ಗುತ್ತಲ: ಗುತ್ತಲ ರೈತನೋರ್ವ ಸಾಲಕ್ಕೆ ಹೆದರಿ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಮೃತ ರೈತನನ್ನು ಶಿವನಗರ (ಗುತ್ತಲ ತಾಂಡಾ)ದ ಈರಪ್ಪ ದೇವಲೆಪ್ಪ ಲಮಾಣಿ (51) ಎಂದು ತಿಳಿದು ಬಂದಿದೆ.

ಮೃತ ರೈತನು ವ್ಯವಸಾಯಕ್ಕೆಂದು ಗುತ್ತಲ ಕೆವಿಜಿ ಬ್ಯಾಂಕಿನಲ್ಲಿ 1.50.000 ರು.ಗಳ ಬೆಳೆ ಸಾಲ, ಗ್ರಾಮದಲ್ಲಿ ಕೈಗಡ 2 ಲಕ್ಷ ಹಾಗೂ ಆದರ್ಶ ಸಂಘದಲ್ಲಿ 20 ಸಾವಿರ ರು.ಗಳ ಸಾಲವನ್ನು ಮಾಡಿಕೊಂಡಿದ್ದು, ಜಮೀನಿನಲ್ಲಿ ಹಾಕಿದ್ದ ಗೋವಿನಜೋಳ, ಮೆಣಸಿನಕಾಯಿ ಮತ್ತು ಕ್ಯಾಬೀಜ ಬೆಳೆಗಳು ಸರಿಯಾಗಿ ಉತ್ಪನ್ನ ಬಾರದೆ ಮಾಡಿದ ಸಾಲವನ್ನು ತೀರಿಸಲಾಗದೆ ಚಿಂತೆಯಲ್ಲಿದ್ದ ಎಂದು ಮೃತ ರೈತನ ಪತ್ನಿ ಪ್ರೇಮಾ ಈರಪ್ಪ ಲಮಾಣಿ ದೂರಿನಲ್ಲಿ ತಿಳಿಸಿದ್ದಾಳೆ.

ಮಂಗಳವಾರ ಮಧ್ಯಾಹ್ನ 2-30 ಗಂಟೆಯಿಂದ 2-50 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾವುದೊ ವಿಷಕಾರಿ ಎಣ್ಣೆಯನ್ನು ಸೇವಿಸಿ ಒದ್ದಾಡುತ್ತಿದ್ದವನಿಗೆ ಗುತ್ತಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಹೋಗುತ್ತಿರುವಾಗ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿದು ಬಂದಿದೆ. ಈ ಕುರಿತಂತೆ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.