ಹನುಮಮಾಲಾ ಅಭಿಯಾನ ಧಾರ್ಮಿಕ ಸಭೆ

| Published : Dec 23 2023, 01:46 AM IST

ಸಾರಾಂಶ

ಸಾವರ್ಕರ್ ಅಂದರೆ ಜ್ಞಾನ, ಶಕ್ತಿ, ತಾಕತ್ತು, ಸ್ವಾತಂತ್ರ್ಯ. ಬಜರಂಗದಳ ಸಂಘಟನೆ ಯುವಜನತೆಯಲ್ಲಿ ದೇಶಭಕ್ತಿ, ದೈವಭಕ್ತಿ ಹೆಚ್ಚಿಸಲು ಹನುಮಮಾಲಾ ಜಾರಿಗೆ ತಂದಿದೆ. ಎಲ್ಲರೂ ಸನಾತನ ಧರ್ಮ, ಸಂಪ್ರದಾಯ, ಸಂಸ್ಕೃತಿ, ಸ್ತ್ರೀಯರನ್ನು ಗೌರವಿಸಿ ದೇಶ ರಕ್ಷಣೆಗೆ ಮುಂದಾಗಬೇಕು

ಗಂಗಾವತಿ: ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ನಡೆದ ಹನುಮಮಾಲಾ ಅಭಿಯಾನ ಧಾರ್ಮಿಕ ಸಭೆ ಜರುಗಿತು.

ಈ ಸಂದರ್ಭದಲ್ಲಿ ನ್ಯಾಯವಾದಿ, ವಿಶ್ವ ಹಿಂದೂ ಪರಿಷತ್ತಿನ ಸುಭಾಸ್ ಸಾದರ್ ಮಾತನಾಡಿ, ದೇಶದಲ್ಲಿ ಧರ್ಮ, ಪರಂಪರೆ, ಸಂಸ್ಕೃತಿ ಬೆಳೆಯಲು ಯುವಕರು ಮುಂದಾಗಬೇಕು. 1947ಕ್ಕಿಂತ ಹಿಂದೆ ಯುವಕರಲ್ಲಿ‌ ಒಗ್ಗಟ್ಟಿನ ಕೊರತೆ, ಹೋರಾಟದ ಮನೋಭಾವನೆ ಇರದ ಕಾರಣ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ನಡೆಯಿತು. ಈ ಸಮಯದಲ್ಲಿ ವೀರ ಸಾವರ್ಕರ್ ಇಲ್ಲದೇ ಹೋಗಿದ್ದರೆ, ದೇಶಕ್ಕೆ ಅಷ್ಟೊಂದು ಸುಲಭವಾಗಿ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಅಂದಿನ ಪರಿಸ್ಥಿತಿಯಲ್ಲಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿ ಇತರೆ ಹೋರಾಟಗಾರರಿಗೆ ಪ್ರೇರಣೆಯಾಗಿ ಮಾರ್ಗದರ್ಶನ ನೀಡಿ, ಹೋರಾಟದ ಕಿಚ್ಚು ಹೊತ್ತಿಸಿದ್ದಾರೆ ಎಂದರು.

ಸಾವರ್ಕರ್ ಅಂದರೆ ಜ್ಞಾನ, ಶಕ್ತಿ, ತಾಕತ್ತು, ಸ್ವಾತಂತ್ರ್ಯ. ಬಜರಂಗದಳ ಸಂಘಟನೆ ಯುವಜನತೆಯಲ್ಲಿ ದೇಶಭಕ್ತಿ, ದೈವಭಕ್ತಿ ಹೆಚ್ಚಿಸಲು ಹನುಮಮಾಲಾ ಜಾರಿಗೆ ತಂದಿದೆ. ಎಲ್ಲರೂ ಸನಾತನ ಧರ್ಮ, ಸಂಪ್ರದಾಯ, ಸಂಸ್ಕೃತಿ, ಸ್ತ್ರೀಯರನ್ನು ಗೌರವಿಸಿ ದೇಶ ರಕ್ಷಣೆಗೆ ಮುಂದಾಗಬೇಕು ಎಂದರು.

ಸಭೆಯಲ್ಲಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮನಾಂದ ಸ್ವಾಮೀಜಿ, ಬಜರಂಗದಳ ಉತ್ತರ ಪ್ರಾಂತದ ಪುಂಡಲಿಕ ದಳವಾಯಿ, ದೊಡ್ಡ ಬಸಯ್ಯ, ವಿನಯ್ ಪಾಟೀಲ, ರಾಮಾಂಜನೇಯ, ಶಾಸಕ ಗಾಲಿ ಜನಾರ್ದನ ರೆಡ್ಡಿ, ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ವಿರೂಪಾಕ್ಷಪ್ಪ ಸಿಂಗನಾಳ, ನಗರಸಭಾ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ, ವೀರಭದ್ರಪ್ಪನಾಯಕ, ಮನೋಹರಗೌಡ, ಸಂತೋಷ ಕೆಲೋಜಿ, ಡಾ.ಅಮರ್ ಪಾಟೀಲ್, ತಿಪ್ಪೇರುದ್ರಸ್ವಾಮಿ ಇದ್ದರು.