಶಿವಲಿಂಗೇಗೌಡ ಅವರು ಸ್ಥಳದಲ್ಲಿಯೇ ಜಿಎಸ್‌ಟಿ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಕಾನೂನುಬದ್ಧ ವ್ಯಾಪಾರ ನಡೆಸುತ್ತಿರುವ ವರ್ತಕರು ಮತ್ತು ರೈತರಿಗೆ ಅನಗತ್ಯ ತೊಂದರೆ ಉಂಟಾಗದಂತೆ ಕ್ರಮವಹಿಸುವಂತೆ ಸೂಚಿಸಿದರು. ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಎಪಿಎಂಸಿ ಆವರಣದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಶಾಶ್ವತ ಛಾವಣಿ ನಿರ್ಮಾಣ ಹಾಗೂ ಮೈದಾನಕ್ಕೆ ಇಂಟರ್‌ಲಾಕ್ ಅಳವಡಿಸುವಂತೆ ವರ್ತಕರು ಶಾಸಕರಿಗೆ ಮನವಿ ಸಲ್ಲಿಸಿದರು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕರು ನೀಡಿದರು.ಸಭೆಯ ಬಳಿಕ ಎಪಿಎಂಸಿ ಕಮಿಷನ್ ವರ್ತಕರು ಹಾಗೂ ಕೊಬ್ಬರಿ ವ್ಯಾಪಾರಿಗಳು ಶಾಸಕ ಶಿವಲಿಂಗೇಗೌಡರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಆರ್.ಎಸ್.ಟಿ. ಸುನಿ, ಸಿದ್ದೇಶ್, ಗಿರೀಶ್, ಸೋಮಣ್ಣ, ರೇವಣ್ಣ, ಕೆಪಿಸಿ ದಿವ್ಯ, ಗಿರೀಶ್ , ಆನಂದ್, ಕಿಟ್ಟಿ, ಕಲ್ಲಳ್ಳಿ ಸಚ್ಚಿ, ಶ್ರೀಶೈಲ ಸೇರಿದಂತೆ ಅನೇಕ ವ್ಯಾಪಾರಿಗಳು ಉಪಸ್ಥಿತರಿದ್ದರು.