ಸಾರಾಂಶ
ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆನಾಡಹಬ್ಬ ಮೈಸೂರಿನ ದಸರಾ ಹಬ್ಬಕ್ಕೆ ಪ್ರೇರಣೆ ಹಂಪಿ ನೆಲ. ನವರಾತ್ರಿ ಉತ್ಸವವನ್ನು ಹಂಪಿಯಲ್ಲಿ ವಿಜಯನಗರದ ಆಳರಸರ ಕಾಲದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಅದರ ಕುರುಹು ಆಗಿ ಈಗಲೂ ಹಂಪಿಯಲ್ಲಿ ಮಹಾನವಮಿ ದಿಬ್ಬ ಇದೆ. ವಿಜಯನಗರದ ಆಳರಸರ ಕಾಲದಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು ಎಂಬುದನ್ನು ಈ ಮಹಾನವಮಿ ದಿಬ್ಬ ಸಾಕ್ಷೀಕರಿಸುತ್ತದೆ.ವಿಜಯನಗರದ ಆಳರಸರ ಕಾಲದಲ್ಲಿ ಮೈಸೂರಿನ ರಾಜರು, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ವಿಜಯನಗರ ಹಾಗೂ ಮೈಸೂರಿನ ಅರಸರ ನಡುವೆ ಒಡನಾಟವಿತ್ತು. ಹೀಗಾಗಿ ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ, ನವರಾತ್ರಿ ಉತ್ಸವವನ್ನು ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಿಸುವ ಪರಿಪಾಠ ಬೆಳೆದಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಮಹಾನವಮಿ ದಿಬ್ಬ:ಹಂಪಿಯಲ್ಲಿ 12 ಮೀಟರ್ ಎತ್ತರದ ದೊಡ್ಡ ವೇದಿಕೆ ಇದೆ. ಇದನ್ನು ದಸರಾ ದಿಬ್ಬ ಇಲ್ಲವೇ ಮಹಾನವಮಿ ದಿಬ್ಬ ಎಂದು ಕರೆಯಲಾಗುತ್ತದೆ. ಶ್ರೀಕೃಷ್ಣದೇವರಾಯ ಒಡಿಶಾದ ಮೇಲೆ ದಾಳಿ ಮಾಡಿ ಜಯಗಳಿಸಿದ ಬಳಿಕ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ. ನವರಾತ್ರಿಯ 9 ದಿನಗಳ ವರೆಗೆ ಹಬ್ಬವನ್ನು ಮಹಾನವಮಿ ದಿಬ್ಬದಲ್ಲಿ ಆಚರಿಸಲಾಗುತ್ತಿತ್ತು. ರಾಜ ಪರಿವಾರ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿತ್ತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು 9 ದಿನಗಳು ನಡೆಯುತ್ತಿದ್ದವು. ಮಾಂಡಲೀಕರು, ಸಾಮಂತರು ಹಾಗೂ ವಿದೇಶಿ ರಾಯಭಾರಿಗಳು ಮಹಾರಾಜನಿಗೆ ಕಾಣಿಕೆ ಸಲ್ಲಿಸುತ್ತಿದ್ದರು. ಜತೆಗೆ ಆನೆ, ಕುದುರೆ, ಕಾಲ್ದಳಗಳ ಮೆರವಣಿಗೆ ನಡೆಸಲಾಗುತ್ತಿತ್ತು. ಅದರ ಕುರುಹುವಾಗಿ, ಮಹಾನವಮಿ ದಿಬ್ಬದಲ್ಲಿ ಕೆತ್ತನೆ ಮಾಡಲಾಗಿದೆ.
ಮಹಾನವಮಿ ದಿಬ್ಬದಲ್ಲಿ ನೃತ್ಯಗಾರರ, ಸಂಗೀತಗಾರರ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ. ನವರಾತ್ರಿ ಉತ್ಸವದ ನಿಮಿತ್ತ ಸಮರಾಭ್ಯಾಸ ಕೂಡ ನಡೆಸಲಾಗುತ್ತಿತ್ತು. ಈ ಉತ್ಸವವನ್ನು ವಿಜಯನಗರದ ನೆಲದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಸ್ವತಃ ತನ್ನ ಪರಿವಾರದೊಂದಿಗೆ ಉತ್ಸವವನ್ನು ವೀಕ್ಷಿಸುತ್ತಿದ್ದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ.ಬೆಳೆಗಳು ಹಚ್ಚ ಹಸಿರು ಇರುವಾಗ, ಸಾಮ್ರಾಜ್ಯ ಸಮೃದ್ಧವಾಗಿರುವಾಗ ಈ ಹಬ್ಬವನ್ನು ಪ್ರಜೆಗಳಾದಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಕಲಾವಿದರು, ಸಾಹಿತಿಗಳು ಹಾಗೂ ಪಂಡಿತರನ್ನು ಈ ನವರಾತ್ರಿ ಉತ್ಸವದ ವೇಳೆಯಲ್ಲಿ ರಾಜರು ಸನ್ಮಾನ ಮಾಡಿ, ಪ್ರೋತ್ಸಾಹಿಸುತ್ತಿದ್ದರು. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಈ ಆಚರಣೆಗೆ ಇನ್ನಷ್ಟು ಮೆರುಗು ದೊರೆಯಿತು ಎಂದು ಇತಿಹಾಸಕಾರರು ಹೇಳುತ್ತಾರೆ.
ಬನ್ನಿ ಮಹೋತ್ಸವ:ನವರಾತ್ರಿ ಉತ್ಸವದ ನಿಮಿತ್ತ ಮಹಾರಾಜರ ನೇತೃತ್ವದಲ್ಲಿ ಬನ್ನಿ ಕಾರ್ಯಕ್ರಮ ನಡೆಯುತ್ತಿತ್ತು. ಈಗಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಳಿ ಈ ಸಂಬಂಧಿತ ಮಂಟಪವೊಂದು ಪತ್ತೆಯಾಗಿದೆ. ವಿಜಯನಗರ ಸಾಮ್ರಾಜ್ಯದ ಸೈನಿಕರ ಸಾಮರ್ಥ್ಯವನ್ನು ಈ ನವರಾತ್ರಿ ಉತ್ಸವದ ವೇಳೆ ಪ್ರದರ್ಶಿತಗೊಳ್ಳುತ್ತಿತ್ತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಈಗ ದಸರಾ ಹಬ್ಬದ ಸಮಯದಲ್ಲಿ ಮಹಾನವಮಿ ದಿಬ್ಬದಲ್ಲಿ ಯಾವುದೇ ಆಚರಣೆ ನಡೆಯುತ್ತಿಲ್ಲ. ಈಗ ಮಹಾನವಮಿ ದಿಬ್ಬ ಒಂದು ಸ್ಮಾರಕವಾಗಿ ಮಾತ್ರ ಉಳಿದಿದೆ.
ಒಂದು ಕಾಲದಲ್ಲಿ ವಿದೇಶಿ ರಾಯಭಾರಿಗಳಾದ ಡೊಮಿಂಗೊ ಪಯಾಸ್ ಸೇರಿದಂತೆ ಇತರರು ಹಂಪಿಯ ದಸರಾ ವೈಭವವನ್ನು ಕಣ್ಣಾರೆ ಕಂಡು ಬಣ್ಣಿಸಿದ್ದಾರೆ. ಮಹಾನವಮಿ ದಿಬ್ಬದಲ್ಲಿ ರಾಜ ಚಿನ್ನದ ಸಿಂಹಾಸನದ ಮೇಲೆ ಕುಳಿತು ಇಡೀ ಉತ್ಸವವನ್ನು ವೀಕ್ಷಣೆ ಮಾಡುತ್ತಿದ್ದ. ಈ ಚಿನ್ನದ ಸಿಂಹಾಸನವನ್ನು ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಮೈಸೂರು ಒಡೆಯರಿಗೆ ನೀಡಲಾಗಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಈಗಲೂ ಅಧ್ಯಯನಗಳು ನಡೆಯುತ್ತಲೇ ಇದೆ.ಮಹಾನವಮಿ ದಿಬ್ಬದಲ್ಲಿ ವಿದೇಶಿ ರಾಯಭಾರಿಗಳನ್ನು ಸನ್ಮಾನ ಮಾಡಲಾಗುತ್ತಿತ್ತು. ರಾಯಚೂರು ಯುದ್ಧದಲ್ಲಿ ಶ್ರೀಕೃಷ್ಣದೇವರಾಯನಿಗೆ ಸಹಾಯ ಮಾಡಿದ ವಿದೇಶಿ ರಾಯಭಾರಿ ಹಾಗೂ ಸೈನಿಕ ಪಿರೋಡಾಸ್ನಿಗೆ ಮಹಾನವಮಿ ಉತ್ಸವದಲ್ಲಿ ಸನ್ಮಾನ ಮಾಡಲಾಗಿತ್ತು. ಹಂಪಿಯ ಮಹಾನವಮಿ ದಿಬ್ಬಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಹಲವು ರಾಜ, ಮಹಾರಾಜರ ಕಥನಗಳನ್ನು ಈ ದಿಬ್ಬ ಹೇಳುವುದರೊಂದಿಗೆ ಈ ನೆಲದ ಸಂಸ್ಕೃತಿಯ ಕುರುಹು ಆಗಿ ಈ ದಿಬ್ಬ ಈಗಲೂ ಅಚಲವಾಗಿ ನಿಂತಿದೆ.ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಈ ಕುರಿತು ಮಾತನಾಡಿ, ವಿಜಯನಗರದ ಆಳರಸರ ಕಾಲದಲ್ಲಿ ಹಂಪಿಯಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಮಹಾನವಮಿ ದಿಬ್ಬವೇ ಇದೆ ಸಾಕ್ಷಿ. ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ ಮೈಸೂರಿನಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮೈಸೂರಿನ ದಸರೆಗೆ ಹಂಪಿಯ ದಸರೆಯೇ ಪ್ರೇರಣೆಯಾಗಿದೆ. ಹಂಪಿಯ ನೆಲ ಐತಿಹಾಸಿಕ ನೆಲವಾಗಿದೆ. ಕರುನಾಡಿನ ಚರಿತ್ರೆಗೆ ಹಂಪಿ ನೆಲದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.