ಬಿ. ಶೇಖರ್‌ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಈ ಹಿಂದೆ ಶಾಲಾ ಜಗುಲಿ ಹಾಗೂ ತರಗತಿ ಕೊಠಡಿಯಲ್ಲಿ ತಯಾರಾಗುತ್ತಿತ್ತು, ಅದಕ್ಕೆ ಮುಕ್ತಿ ನೀಡುವ ದೃಷ್ಟಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮ- ನರೇಗಾ) ಯೋಜನೆಯಡಿ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಹಲವು ಶಾಲೆಗಳಲ್ಲಿ ಸುಸಜ್ಜಿತ ಹಾಗೂ ಶಾಶ್ವತ ಅಡುಗೆ ಕೋಣೆಗಳನ್ನು ನಿರ್ಮಿಸಲಾಗಿದೆ.ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2022- 2023, 2023- 2024 ಹಾಗೂ 2024- 2025ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಒಟ್ಟು 10 ಶಾಲಾ ಅಡುಗೆ ಕೋಣೆ ಕಾಮಗಾರಿಗಳನ್ನು ಅನುಮೋದನೆ ಪಡೆದುಕೊಂಡು ಗ್ರಾಮ ಪಂಚಾಯಿತಿಗಳಿಂದ ಅನುಷ್ಠಾನ ಮಾಡಲಾಗಿದೆ. 10 ಅಡುಗೆ ಕೋಣೆಗಳ ಪೈಕಿ 7 ಪೂರ್ಣಗೊಂಡಿದ್ದು, 3 ಕಾಮಗಾರಿಗಳು ತಳಪಾಯ ಹಂತದಲ್ಲಿವೆ. ಅಡುಗೆ ಕೋಣೆಗಳನ್ನು 5.25 ರಿಂದ 5.50 ಲಕ್ಷ ರೂ. ಅಂದಾಜು ವೆಚ್ಚಗಳಲ್ಲಿ ಒಟ್ಟು 52.75 ಲಕ್ಷ ರೂ. ಅನುದಾನದಲ್ಲಿ ಕೈಗೊಳ್ಳಲಾಗಿದೆ. 5.97 ಲಕ್ಷ ಕೂಲಿ ಹಾಗೂ 24.71 ಲಕ್ಷ ಸಾಮಗ್ರಿ ವೆಚ್ಚವಾಗಿದೆ. ಈ ಕಾಮಗಾರಿಗಳಿಂದ 1840 ಮಾನವ ದಿನಗಳನ್ನು ಸೃಜನೆ ಮಾಡಲಾಗಿದ್ದು, ಅಡುಗೆ ಕೋಣೆಯ ನಿರ್ಮಾಣದ ವೇಳೆ ಸ್ಥಳೀಯ ಗ್ರಾಮೀಣ ಜನರಿಗೆ ಮತ್ತು ಶಾಲಾ ಮಕ್ಕಳ ಪೋಷಕರಿಗೆ ಉದ್ಯೋಗ ದೊರೆತಿದೆ. ಎಲ್ಲೆಲ್ಲಿ ನಿರ್ಮಾಣ?ತಾಲೂಕಿನ ಅಣ್ಣೂರು ಗ್ರಾಪಂ ವ್ಯಾಪ್ತಿಯ ನಂಜನಾಯಕನಹಳ್ಳಿ ಗಿರಿಜನ ಕಾಲೋನಿ, ಟೈಗರ್ ಬ್ಲಾಕ್ ಹಾಗೂ ಬೀಚನಹಳ್ಳಿ ಗ್ರಾಪಂ ವ್ಯಾಪ್ತೀಯ ಮಾಗುಡಿಲು ಮತ್ತು ರಾಮೇನಹಳ್ಳಿ, ಚಕ್ಕೋಡನಹಳ್ಳಿ ಗ್ರಾಪಂ ಅಗಸನಹುಂಡಿ, ಸೋನಹಳ್ಳಿ ಹಾಡಿ ಹಾಗೂ ಕಂಚಮಳ್ಳಿ ಗ್ರಾಪಂ ದಾಳೇಗೌಡನಹುಂಡಿ ಸರ್ಕಾರಿ ಶಾಲೆಗಳಲ್ಲಿ ಅಡುಗೆ ಕೊಠಡಿ ಕಾಮಗಾರಿಗಳು ಪೂರ್ಣಗೊಂಡಿವೆ.ಇನ್ನೂ ಅಣ್ಣೂರು, ಚಕ್ಕೋಡನಹಳ್ಳಿ ಹಾಗೂ ಹಂಪಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಕ್ರಮವಾಗಿ ನಂಜನಾಯಕನಹಳ್ಳಿ ಪಾಳ್ಯ (ಭೋವಿ ಕಾಲೋನಿ), ನಂಜಯ್ಯನ ಕಾಲೋನಿ ಹಾಗೂ ಮಲಾರದಹುಂಡಿ ಶಾಲಾ ಅಡುಗೆ ಕೋಣೆಗಳು ತಳಪಾಯದ ಹಂತದಲ್ಲಿ ಪ್ರಗತಿಯಲ್ಲಿವೆ.ಶಾಲಾ ಅಭಿವೃದ್ಧಿ ಮತ್ತು ಮಕ್ಕಳ ಕಲಿಕೆ ಮತ್ತು ಕ್ರೀಡೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಅನುಷ್ಠಾನ ಮಾಡಬಹುದಾಗಿದ್ದು, ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಲು ಈ ಯೋಜನೆ ಸಹಕಾರಿಯಾಗಿತ್ತು, ಇನ್ನೂ ವಿಕಸಿತ ಬಾರತ್- ಗ್ಯಾರೆಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) - (ವಿಬಿ ಜಿ ರಾಮ್ ಜಿ) ಯೋಜನೆಯಡಿ ಶಾಲಾ ಕೊಠಡಿಗೂ ಅವಕಾಶವಿದ್ದು ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ಮಕ್ಕಳ ಭವಿಷ್ಯ ಕೇಂದ್ರಶಾಲಾ ಅಡುಗೆ ಕೊಠಡಿಗಳ ನಿರ್ಮಾಣವು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಕೇವಲ ಆಹಾರ ತಯಾರಿಸುವ ಸ್ಥಳವಾಗದೆ, ಅದು ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯವನ್ನು ರೂಪಿಸುವ ಕೇಂದ್ರವಾಗಿದೆ. ಭಾರತದ ಮಧ್ಯಾಹ್ನದ ಉಪಹಾರ ಯೋಜನೆ (ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಅಭಿಯಾನ) ಮೂಲಕ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಗ್ರಾಮೀಣ ಮಹಿಳೆಯರು ಅಡುಗೆ ಸಿಬ್ಬಂದಿ ಉದ್ಯೋಗ ಪಡೆದು, ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯವಾಗಿದೆ.ಮುಗ್ದ ಶಾಲಾ ಮಕ್ಕಳಿಗೆ ಅಡುಗೆ ತಯಾರಕರು ಪೌಷ್ಟಿಕ ಹಾಗೂ ಶುದ್ಧ ಆಹಾರ ಸಿದ್ಧಪಡಿಸಿ, ಪ್ರೀತಿಯಿಂದ ಉಣಬಡಿಸುತ್ತಿದ್ದು, ಒಂದೇ ಪಂಕ್ತಿ, ಒಂದೇ ಊಟ, ಜಾತಿ, ಧರ್ಮ, ಬಡವ- ಬಲ್ಲಿದ ಎಂಬ ಭೇದಭಾವವಿಲ್ಲದೆ ಎಲ್ಲಾ ಮಕ್ಕಳು ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಮಕ್ಕಳಲ್ಲಿ ಬಾಲ್ಯದಲ್ಲೇ ಸಮಾನತೆಯ ಭಾವನೆ ಬೆಳೆಯುತ್ತಿದೆ. ಗುಣಮಟ್ಟದ ಬಿಸಿಯೂಟದ ವ್ಯವಸ್ಥೆಯಿಂದಾಗಿ ಮಕ್ಕಳ ಆರೋಗ್ಯ ಸುಧಾರಣೆ, ಕಲಿಕಾ ವಾತಾವರಣ ಉತ್ತಮವಾಗಿದ್ದು, ಮಕ್ಕಳ ಹಾಜರಾತಿಯಲ್ಲೂ ಹೆಚ್ಚಳವಾಗುತ್ತಿದೆ.----ಕೋಟ್...ಅಡುಗೆ ಕೊಠಡಿಯು ಆಧುನಿಕ ಶೇಖರಣಾ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಮತ್ತು ಶುಚಿಯಾದ ಆಹಾರ ತಯಾರಿಸಿ ಮಕ್ಕಳಿಗೆ ನೀಡುವುದರಿಂದ ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಬೆಳೆಯಲು ಸಾಧ್ಯವಾಗುತ್ತಿದೆ.- ಎಸ್. ರವಿಚಂದ್ರ, ಇಒ, ಎಚ್.ಡಿ. ಕೋಟೆ ತಾಪಂ