ನಗರ ಪ್ರದೇಶದ ಸಂಸ್ಥೆಗಳ ಜೊತೆ ಪೈಪೋಟಿ ನಡೆಸಿ ಆಡಳಿತ ಹಾಗೂ ಸೇವೆಯಲ್ಲಿ ಎರಡನೇ ಸ್ಥಾನದಲ್ಲಿರುವ ಗ್ರಾಮೀಣ ಪ್ರದೇಶದ ಸಂಸ್ಥೆ ನಿರಂತರ 616 ದಿನಗಳ ಕಾಲ ಹಸಿವು ನಿವಾರಣ ಕಾರ್ಯಕ್ರಮ ನಡೆಸುವುದು ಮೆಚ್ಚುವ ಕೆಲಸ. ಸೇವಾ ಮನೋಭಾವ, ಜನರಿಗೆ ಗೌರವ ನೀಡುವುದು, ನಿಮ್ಮ ಏಕತೆ, ಶ್ರಮ ಹಾಗೂ ಸಹಕಾರಕ್ಕೆ ಅಭಿನಂದನೆ.

ಕನ್ನಡಪ್ರಭ ವಾರ್ತೆ ಹಲಗೂರು

ಹಲಗೂರು ಲಯನ್ಸ್ ಸಂಸ್ಥೆ 50 ಸದಸ್ಯರ ಆಡಳಿತದಲ್ಲಿ ದಿನನಿತ್ಯ ಹಸಿವು ನಿವಾರಣೆ ಕಾರ್ಯಕ್ರಮ ಹಾಗೂ ಇತರೆ ಆರೋಗ್ಯ ತಪಾಸಣೆ ಶಿಬಿರಗಳ ಆಯೋಜನೆ ಸೇರಿ ಜನಸೇವೆಯಲ್ಲಿ ತೊಡಗಿ ಮಂಡ್ಯ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಎಂದು ಮಂಡ್ಯ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಕೆ.ಎಲ್.ರಾಜಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಹಲಗೂರಿನ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿದಿನ ಜನರಿಗೆ ಕಾರ್ಯಕ್ರಮ ನಡೆಸುವ ಜಿಲ್ಲೆಯಲ್ಲಿ ಏಕೈಕ ಸಂಸ್ಥೆ ಹಲಗೂರು ಲಯನ್ಸ್ ಕ್ಲಬ್. 44 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತ್ಯಂತ ಹಿರಿಯ ಸಂಸ್ಥೆಯಾಗಿದೆ ಎಂದರು.

ನಗರ ಪ್ರದೇಶದ ಸಂಸ್ಥೆಗಳ ಜೊತೆ ಪೈಪೋಟಿ ನಡೆಸಿ ಆಡಳಿತ ಹಾಗೂ ಸೇವೆಯಲ್ಲಿ ಎರಡನೇ ಸ್ಥಾನದಲ್ಲಿರುವ ಗ್ರಾಮೀಣ ಪ್ರದೇಶದ ಸಂಸ್ಥೆ ನಿರಂತರ 616 ದಿನಗಳ ಕಾಲ ಹಸಿವು ನಿವಾರಣ ಕಾರ್ಯಕ್ರಮ ನಡೆಸುವುದು ಮೆಚ್ಚುವ ಕೆಲಸ. ಸೇವಾ ಮನೋಭಾವ, ಜನರಿಗೆ ಗೌರವ ನೀಡುವುದು, ನಿಮ್ಮ ಏಕತೆ, ಶ್ರಮ ಹಾಗೂ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಕನ್ನಡ ರಾಜ್ಯೋತ್ಸವ ದಿನದಂದು ಸಮಾಜ ಸೇವೆಗಾಗಿ ದೇವರಾಜುಗೆ ಪ್ರಶಸ್ತಿ ಸಿಗಬೇಕಾದರೆ ನಿಮ್ಮ ಹಸಿವು ನಿವಾರಣ ಕಾರ್ಯಕ್ರಮವೇ ಪ್ರೇರಣೆ, ಜಿಲ್ಲಾಡಳಿತ ಲಯನ್ಸ್ ಸಂಸ್ಥೆಯವರ ಸೇವೆ ಗುರುತಿಸಿ ಪ್ರಶಸ್ತಿ ನೀಡಿದೆ ಎಂದರು.

ಹಲಗೂರಿನ ಮನೋಹರ್, ಶ್ರೀನಿವಾಸ್, ಸುರೇಶ್, ಪ್ರವೀಣ್ ಮುಂತಾದ ಪದಾಧಿಕಾರಿಗಳ ತಂಡ ಸಮಾಜ ಸೇವಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಲಿಂಗಪಟ್ಟಣ ಗ್ರಾಮದ ಮಾದೇಗೌಡರ ಪುತ್ರ ಎಲ್.ಎಂ.ರವಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಇವರಿಗೆ ಹಲಗೂರಿನ ಲಯನ್ಸ್ ಸಂಸ್ಥೆಯಿಂದ ಸದಸ್ಯರು ಆಸ್ಪತ್ರೆ ವೆಚ್ಚಕ್ಕಾಗಿ 20 ಸಾವಿರ ರು. ಚೆಕ್ ವಿತರಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್.ಮನೋಹರ್ ಮಾತನಾಡಿ, ಕ್ಲಬ್‌ನಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲು ಆರೋಗ್ಯ ತಪಾಸಣೆ ಶಿಬಿರ, ಆಸ್ಪತ್ರೆ ಬಳಿ ಹಸಿವು ನಿವಾರಣಾ ಕಾರ್ಯಕ್ರಮ, ಸುಮಾರು 30ಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಕ್ಲಬ್ ನೆರವಾಗಿದೆ ಎಂದರು.

ಇದೇ ವೇಳೆ ಜಿಲ್ಲಾ ರಾಜ್ಯಪಾಲ ರಾಜಶೇಖರ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಎಚ್.ವೆಂಕಟೇಶ್ ಕುಮಾರ್, ಕೆ.ಎಸ್.ಸುನಿಲ್ ಕುಮಾರ್ ಮತ್ತು ಕರಿಯಪ್ಪ, ಸಿದ್ದೇಗೌಡ, ಜಯಕುಮಾರ್, ಕ್ಲಬ್ ನ ಡಾ.ಎ.ಎಸ್.ನಾಗೇಶ್ ಡಾ.ಶಂಷುದ್ದೀನ್, ಸುರೇಶ್, ಎ.ಎಸ್.ದೇವರಾಜು, ಕಾರ್ಯದರ್ಶಿ ಎ.ಟಿ.ಶ್ರೀನಿವಾಸ್, ಖಜಾಂಜಿ ಸಿ.ಪ್ರವೀಣ, ಸೇರಿದಂತೆ ಇತರರು ಇದ್ದರು.