ಕನ್ನಡಪ್ರಭ ವಾರ್ತೆ, ಮಾಲೂರು

ಮಂಗಳವಾರ ಸಂಜೆ ಒಂದೂವರೆ ಗಂಟೆ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆಗೆ ಪಟ್ಟಣದ ಹಲವೆಡೆ ಮರಗಳು ಧರೆಗೆ ಉರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.ಸಂಜೆ ೪ ಗಂಟೆಗೆ ಸಣ್ಣ ರೀತಿಯಲ್ಲಿ ಪ್ರಾರಂಭವಾದ ಮಳೆಯು ೪.೩೦ ವೇಳಗೆ ಅಲಿಕಲ್ಲು ಸಮೇತ ಸುರಿಯಿತು. ದಿಢೀರ್‌ ಮಳೆಯ ಜತೆ ಬಿರುಗಾಳಿ ಬೀಸಿ ಮಳೆ ವೇಗ ಪಡೆದುಕೊಂಡಿತ್ತು. ಇದರಿಂದ ರಸ್ತೆ ಬದಿ ಅಂಗಡಿಗಳಿದ್ದ ತರಕಾರಿಗಳು ನೀರಿನಲ್ಲಿ ಕೊಚ್ಚಿಹೋದವು. ಚರಂಡಿ ವ್ಯವಸ್ಥೆ ಹಾಳಾಗಿದ್ದ ಕಾರಣ ಪಟ್ಟಣದ ಬಹುತೇಕ ರಸ್ತೆಗಳು ಕೆರೆಯಾಗಿ ಮಾರ್ಪಟ್ಟಿದ್ದವು. ನೆಹರೂ ಬಡಾವಣೆ ರಸ್ತೆಯಲ್ಲಿ ತರಕಾರಿ ಮಾರುತ್ತಿದ್ದ ಮಹಿಳೆ ಮೇಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿದ್ದ ತೆಂಗಿನ ಮರವು ಮೇಲೆ ಬೀಳುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡಳು. ಬಿರುಗಾಳಿಗೆ ಪೊಲೀಸ್‌ ಠಾಣೆಯ ಆವರಣದಲ್ಲಿ ಕಾರುಗಳ ಮೇಲೆ ಭಾರಿ ಗಾತ್ರದ ಮರವೊಂದು ಬಿದ್ದು ಕಾರುಗಳು ಜಖಂಗೊಂಡಿವೆ. ನಗರದ ಮಾರುತಿ ಬಡಾವಣೆಯ ರೆಡ್ಡಿ ಕಲ್ಯಾಣ ಮಂಟಪ ರಸ್ತೆ, ಅರಳೇರಿ ರಸ್ತೆ, ಕೋರ್ಟ್‌ ಮುಂಭಾಗದ ಕಾರ್‌ ಸ್ಟಾಂಡ್‌ ಸೇರಿ ಪ ಟ್ಟಣದ ಹಲವೆಡೆ ಹತ್ತಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಶ್ರೀ ರಂಗಂ ಕಲ್ಯಾಣ ಮಂಪಟದ ಬಳಿ ಮನೆಯ ಮೇಲಿನ ಚಾವಣಿಗೆ ಹಾಕಿದ್ದ ಕಬ್ಬಿಣದ ಶೀಟ್‌ ಗಳು ಗಾಳಿಯ ರಭಸಕ್ಕೆ ಹಾರಿ ಹೋಗಿ ಕಾರಿನ ಮೇಲೆ ಬಿದ್ದು ಕಾರು ಜಖಂಗೊಂಡಿದೆ. ಮಳೆ ಗಾಳಿಯಿಂದಾಗಿ ಮುಖ್ಯ ರಸ್ತೆಯಲ್ಲಿ ವಾಹನಗಳು ಜಾಮ್‌ ಆಗಿದ್ದವು. ಬಸ್‌ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣ ಸಂಪರ್ಕಿಸುವ ವಾಲ್ಮೀಕಿ ವೃತ್ತದಲ್ಲಿ ಚರಂಡಿಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಪ್ರಯಾಣಿಕರು ರಸ್ತೆಯಲ್ಲಿ ಸಾಗಲು ಪರದಾಡುತ್ತಿದ್ದರು.ರಸ್ತೆ ನೀರು ತೆರವುಗೊಳಿಸಿದ ಶಾಸಕ:

ಮುಖ್ಯ ರಸ್ತೆಯ ಬದಿಯ ಚರಂಡಿಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅನನುಕೂಲವಾಗಿತ್ತು. ವಿಷಯ ತಿಳಿದ ಶಾಸಕ ನಂಜೇಗೌಡ ಅವರು ಖುದ್ದು ಮಳೆಯಲ್ಲೇ ಸ್ಥಳಕ್ಕೆ ಧಾವಿಸಿದರಲ್ಲದೇ ನಗರಸಭೆಯ ಜೆಸಿಬಿ ಹಾಗೂ ರಸ್ತೆ ಕಾಮಗಾರಿ ಮಾಡುತ್ತಿರುವ ಕಾರ್ಮಿಕರ ಶ್ರಮದಿಂದ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ವಾಹನ ಸಂಚಾರ ನಂತರ ಸುಗುಮಗೊಂಡಿತ್ತು.

ಶಿರ್ಷಿಕೆ-೨೬ಕೆ.ಎಂ.ಎಲ್‌.ಆರ್.೪-

1.ಬಿರುಗಾಳಿ ಸಹಿತ ಬಾರಿ ಮಳೆಗೆ ಅರಳೇರಿ ರಸ್ತೆಯ ಮರದ ಕೊಂಬೆ ಧರೆಗೆ ಉರಳಿದ್ದು,ಆಟೋ ಚಾಲಕ ಸ್ವಲ್ಪದರಲ್ಲಿ ಬಚಾವ್‌ ಆಗಿದ್ದಾರೆ.


2. ಮಳೆಯಲ್ಲೇ ಸ್ಥಳಕ್ಕೆ ಧಾವಿಸಿದ ಶಾಸಕ ನಂಜೇಗೌಡ ಅವರು ರಸ್ತೆ ಬದಿ ಚರಂಡಿಗಳಲ್ಲಿ ನೀರು ತುಂಬಿರುವುದನ್ನು ತೆರವುಗೊಳಿಸಿದರು.