ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕರಿಂದ ವಾಕ್‌ಪ್ರಹಾರ । ಕ್ಷೇತ್ರದ ಸಮಸ್ಯೆಗಳ ಬಗ್ಗೆ ಶಾಸಕರಿಂದ ಕಡೆಗಣನೆ: ಬಿಜೆಪಿ ಜಿಲ್ಲಾಧ್ಯಕ್ಷ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳು ಮಿತಿ ಮೀರಿ ನಡೆಯುತ್ತಿದೆ. ಸ್ಥಳೀಯ ಶಾಸಕರು ಭ್ರಷ್ಟಾಚಾರ ಹಾಗೂ ಅಕ್ರಮ ಚಟುವಟಿಕೆಗಳ ತಡೆಯಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್‌. ನಿರಂಜನ ಕುಮಾರ್‌ ಆರೋಪಿಸಿದರು.ಪಟ್ಟಣದ ಸಿಎಂಎಸ್‌ ಕಲಾಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಕಚೇರಿ ಸೇರಿದಂತೆ ಎಲ್ಲೂ ಹಣ ಕೊಡದೆ ಜನರ ಕೆಲಸಗಳು ನಡೆಸುತ್ತಿಲ್ಲ. ಗುಂಡ್ಲುಪೇಟೆ ಭ್ರಷ್ಟಾಚಾರದ ಕೂಪವಾಗಿದೆ ಎಂದು ಆಪಾದಿಸಿದರು.ಇನ್ನೂ ಪಟ್ಟಣದಲ್ಲಿ ಗಾಂಜಾ, ಡ್ರಗ್ಸ್‌, ಕೇರಳ ಲಾಟರಿ ಎಗ್ಗಿಲ್ಲದೆ ನಡೆಯುತ್ತಿದೆ. ಜಾನುವಾರುಗಳು ಸಹ ಕೇರಳದ ಕಸಾಯಿಖಾನೆಗೆ ಕದ್ದು ಮುಚ್ಚಿ ಹೋಗುತ್ತಿವೆ. ಕಾಂಗ್ರೆಸ್‌ ಸರ್ಕಾರದ ಅನ್ನಭಾಗ್ಯದ ಅಕ್ಕಿ ದಂಧೆ ನಡೆಯುತ್ತಿದೆ. ಇಷ್ಟೆಲ್ಲ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಶಾಸಕ ಮಾತ್ರ ಸೊಲ್ಲು ಎತ್ತುತ್ತಿಲ್ಲ ಎಂದು ದೂರಿದರು.ಶುಕ್ರವಾರ ಮಹದೇವ ಪ್ರಸಾದ್‌ ನಗರದ ಬಳಿ ನೂರು ಮೂಟೆಯಷ್ಟು ಅನ್ನ ಭಾಗ್ಯ ಅಕ್ಕಿ ಇದ್ದರೂ ಕೇಸು ದಾಖಲಿಸಲು ಸತಾಯಿಸಿದ್ದಾರೆ. ಕೊನೆಗೆ ಆಹಾರ ಉಪ ನಿರ್ದೇಶಕರಿಗೆ ಮಾತನಾಡಿದ ಮೇಲೆ ಎಫ್‌ಐಆರ್‌ ದಾಖಲಿಸಲು ಮುಂದಾಗಿದ್ದಾರೆ ಎಂದು ಅಕ್ಕಿ ದಂಧೆ ಯಾವ ಪ್ರಮಾಣದಲ್ಲಿದೆ ಎಂದು ಪ್ರಶ್ನಿಸಿದರು.

ದ್ರೋಹ ಮಾಡಿದ ಹಾಗೆ:ಕಾಂಗ್ರೆಸ್‌ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ರಾಜ್ಯದ ಬಡ ಜನರಿಗೆ ನೀಡುವ ಅಕ್ಕಿಯಲ್ಲೂ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ಕಾಂಗ್ರೆಸ್‌ ಸರ್ಕಾರ ಉಚಿತ 5 ಕೆಜಿ ಅಕ್ಕಿ ನೀಡುತ್ತಿದೆ. ಆದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಮಾರಾಟವನ್ನು ಶಾಸಕರು ತಡೆಯದೇ ಇದ್ದರೆ ಬಡ ಜನರಿಗೆ ನೀವೇ ಮೋಸ ಮಾಡಿದ ಹಾಗೆ ಎಂದು ವಾಗ್ದಾಳಿ ನಡೆಸಿದರು.ರೈತರ,ಬಡವರ ಶಾಪ ತಟ್ಟುತ್ತದೆ?ಶಾಸಕರ ನಿರ್ಲಕ್ಷತನ, ಬೇಜವಬ್ದಾರಿ ಫಲವಾಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಲ್ಲ. ರೈತರು ಲಕ್ಷಾಂತರ ಭೂಮಿಗೆ ಹಾಕಿ ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಹಾಗೂ ಬಡವರ ನಿಮಗೆ ತಟ್ಟುತ್ತದೆ ಎಂದು ಎಚ್ಚರಿಸಿದರು.ನಾನು ಶಾಸಕನಾದ ನಂತರ 3 ವರ್ಷಗಳ ಕಾಲ ಕೆರೆಗಳಿಗೆ ನೀರು ತುಂಬಿಸಿದೆ. ಕಲ್ಕಟ್ಟೆ ಕೆರೆ ಸೇರಿದಂತೆ ಹಲವು ಕೆರೆಗಳು ಕೋಡಿ ಬಿದ್ದವು. ನೀವು ಶಾಸಕರಾಗಿ ನಾಲ್ಕನೇ ಕಾಲಿಟ್ಟರೂ ಕೆರೆ ತುಂಬಿಸುವ ಯೋಜನೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಆಗಲಿಲ್ಲ ಎಂದರು.ನಾಟಕ:ರೈತರು, ರೈತ ಸಂಘಟನೆಗಳು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಹೋರಾಟ ನಡೆಸಿವೆ. ಬಿಜೆಪಿ ಕೂಡ ರಾಜ್ಯ ಮಟ್ಟದ ನಾಯಕರ ಕರೆಯಿಸಿ ಪಾದಯಾತ್ರೆ ನಡೆಸಿದ ಬಳಿಕ ನೀರು ಬಿಡುವ ನಾಟಕ ಆಡಿದಿರಿ. ಕೆರೆಗೆ ನೀರು ಬಿಟ್ಟೆವು ಅಂತ ಪೋಸು ಕೊಟ್ಟಿರಿ. ನಾಲ್ಕೇ ದಿನಕ್ಕೆ ನೀರು ನಿಂತು. ಈಗ ಒಂದು ವಾರ ಬಿಟ್ಟರೆ ಒಂದು ವಾರ ನಿಲ್ಲುತ್ತೇ. ಇದು ಕೆರೆಗಳಿಗೆ ನೀರು ಬಿಡುವ ನಾಟಕ ಆಡುತ್ತಿದ್ದಿರಾ ಎಂದು ಸ್ಥಳೀಯ ಶಾಸಕರ ಹೆಸರೇಳದೇ ಕುಟುಕಿದರು.

ಪತ್ರಿಕಾಗೋಷ್ಟಿಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಸಿ. ಮಹದೇವ ಪ್ರಸಾದ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕನ್ನೇಗಾಲ ಸ್ವಾಮಿ, ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಡಾ. ನವೀನ್‌ ಮೌರ್ಯ, ಮಂಡಲ ಮಾಜಿ ಅಧ್ಯಕ್ಷ ಎಲ್. ಸುರೇಶ್‌, ತಾಪಂ ಮಾಜಿ ಸದಸ್ಯ ಕೆ.ಎಸ್. ರೇವಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ, ಸುನೀಲ್‌, ಮುಖಂಡರಾದ ದೇವರಳ್ಳಿ ನಾಗೇಂದ್ರ, ಮಂಜು ಇದ್ದರು.---ಶಾಸಕರೇ ಮೊದಲು ಹುಡುಗಾಟಿಕೆತನ ಬಿಡಿ: ನಿರಂಜನ್‌ಗುಂಡ್ಲುಪೇಟೆ: ಶಾಸಕರೇ ಮೊದಲು ಹುಡುಗಾಟಿಕೆ ಬಿಟ್ಟು, ಗಂಭೀರವಾಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿ ಎಂದು ಮಾಜಿ ಶಾಸಕರು ಹಾಲಿ ಶಾಸಕ ಎಚ್‌.ಎಂ. ಗಣೇಶ್‌ ಪ್ರಸಾದ್‌ರಿಗೆ ಸಲಹೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಡುಗುತನ, ಹುಡುಗಾಟಿಕೆ ಮೊದಲು ಬಿಡಿ. ತಾಲೂಕಿನ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವುದು, ಭ್ರಷ್ಟಾಚಾರ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ನಿಮ್ಮ ಜವಬ್ದಾರಿ ಎಂದರು.ನೀವೇ ಹೊಣೆ:ರೈತರು ಮಳೆ-ಬೆಳೆ ಇಲ್ಲದೆ ಹಾಗೂ ಕೆರೆಗಳಲ್ಲಿ ನೀರಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವೇಳೆ ರೈತರು ಬೀದಿಗೆ ಬಿದ್ದರೇ ಖಂಡಿತ ನೀವೇ ಜವಾಬ್ದಾರರಾಗುತ್ತೀರಿ. ಇನ್ನೂ ಕಾಲ ಮಿಂಚಿನ ಕೆಲಸ ಮಾಡಿ ಎಂದರು.---೨೭ಜಿಪಿಟಿ೧


ಗುಂಡ್ಲುಪೇಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಿ.ಎಸ್‌. ನಿರಂಜನ ಕುಮಾರ್‌ ಮಾತನಾಡಿದರು.