ರಾಮನಗರ: ನಗರದ ಅದಿದೇವತೆ ಶ್ರೀ ಬಂಡಿಮಹಂಕಾಳಿ ಅಮ್ಮನವರ ಕರಗ ದಿನವಾದ ಮಂಗಳವಾರ ಇದೇ ಮೊದಲ ಬಾರಿಗೆ ಜಿಲ್ಲಾ ಪೋಲಿಸ್ ಇಲಾಖೆ ವತಿಯಿಂದ ''''''''ಗಾರ್ಡ್ ಆಫ್ ಆನರ್'''''''' (ಗೌರವ ಸಮರ್ಪಣೆ) ಸಲ್ಲಿಸಿ, ಪೂಜೆ ನೆರವೇರಿಸಲಾಯಿತು.
ಜಿಲ್ಲಾ ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳು ಹಾಗೂ ಸಿಬ್ಬಂದಿ ಸಮವಸ್ತ್ರ ಧರಿಸಿ ಅಮ್ಮನವರಿಗೆ ಗೌರವ ಸಮರ್ಪಣೆ ಮಾಡಿದರು. ಬಂದೂಕುಗಳನ್ನು ಹಿಡಿದು ದೇವಿಗೆ ''''''''ಗಾರ್ಡ್ ಆಫ್ ಆನರ್'''''''' ಮಾಡಿದ್ದು ಪ್ರಮುಖ ಆಕರ್ಷಣೆಯಾಗಿತ್ತು.ಭಕ್ತರ ನಂಬಿಕೆಯ ಕ್ಷೇತ್ರಗಳಲ್ಲಿ ಮಂಡಿಪೇಟೆ ಯಲ್ಲಿರುವ ಶ್ರೀ ಬಂಡಿಮಹಂಕಾಳಿ ಅಮ್ಮ ದೇವಾಲಯ ಒಂದಾಗಿದೆ. ಮಂಗಳವಾರ ನಡೆಯುವ ಕರಗಕ್ಕೂ ಮುನ್ನಾ ಮಧ್ಯಾಹ್ನ ದೇವಾಲಯದಲ್ಲಿ ಗೌರವ ಸಮರ್ಪಣೆ ಸಲ್ಲಿಸಿದ ಕಾರ್ಯಕ್ಕೆ ದೇವಿಯ ಅಪಾರ ಭಕ್ತರು, ಸಾರ್ವಜನಿಕರು ಮತ್ತು ದೇವಾಲಯ ಸಮಿತಿಯ ವಲಯದಲ್ಲಿ ಪ್ರಶಂಸೆ ವ್ಯಕ್ತವಾಯಿತು.
ಪೊಲೀಸ್ ಪಡೆ ಮತ್ತು ಧಾರ್ಮಿಕ ಆಚರಣೆಯ ನಡುವಿನ ಈ ವಿಶಿಷ್ಟ ಬಾಂಧವ್ಯವು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಬ್ರಿಟಿಷರ ಕಾಲದಿಂದಲೂ ಬಂಡಿಮಹಂಕಾಳಿಯನ್ನು ನಗರದ ರಕ್ಷಕಿ ಹಾಗೂ ಪೊಲೀಸ್ ಇಲಾಖೆಯ ಕಾವಲು ದೇವತೆಯೆಂದು ಭಾವಿಸಿಕೊಂಡು ಬರಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಗರವನ್ನು ಹಾಗೂ ಕಾನೂನು ಸುವ್ಯವಸ್ಥೆಯನ್ನು ರಕ್ಷಿಸುವಂತೆ ಪ್ರಾರ್ಥಿಸಿ, ಇಲಾಖೆಯ ವತಿಯಿಂದ ಈ ಭಕ್ತಿ ಪೂರ್ವಕ ಗೌರವವಾಗಿದೆ.ಬಂಡಿ ಮಹಂಕಾಳಿ ದೇವಿಯ ಕರಗದ ವಿಶೇಷ ಪೂಜೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ದೇಶದ ಮುಖ್ಯಸ್ಥರು, ರಾಜಕಾರಣಿಗಳು ಅಥವಾ ಸೇನಾ ಪ್ರಮುಖರಿಗೆ ನೀಡಲಾಗುವ ಗೌರವವನ್ನು ದೈವಿಕ ಶಕ್ತಿಗೆ ಅರ್ಪಿಸಿರುವುದು ಈ ಕ್ಷೇತ್ರದ ಮಹಿಮೆ ಮತ್ತು ಪರಂಪರೆಯನ್ನು ಎತ್ತಿಹಿಡಿಯುತ್ತದೆ.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಡಿವೈಎಸ್ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕ ರಮೇಶ್, ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ತನ್ವೀರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
28ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಬನ್ನಿ ಮಹಂಕಾಳಿ ದೇವಾಲಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮತ್ತು ಸಿಬ್ಬಂದಿ ಗೌರವ ಸಮರ್ಪಣೆ ಮಾಡಿದರು.