ಗುಂಡ್ಲುಪೇಟೆ ತಾಲೂಕು ತೀವ್ರ ಪೀಡಿತ ಎಂದು ರಾಜ್ಯ ಸರ್ಕಾರ ಇತ್ತೀಚಿಗೆ ಘೋಷಣೆ ಮಾಡಿರುವ ಬೆನ್ನಲ್ಲೆ ಉಪಮುಖ್ಯಮಂತ್ರಿಗಳೂ ಆದ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್‌ ಕೇವಲ ೧ ಗಂಟೆ ೮ ನಿಮಿಷದ ಅವಧಿಯಲ್ಲಿ ಬರ ವೀಕ್ಷಣೆಯನ್ನೇ ಮುಗಿಸಿ ಚಾಮರಾಜನಗರ ತಾಲೂಕಿನತ್ತ ತೆರಳಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ತಾಲೂಕು ತೀವ್ರ ಪೀಡಿತ ಎಂದು ರಾಜ್ಯ ಸರ್ಕಾರ ಇತ್ತೀಚಿಗೆ ಘೋಷಣೆ ಮಾಡಿರುವ ಬೆನ್ನಲ್ಲೆ ಉಪಮುಖ್ಯಮಂತ್ರಿಗಳೂ ಆದ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್‌ ಕೇವಲ ೧ ಗಂಟೆ ೮ ನಿಮಿಷದ ಅವಧಿಯಲ್ಲಿ ಬರ ವೀಕ್ಷಣೆಯನ್ನೇ ಮುಗಿಸಿ ಚಾಮರಾಜನಗರ ತಾಲೂಕಿನತ್ತ ತೆರಳಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಾಲೂಕಿನ ಹಿರೀಕಾಟಿ ಗೇಟ್‌ ಬಳಿ ಆಗಮಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಜಿಲ್ಲಾಧಿಕಾರಿ ಶ್ರೀರೂಪ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಸ್ವಾಗತಿಸಿದರು.‌

ನಂತರ ಬೇಗೂರು-ಹೆಡಿಯಾಲ ಕ್ರಾಸ್‌ ಬಳಿ ರೈತಸಂಘದ ಕಾರ್ಯಕರ್ತರನ್ನು ಡಿಸಿಎಂ ಡಾ.ಜಿ.ಪರಮೇಶ್ವರ್‌ ಭೇಟಿ ಮಾಡಿ ರೈತರ ಮನವಿ ಸ್ವೀಕರಿಸಿದರು.ನಂತರ ಸೋಮಹಳ್ಳಿ ಬಳಿ ರೈತರ ಜಮೀನಿಗೆ ತೆರಳಿ ಒಣಗಿದ ಜೋಳದ ಫಸಲು ವೀಕ್ಷಿಸಿದರು.ನಂತರ ಹಾಲಹಳ್ಳಿ ಮಾರ್ಗ ನಿಟ್ರೆ ಬಳಿ ಸೂರ್ಯಕಾಂತಿ ಗೆ ಭೇಟಿ ನೀಡಿದರು.

ಸಾಲ ಮಾಡಿದ್ದೀಯಾ?:

ತಾಲೂಕಿನ ಸೋಮಹಳ್ಳಿ ಬಳಿ ಮಳೆ ಇಲ್ಲದೆ ಸಂಪೂರ್ಣವಾಗಿ ನಾಶವಾದ ಸೂರ್ಯಕಾಂತಿ ಬೆಳೆ ಕಳೆದುಕೊಂಡ ರೈತರ ಬಳಿ ಡಿಸಿಎಂ ಮಾಹಿತಿ ಕಲೆ ಹಾಕಿದ ಬಳಿಕ ಸಾಲ ಮಾಡಿದ್ದೀಯಾ ಎಂದು ರೈತನನ್ನು ಸಚಿವರು ಕೇಳಿದಾಗ ಉತ್ತರಿಸಿದ ರೈತ ಸಾಲ ಮಾಡಿ ಬೆಳೆ ಬೆಳೆದಿದ್ದೆ ಬೆಳೆ ಕೈ ಹಿಡಿಯಲಿಲ್ಲ ಹಸುಗಳಿಗೆ ಮೇವು ಸಿಗ್ತಾಯಿಲ್ಲ. ಹಸುಗಳನ್ನ ಮಾರಿದ್ದೇನೆ ಸರ್ ಎಂದು ಅಳಲು ತೋಡಿಕೊಂಡರು.

ನಂತರ ನಿಟ್ರೆ ಗ್ರಾಮಕ್ಕೆ ತೆರಳಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಕೂಲಿ ಕಾರ್ಮಿಕರ ಜೊತೆ ಕೆಲ ಕ್ಷಣ ಮಾತನಾಡಿ ಈಗ ೧೦ ಕೆಜಿ ಅಕ್ಕಿ ಕೊಡುತ್ತಿವಲ್ಲ,ಸಾಕಾಗಲ್ವ? ಎಂದು ಪ್ರಶ್ನಿಸಿದರು.

ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ, ಹಾಲಹಳ್ಳಿ ಹಾಗೂ ನಿಟ್ರೆ ಗ್ರಾಮದ ಬಳಿ ಬರ ಅಧ್ಯಯನ ನಡೆಸಿದ ಬಳಿಕ ಡಿಸಿಎಂ ಡಾ.ಜಿ.ಪರಮೇಶ್ವರ್‌ ಚಾಮರಾಜನಗರ ತಾಲೂಕಿನತ್ತ ತೆರಳಿದರು.

ರೈತರಿಗೆ ಸಹಾಯಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುವೆ

ಗುಂಡ್ಲುಪೇಟೆ ತಾಲೂಕಿನಲ್ಲಿ ಭೀಕರವಾದ ಬರದ ಪರಿಸ್ಥಿತಿ ಎದುರಾಗಿದ್ದು,ಬರ ಅಧ್ಯಯನ ನಡೆಸಿ ರೈತರಿಗೆ ಯಾವ ರೀತಿ ಸಹಾಯ ಮಾಡಬೇಕು ಎಂದು ಸರ್ಕಾರಕ್ಕೆ ವರದಿ ಸಲ್ಲಿಸುವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ಹೇಳಿದರು.

ಮಲೆಯೂರಲ್ಲಿ ಮಾತನಾಡಿದ ಅವರು, ತಾಲೂಕಿನ ಕೆಲ ರೈತರು ವಿಮೆ ಮಾಡಿಸಿದ್ದಾರೆ ಇನ್ನು ಕೆಲವರು ವಿಮೆಯನ್ನ ಮಾಡಿಸಿಲ್ಲ.ನಾನು ಈಗ ಬರ ಅದ್ಯಯನ ನಡೆಸಿ ರೈತರಿಗೆ ಯಾವ ರೀತಿ ಸಹಾಯ ಮಾಡ್ಬೇಕು ಅಂತ ಸರ್ಕಾರಕ್ಕೆ ವರದಿ ಸಲ್ಲಿಸುವೆ ಎಂದರು.

ಕೇಂದ್ರ ಸರ್ಕಾರಕ್ಕೆ ಮತ್ತೆ ಈಗ ಮನವಿ ಮಾಡಿಕೊಳ್ಳುತ್ತೇನೆ.ಈ ವರ್ಷ ಕೂಡ ಹೆಚ್ಚು ನಷ್ಟ ಆಗಿದೆ ಹಾಗಾಗಿ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡುತ್ತೇನೆ ಎಂದರು.

ಬರ ಅಧ್ಯಯನದಲ್ಲಿ ನಂಜನಗೂಡು ಶಾಸಕ ದರ್ಶನ್‌, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ,ಕಾಡ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್.ಶಿವನಾಗಪ್ಪ, ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್‌, ತಹಸೀಲ್ದಾರ್‌ ಎಂ.ಎಸ್.ತನ್ಮಯ್‌, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಡಿಸಿಎಂ ಬರ ಅಧ್ಯಯನ ನಡೆದದ್ದು ಹೀಗೆ….

ಗುಂಡ್ಲುಪೇಟೆ : ಬರ ಅಧ್ಯಯನಕ್ಕೆ ಕಂದಾಯ ಹಾಗು ಡಿಸಿಎಂ ಡಾ.ಜಿ.ಪರಮೇಶ್ವರ್‌ ನಂಜನಗೂಡು ಕಡೆಯಿಂದ ಗುಂಡ್ಲುಪೇಟೆ ತಾಲೂಕಿನ ಗಡಿಯಾದ ಹೀರಿಕಾಟಿ ಗೇಟ್‌ ಬಳಿ ಬಂದಾಗ ಬುಧವಾರ ಬೆಳಗ್ಗೆ ೧೧.೨೮ ನಿಮಿಷಕ್ಕೆ ಆಗಮಿಸಿದರು.

ನಂತರ ರೈತಸಂಘದ ಕಾರ್ಯಕರ್ತರ ಭೇಟಿ,ನಂತರ ಸೋಮಹಳ್ಳಿ,ಹಾಲಹಳ್ಳಿ ಬಳಿ ಜಮೀನಿಗೆ ಭೇಟಿಯಾದ ಬಳಿಕ ನಿಟ್ರೆ ಗ್ರಾಮದ ಬಳಿ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ಹಾಗೂ ಒಣಗಿದ ಜಮೀನಿನ ರೈತರೊಂದಿಗೆ ಕೆಲ ಕ್ಷಣ ಮಾತನಾಡಿದ ಬಳಿಕ ನಿಟ್ರೆಯಿಂದ ಚಾಮರಾಜನಗರ ತಾಲೂಕಿನ ಗ್ರಾಮಗಳಿಗೆ ತೆರಳಿದಾಗ (ನಿಟ್ರೆ ಬಿಟ್ಟಾಗ) ಮಧ್ಯಾಹ್ನ ೧೨.೩೬ ನಿಮಿಷ.

ತಾಲೂಕಿನಲ್ಲಿ ಮಳೆ ಬೀಳದ ಕಾರಣ ಬಿತ್ತನೆ ಮಾಡಿದ ಫಸಲು ಒಣಗಿದೆ.ಕುಡಿಯುವ ನೀರು,ಜಾನುವಾರುಗಳಿಗೆ ಮೇವಿಗೆ ತೊಂದರೆಯಾಗಿದೆ.ರೈತ ಸಂಕಷ್ಟದಲ್ಲಿದ್ದಾನೆ ಇಂಥ ಸಮಯದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಮಾತ್ರ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬರ ಅಧ್ಯಯನ ನಡೆಸಿದ್ದು ಮಾತ್ರ ಕೇವಲ ೧ ಗಂಟೆ ೮ ನಿಮಿಷ ಮಾತ್ರ.