ಸಾರಾಂಶ
ಧಾರವಾಡ:
ನೇಹಾ ಹಿರೇಮಠ ಹತ್ಯೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಆಲೂರು ವೆಂಕಟರಾವ್ ವೃತ್ತವನ್ನು ಬಂದ್ ಮಾಡಿದ ನೂರಾರು ವಿದ್ಯಾರ್ಥಿಗಳು ಕೆಲ ಹೊತ್ತು ಪ್ರತಿಭಟನೆ ನಡೆಸಿ, ಹತ್ಯೆ ಆರೋಪಿ ಫಯಾಜ್ನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.ಆಲೂರು ವೆಂಕಟರಾವ್ ವೃತ್ತದಿಂದ ಧಾರವಾಡದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು. ನೇಹಾ ಹಿರೇಮಠ ಅವರ ಕೊಲೆಯು ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದೆ. ಪೊಲೀಸರು ಸೂಕ್ತ ತನಿಖೆಯನ್ನು ಕೈಗೊಂಡು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಆರೋಪಿಗೆ ಕಾನೂನಿನ ಭಯ ಇಲ್ಲ. ಆದ್ದರಿಂದ ವಿದ್ಯಾರ್ಥಿನಿಯನ್ನು ಕಾಲೇಜಿನ ಒಳಗಡೆ ಬಂದು ಹತ್ಯೆ ಮಾಡಿದ್ದಾನೆ. ಕಾನೂನಿನ ಭಯ ಇಲ್ಲದಿದ್ದಾಗ ಮಾತ್ರ ಇಂತಹ ಘಟನೆಗಳು ಸಂಭವಿಸಲು ಸಾಧ್ಯವಿದೆ. ಆದ್ದರಿಂದ ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ ಇಂತಹ ಘಟನೆಗಳನ್ನು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. ಅರುಣ ಅಮರಗೋಳ, ಉಲ್ಲಾಸ ಘೋಡಿ, ವಿದ್ಯಾನಂದ, ಶಿವಕುಮಾರ, ಗೌರೀಶ, ಮಹೇಶ ಇದ್ದರು.
ಪೊಲೀಸರೊಂದಿಗೆ ವಾಗ್ವಾದ:ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು ಜ್ಯುಬಿಲಿ ವೃತ್ತವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಕೆಲ ಕಾಲ ಅಡಚಣೆ ಉಂಟಾಯಿತು. ಈ ವೇಳೆ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ರಸ್ತೆ ಬಂದ್ ಮಾಡಲು ಅವಕಾಶವಿಲ್ಲ, ನೀವು ರಸ್ತೆ ಬಂದ್ ಮಾಡುವ ಹಾಗಿಲ್ಲ ಎಂದು ಪೊಲೀಸರು ಎಬಿವಿಪಿ ಕಾರ್ಯಕರ್ತರಿಗೆ ಸೂಚಿಸಿ ಬರೀ ಐದು ನಿಮಿಷಗಳ ಕಾಲ ಮಾತ್ರ ಬಂದ್ ಮಾಡಲು ಅವಕಾಶ ಕಲ್ಪಿಸಿದರು.