ಸಾರಾಂಶ
ವರ್ಷದಲ್ಲಿ ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ಅವರಿಗೆ ಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿ ಘೋಷಣೆಯಾಗಿದೆ. ಪ್ರಶಸ್ತಿಯನ್ನು ನವೆಂಬರ್ನಲ್ಲಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನೀಡಿ ಗೌರವಿಸಲಾಗುವುದು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಯಕ್ಷಗಾನ ಕೇಂದ್ರ ಮತ್ತು ಶ್ರೀ ವಾದಿರಾಜ ವನಂ ಸಹಯೋಗದಲ್ಲಿ ಕೊಡಮಾಡುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿಯನ್ನು ೨೦೨೪ನೇ ವರ್ಷದಲ್ಲಿ ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು ೧೦,೦೦೦ ರು. ನಗದನ್ನು ಒಳಗೊಂಡಿರುತ್ತದೆ.ಪ್ರಶಸ್ತಿಯನ್ನು ನವೆಂಬರ್ನಲ್ಲಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಡಗುತಿಟ್ಟು ಯಕ್ಷಗಾನ ಪ್ರಪಂಚದಲ್ಲಿ ಬಣ್ಣದ ವೇಷಧಾರಿಯಾಗಿ ಖ್ಯಾತರಾಗಿರುವ ಜಗನ್ನಾಥ ಆಚಾರ್ಯರು, ಬ್ರಹ್ಮಾವರ ತಾಲೂಕಿನ ಎಳ್ಳಂಪಳ್ಳಿ ಎಂಬಲ್ಲಿ ೧೯೫೬ರಲ್ಲಿ ಜನಿಸಿದರು. ೫ನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, ಉಡುಪಿ ಬಸವ, ವಂಡ್ಸೆ ನಾರಾಯಣ ಗಾಣಿಗ, ಪೇತ್ರಿ ಮಾಧವ ನಾಯ್ಕ್ ಅವರಿಂದ ಪ್ರಾಥಮಿಕ ನೃತ್ಯಾಭ್ಯಾಸ ಮಾಡಿ ಬಾಲಗೋಪಾಲನಾಗಿ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ನಂತರ ಉಡುಪಿ ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ಯಕ್ಷಗಾನ ವಿದ್ಯೆ ಕಲಿತು, ಕೇಂದ್ರದ ಕಾಯಂ ಸದಸ್ಯರಾಗಿ ಗುರು ವೀರಭದ್ರ ನಾಯಕ್, ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲ ರಾವ್, ಮಹಾಬಲ ಕಾರಂತ, ವೆಂಕಟರಮಣ ಗಾಣಿಗ ಮುಂತಾದವರಿಂದ ತಾಳ, ಹೆಜ್ಜೆಗಾರಿಕೆಯಲ್ಲಿ ಪರಿಪೂರ್ಣತೆ ಸಾಧಿಸಿದರು.ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ ವೃತ್ತಿ ಮೇಳದಲ್ಲಿ ೩೫ ವರ್ಷ ತಿರುಗಾಟ ನಡೆಸಿದ ಆಚಾರ್ಯರು, ಕೋಟ ಶಿವರಾಮ ಕಾರಂತರಲ್ಲಿ ಸಾಂಪ್ರದಾಯಿಕ ಶೈಲಿಯ ಬಣ್ಣದ ಮುಖವರ್ಣಿಕೆ, ಒಡ್ಡೋಲಗ ಕ್ರಮ, ವೇಷಭೂಷಣ ನಡೆಗಳ ಕುರಿತಾದ ಸಮಗ್ರ ಅಧ್ಯಯನ ನಡೆಸಿ ಕಾರಂತರೊಂದಿಗೆ ರಷ್ಯಾ, ದುಬೈ, ಅಬುಧಾಬಿ ಸಹಿತ ವಿವಿಧ ರಾಷ್ಟ್ರಗಳಲ್ಲಿ ತಿರುಗಾಟ ನಡೆಸಿದರು.
ಶೂರ್ಪನಖಾ, ರಾವಣ, ಹಿಡಿಂಬಾ ಮುಂತಾದ ಬಣ್ಣದ ವೇಷಗಳು ಆಚಾರ್ಯರಿಗೆ ಕೀರ್ತಿ ತಂದಿವೆ. ಅವರ ಕಲಾಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಗೋರ್ಪಾಡಿ ವಿಠಲ ಪಾಟೀಲ ಪ್ರಶಸ್ತಿ ಸಹಿತ ಹಲವಾರು ಸಂಮಾನಗಳು ಸಂದಿವೆ.