ಕಲಾ ತಂಡದಿಂದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಹತ್ವ, ಆರೋಗ್ಯ, ಶಿಕ್ಷಣ ಕುರಿತು ವಿವಿಧ ಜಾನಪದ ಗೀತೆಗಳು
ಕೊಪ್ಪಳ: ರಾಜ್ಯದಲ್ಲಿ ಪ್ರಸ್ತುತ ಸರ್ಕಾರ ಬಂದ ಬಳಿಕ ಬಡಜನರ ನಾಡಿಮಿಡಿತ ಅರಿತು ಸರ್ವರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದು ಮಹತ್ವದ ಕಾರ್ಯ ಮಾಡಿದೆ. ವಿಶೇಷವಾಗಿ ದೇಶದಲ್ಲಿಯೇ ಈ ರೀತಿಯ ಬಡವರ ಯೋಜನೆ ಜಾರಿಗೆ ತಂದಿರುವುದು ಪ್ರಥಮ ಎನ್ನಬಹುದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಚನ್ನಯ್ಯ ಹಿರೇಮಠ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಕುಷ್ಟಗಿಯ ಡಾ.ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಕಲಾತಂಡದವರು ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಚಾರ ಸಾಂಸ್ಕೃತಿಕ ಕಾರ್ಯಕ್ರಮ ತಮಟೆ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಗ್ರಾಮದ ಜಿಲಾನಿ ಸಾಹೇಬ್, ಮಂಜು ಹುಲಸಗೇರಿ ಭಾಗವಹಿಸಿದ್ದರು. ಮಹಿಳಾ ಮಂಡಳದ ಗಂಗಮ್ಮ ಹಿರೇಮನಿ, ಮೀನಾಕ್ಷಮ್ಮ, ಪಾರವ್ವ,ರತ್ನಮ್ಮ ಉಪಸ್ಥಿತರಿದ್ದರು.
ನಂತರ ಕಲಾ ತಂಡದಿಂದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಹತ್ವ, ಆರೋಗ್ಯ, ಶಿಕ್ಷಣ ಕುರಿತು ವಿವಿಧ ಜಾನಪದ ಗೀತೆಗಳು ಹಾಗೂ ಸಂಭಾಷಣೆಯ ಮೂಲಕ ಪ್ರಸ್ತುತಪಡಿಸಿ ಜನ-ಮನರಲ್ಲಿ ಜಾಗೃತಿ ಮೂಡಿಸಿದರು.ಕಲಾತಂಡದಲ್ಲಿ ನಿಂಗಪ್ಪ ಸೊಲ್ಲಾಪೂರ, ರಾಮಣ್ಣ ಮುರಡಿ, ಗೌರಮ್ಮ ಕುರಿ ಭಾಗವಹಿಸಿದ್ದರು. ಗಂಗಾವತಿ ತಾಲೂಕಿನ ವಿವಿಧ 20 ಗ್ರಾಮಗಳಲ್ಲಿ ಕಲಾತಂಡವು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಸರ್ಕಾರದ ಯೋಜನೆಗಳ ಕುರಿತು ಜಾನಪದ ಗೀತೆಗಳು ಮತ್ತು ಸಂಭಾಷಣೆಯ ಮೂಲಕ ಜಾಗೃತಿ ಮೂಡಿಸುತ್ತಿದೆ.