ಕನ್ನಡಪ್ರಭವಾರ್ತೆ ತುರುವೇಕೆರೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದವಾತ್ಸಲ್ಯ ಮನೆ ನಿರ್ಮಾಣ ಮತ್ತು ಹಸ್ತಾಂತರ ಕಾರ್ಯಕ್ರಮ ದೇವರ ಮಾವಿನಕೆರೆಯಲ್ಲಿ ನೆರವೇರಿತು. ಜಿಲ್ಲಾ ನಿರ್ದೇಶಕ ಸತೀಶ್‌ ಸುವರ್ಣ ಗ್ರಾಮದ ಫಲಾನುಭವಿ ಲಕ್ಷ್ಮಮ್ಮ ರಿಗೆ ಸುಮಾರು 1.35 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ವಾತ್ಸಲ್ಯ ಮನೆಯನ್ನು ಗ್ರಾಮಸ್ಥರ ಸಮ್ಮುಖ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಸತೀಶ್‌ ಸುವರ್ಣ ವಾಸವಿರಲು ಮನೆ ಇಲ್ಲದ 700 ಫಲಾನುಭವಿಗಳಿಗೆ ಯೋಜನೆಯಿಂದ ವಾತ್ಸಲ್ಯ ಮನೆಯನ್ನು ನಿರ್ಮಿಸಿಕೊಡಲಾಗಿದೆ. ದೇವರ ಮಾವಿನಕೆರೆಯ ಲಕ್ಷ್ಮಮ್ಮ ನವರು ಜೀವನದ ಉಳಿದ ದಿನಗಳನ್ನು ನೆಮ್ಮದಿಯಿಂದ ಕಳೆಯುವಂತಾಗಲಿ ಎಂದು ಆಶಿಸಿದರು. ಲಕ್ಷ್ಮಮ್ಮ ರವರಿಗೆ ಊರಿನ ಎಲ್ಲರೂ ಸಹಾಯ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಂಜೇಶ್ ಮಾತನಾಡಿ ಸಮಾಜದ ಆಶಕ್ತರಿಗೆ ಯೋಜನೆಯ ಕಾರ್ಯಕರ್ತರ ಮೂಲಕ ಸೇವಾ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಶೇಖರ್ ಶೆಟ್ಟಿ, ಊರಿನ ಮುಖಂಡರಾದ ಪರಮೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸುವರ್ಣ, ಪಂಚಾಯಿತಿ ಸದಸ್ಯರಾದ ರವಿ ಮತ್ತು ಕೃಷ್ಣಗೌಡ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾರಾಣಿ, ವಲಯದ ಮೇಲ್ವಿಚಾರಕಿ ಮೇಘಮಾಲ, ಸೇವಾಪ್ರತಿನಿಧಿ ಅಶ್ವಿನಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.