ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರು
ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಜಗಜ್ಯೋತಿ ಬಸವೇಶ್ವರ ಜೊತೆಯಾಗಿ ಕೆಲಸ ಮಾಡಿದ ಮಹಾನ್ ಸಂತ ಹಡಪದ ಅಪ್ಪಣ್ಣನವರ ಜೀವನ ಮತ್ತು ಸಾಧನೆ ಇತರರಿಗೆ ಮಾದರಿ ಎಂದು ಸಾಹಿತಿ ಹಾಗೂ ಪಶು ಸಂಗೋಪನ ಇಲಾಖೆ ಅಧಿಕಾರಿ ಡಾ.ವೈ.ಡಿ.ರಾಜಣ್ಣ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಭಾರತದ ಮೊಟ್ಟ ಮೊದಲ ಮಂತ್ರಿ ಮಂಡಲದಲ್ಲಿ ಕೆಲಸ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಹಾಲಪ್ಪ ಮಾತನಾಡಿ, ಶಿವಶರಣರಾದ ಹಡಪದ ಅಪ್ಪಣ್ಣ ಅವರು ಅಂದಿನ ಕಾಲದಲ್ಲೆ ಸಮ ಸಮಾಜದ ನಿರ್ಮಾಣದ ಗುರಿ ಹೊಂದಿದ್ದರು. ಇದಕ್ಕಾಗಿ ಬಸವಣ್ಣನವರ ಜೊತೆ ಕೈಜೋಡಿಸಿ ಶ್ರಮಿಸಿದವರು, ತಮ್ಮ ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ಯತ್ನಿಸಿದರು. ಅವರ ತತ್ವಾದರ್ಶನಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಆರ್. ನರಸಿಂಹ ಮಾತನಾಡಿ, ಶಾಸಕ ಅನಿಲ್ ಚಿಕ್ಕಮಾದು ಅವರು ಈ ಹಿಂದಿನ ವರ್ಷದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಸವಿತಾ ಸಮಾಜಕ್ಕೆ ನಿವೇಶನ ನೀಡಿ ಗುದ್ದಲಿ ಪೂಜೆ ನೆರವೇರಿಸುತ್ತೇನೆ ಎಂದು ಹೇಳಿ ಭರವಸೆ ನೀಡಿದ್ದರು ಸಹ ಈವರೆವಿಗೂ ನಿವೇಶನ ನೀಡಿಲ್ಲ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಪೌರ ಕಾರ್ಮಿಕರು, ಮಡಿವಾಳ ಸಮಾಜ, ಸವಿತಾ ಸಮಾಜದವರು ಕಾರ್ಯನಿರ್ವಹಿಸದೆ ಇದ್ದರೆ ಏನಾಗುತ್ತದೆ ಎಂದು ಯೋಚಿಸಬೇಕಾಗುತ್ತದೆ ನಾವು ಮಾಡುವ ಕೆಲಸದಲ್ಲಿ ಶ್ರೇಷ್ಠತೆ ಇರುತ್ತದೆ ಎಂದು ತಿಳಿಸಿದರು.ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿದರು.
ಸಮಾಜದ ಹಿರಿಯರಾದ ರಂಗಶೆಟ್ಟಿ, ಉಪನ್ಯಾಸಕ ಹಾಲಪ್ಪ ಅವರನ್ನು ಸನ್ಮಾನಿಸಲಾಯಿತು.ಗ್ರೇಡ್ 2 ತಹಸಿಲ್ದಾರ್ ಪರಶಿವಮೂರ್ತಿ, ಸದಸ್ಯರಾದ ನೂರಾಳಸ್ವಾಮಿ, ಚೆಲುವಕೃಷ್ಣ, ಪಪಂ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ನಿವೃತ್ತ ಮುಖ್ಯಶಿಕ್ಷಕ ಶಾಂಬುಮೂರ್ತಿ, ಅಭಿಮಾನಿ ಸ್ವಾಮಿ, ರಾಮುಭಜರಂಗಿ, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಆರ್. ನರಸಿಂಹ, ಗೌರವಾಧ್ಯಕ್ಷ ಶ್ರೀನಿವಾಸ್, ಟೌನ್ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷರಾದ ರಾಜು, ರವಿ, ಪ್ರಧಾನ ಕಾರ್ಯದರ್ಶಿ ಜೆ. ಪ್ರಭಾಕರ, ಖಜಾಂಚಿ ಕಾಳಶೆಟ್ಟಿ, ಗಡಿ ಯಜಮಾನರಾದ ಚಂದ್ರಶೇಖರ್, ಯಜಮಾನ ಮುರಾರಿ, ಮುಖಂಡರಾದ ಕುಮಾರ್, ನಿಂಗರಾಜು, ನಾಗರಾಜು ಕೂಸಣ್ಣ, ಗೋವಿಂದ, ಅಧಿಕಾರಿಗಳು ಇದ್ದರು.
ವಚನಗಳ ಮೂಲಕ ಸಾಮಾಜಿಕ ತಾರತಮ್ಯ ಹೋಗಲಾಡಿಸಲು ಶ್ರಮಿಸಿದ ಹಡಪದ ಅಪ್ಪಣ್ಣಕನ್ನಡಪ್ರಭ ವಾರ್ತೆ ನಂಜನಗೂಡು
12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸಿದವರು ಎಂದು ಪ್ರಾಧ್ಯಾಪಕ ಉಮೇಶ್ ಹೇಳಿದರು.ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ, ವಚನ ಸಾಹಿತ್ಯದ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ, ಜೊತೆಗೆ ಸುಮಾರು 250ಕ್ಕೂ ಹೆಚ್ಚು ವಚನಗಳನ್ನು ರಚನೆ ಮಾಡಿ ಸಮಾಜದಲ್ಲಿದ್ದ ಜಾತಿ ತಾರತಮ್ಯ, ಮೌಢ್ಯತೆ, ಶೋಷಣೆಯನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ, ಅವರ ವಚನಗಳು ಶ್ರಮಿಕ ವರ್ಗದ ಜನರಿಗೆ ಸನ್ಮಾರ್ಗವನ್ನು ತೋರಿಸುವಂತೆ, ಶೋಷಣೆ ಮಾಡುತ್ತಿರುವ ಜನರಿಗೆ ಚಾಟಿ ಏಟು ನೀಡುವಂತೆ ಬಂಡಾಯದ ಧ್ವನಿಯಾಗಿ ಕೆಲಸ ಮಾಡಿವೆ, ಅವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಎಲ್ಲರೂ ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದರು.ಕೇಶಾಲಂಕಾರಿ ಸಂಘದ ತಾಲೂಕು ಅಧ್ಯಕ್ಷ ಪುಟ್ಟರಾಜು ಮಾತನಾಡಿ, ಶೋಷಿತ ಸಮಾಜಗಳು ಮುಂದೆ ಬರಲು ಶಿಕ್ಷಣ ಒಂದೇ ಪ್ರಮುಖ ಅಸ್ತ್ರ, ಆದ್ದರಿಂದ ಸಮುದಾಯದ ಬಂಧುಗಳು ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ನಗರಸಭಾ ಸದಸ್ಯ ಯೋಗೀಶ್, ಮುಡಿಕಟ್ಟೆ ಸಮಿತಿ ಅಧ್ಯಕ್ಷ ರಾಜಪ್ಪ, ಕಾರ್ಯದರ್ಶಿ ಶ್ರೀನಿವಾಸ್, ಮುಖಂಡರಾದ ನಾಗೇಂದ್ರ, ಬಸವಣ್ಣ, ಶಿವಪ್ರಸಾದ್, ಶ್ರೀಕಂಠಪ್ರಸಾದ್, ಸುಧಾ, ಅಬ್ದುಲ್ ಖಾದರ್, ಶಿರಸ್ತೆದಾರ್ ಶ್ರೀನಿವಾಸ್, ಮಹದೇವಪ್ಪ, ಸಿಆರ್ಪಿ ಚೇತನ್ ಶರ್ಮಾ ಇದ್ದರು.