ಹಲಗೂರು ಭೀಮಾ ನದಿ, ಕೆರೆಯ ಕೋಡಿ, ಕನಕಪುರ ರಸ್ತೆಯ ವಾಸು ಬಾರು ಹಾಗೂ ಇನ್ನೂ ಹಲವೆಡೆ ಹೋಬಳಿಯಾದ್ಯಂತ ಸಡಗರ ಸಂಭ್ರಮದಿಂದ ದನ ಕರುಗಳನ್ನು ಕಿಚ್ಚಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ರೈತರು ಆಚರಿಸಿದರು.

ಹಲಗೂರು:

ಹಲಗೂರು ಭೀಮಾ ನದಿ, ಕೆರೆಯ ಕೋಡಿ, ಕನಕಪುರ ರಸ್ತೆಯ ವಾಸು ಬಾರು ಹಾಗೂ ಇನ್ನೂ ಹಲವೆಡೆ ಹೋಬಳಿಯಾದ್ಯಂತ ಸಡಗರ ಸಂಭ್ರಮದಿಂದ ದನ ಕರುಗಳನ್ನು ಕಿಚ್ಚಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ರೈತರು ಆಚರಿಸಿದರು.

ಗುರುವಾರ ಬೆಳಗ್ಗೆ ತಮ್ಮ ಸಾಕು ಪ್ರಾಣಿಗಳಾದ ಹಸು, ಎಮ್ಮೆ, ಕರುಗಳನ್ನು ಶುಚಿಗೊಳಿಸಿ ಅವುಗಳಿಗೆ ಬಲೂನ್, ಗುಲ್ಲಂಪಟ್ಟೆ, ಹೂವಿನ ಹಾರ ಮತ್ತು ಇನ್ನು ಇತರೆ ಬೇಕಾದ ಪದಾರ್ಥಗಳನ್ನು ತೆಗೆದುಕೊಂಡು ಅವುಗಳನ್ನು ಸಿಂಗರಿಸಿ ಕಿಚ್ಚಾಯಿಸುವ ಸ್ಥಳಕ್ಕೆ ಹೋಗಿ ತಮ್ಮ ದನ ಕರುಗಳನ್ನು ಕಿಚ್ಚಾಯಿಸಿಕೊಂಡು ಬಂದ ನಂತರ ತಮ್ಮ ಮನೆಗಳಲ್ಲಿ ಅವುಗಳಿಗೆ ಪೂಜೆ ಸಲ್ಲಿಸಿ ಮನೆಯಲ್ಲಿ ಮಾಡಿದ ಪ್ರಸಾದ ನೀಡುವಂತೆ ರೈತರು ಸಂಪ್ರದಾಯ ನೆರವೇರಿಸಿದರು.

ಯುವ ಮುಖಂಡ ಎಚ್.ಎಂ.ಶಿವಮಾದೇಗೌಡ ಮಾತನಾಡಿ, ವರ್ಷಕ್ಕೊಮ್ಮೆ ಬರುವ ಸಂಕ್ರಾಂತಿ ಹಬ್ಬದಲ್ಲಿ ಅವುಗಳನ್ನು ಶುಚಿಗೊಳಿಸಿ ಬಣ್ಣ ಹಾಗೂ ಹೂವಿನಿಂದ ಅಲಂಕರಿಸಿ ನಂತರ ಭೀಮ ನದಿಯ ತೀರದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ ನಂತರ ಕಿಚ್ಚಾಯಿಸಲಾಯಿತು ಎಂದರು.

ಈ ವೇಳೆ ಎಚ್.ಎಂ. ನಾಗೇಶ, ನಾಗೇಂದ್ರ, ಮೊಘಣ್ಣ, ಮರಿಮಾದು, ಪೂಜಾರಿ,ಸಿದ್ದು, ಆನಂದ, ಸಂತೋಷ, ಶಿವಸ್ವಾಮಿ, ದಿಲೀಪ್ ಸೇರಿದಂತೆ ಇತರರು ಇದ್ದರು.ಸಂಕ್ರಾಂತಿ ಅಂಗವಾಗಿ ರಂಗೋಲಿ ಸ್ಪರ್ಧೆ

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಹಲಗೂರು:

ಸಮೀಪದ ಗೊಲ್ಲರಹಳ್ಳಿಯ ದಿವ್ಯಜೋತಿ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಶಾಲೆ ಆವರಣದಲ್ಲಿ ನಿರ್ಮಿಸಲ್ಪಟ್ಟ ಧಾನ್ಯಗಳ ಒಕ್ಕಣೆಯ ಕಣ, ಹೂವಿನಿಂದ ಅಲಂಕರಿಸಿದ ಧಾನ್ಯಗಳ ರಾಶಿ, ಅವರೆಕಾಯಿ, ಕಡಲೆಕಾಯಿ, ಸಿಹಿ ಗೆಣಸು, ಕಬ್ಬು, ಎಳ್ಳು ಬೆಲ್ಲ ಕೊಬ್ಬರಿ ಮಿಶ್ರಣ, ಪೂಜಾ ಸಾಮಗ್ರಿಗಳು ಒಟ್ಟಾರೆ ಶಾಲೆ ಆವರಣ ಹಳ್ಳಿಯ ಸೊಬಗನ್ನು ಪ್ರತಿಬಿಂಬಿಸುತ್ತಿತ್ತು.

ವಿದ್ಯಾರ್ಥಿಗಳಿಗೆ ಪ್ರಿನ್ಸಿಪಲ್ ಹಾಗೂ ಫಾದರ್ ಎಮ್ಯಾನ್ಯುಯಲ್ ಜೇಕಬ್ ಎಳ್ಳು ಬೆಲ್ಲ ನೀಡಿ ಒಳ್ಳೆಯ ಮಾತನಾಡಿ ಎಂದು ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದರು. ಮಕರ ಸಂಕ್ರಾಂತಿ ನಿಮ್ಮ ಜೀವನದಲ್ಲಿ ಹೊಸ ಬೆಳಕು, ಆರೋಗ್ಯ ಸಮೃದ್ಧಿ ಮತ್ತು ಸೌಹಾರ್ದತೆ ಪ್ರತಿಬಿಂಬಿಸುತ್ತದೆ ಎಂದರು.

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಅದನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತೇವೆ. ಆದ್ದರಿಂದ ಪ್ರತಿವರ್ಷ ಜನವರಿಯಲ್ಲಿ ಈ ಹಬ್ಬವನ್ನು ಸುಗ್ಗಿ ಹಬ್ಬ ಎಂಬ ಹೆಸರಿನಿಂದ ಆಚರಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.