- ಸ್ಥಳೀಯರ ಸಹಾಯದಿಂದ 2 ವರ್ಷ ತಿರುಗಿರುವ ಮಹಿಳೆ

- ರಾಮಪುರ ನಾಡಕಚೇರಿ, ತಹಸೀಲ್ದಾರ್‌ ಕಚೇರಿ ಸುತ್ತಾಟ

- ಕಚೇರಿಗೆ ಹೊದರೆ ಕೆಲಸ ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ

- ತ್ವರಿತವಾಗಿ ಪ್ರಮಾಣ ಪತ್ರ ಒದಗಿಸಲು ಶಾಸಕರಿಗೆ ಮನವಿ

---


ಕನ್ನಡಪ್ರಭ ವಾರ್ತೆ ಹನೂರು

ವಿಶೇಷ ಚೇತನ ಮಹಿಳೆ ಪುನರ್‌ ಪಿಂಚಣಿ ಆದೇಶ ಪ್ರತಿಗಾಗಿ ಕಳೆದ 2 ವರ್ಷಗಳಿಂದ ಕಂದಾಯ ಅಧಿಕಾರಿ ಕಚೇರಿಗಳಿಗೆ ಅಲೆದಾಡುವಂತಹ ಪರಿಸ್ಧಿತಿ ನಿರ್ಮಾಣವಾಗಿದೆ.

ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ವಿಶೇಷ ಚೇತನ ಮಹಿಳೆ ರಾಚಮ್ಮ (52 ವರ್ಷ) ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ಸ್ಥಳೀಯರ ಸಹಾಯದಿಂದ ರಾಮಪುರ ನಾಡ ಕಚೇರಿ ಮತ್ತು ಹನೂರು ತಹಸೀಲ್ದಾರ್‌ ಕಚೇರಿಗೆ ಅಲೆದಾಡುವಂತಾಗಿದೆ.

ಶೇ.90ರಷ್ಟು ವಿಕಲಚೇತನರಾಗಿರುವ ಮಹಿಳೆಗೆ ಯಾರೂ ಇಲ್ಲದ ಕಾರಣ ಪಿಂಚಣಿ ಭಾಗ್ಯವನ್ನು ಕರುಣಿಸಬೇಕಾಗಿ ನಿವಾಸಿಗಳು ಒತ್ತಾಯಿಸಿದ್ದಾರೆ.

ಶಾಸಕ ಮಂಜುನಾಥ್‌ಗೆ ಮನವಿ:

ಪೊನ್ನಾಚಿ ಗ್ರಾಮದ ವಿಶೇಷ ಚೇತನ ಮಹಿಳೆ ರಾಚಮ್ಮ ಅವರಿಗೆ ಪಿಂಚಣಿ ಕೊಡುವ ಸಂಬಂಧ ಅಧಿಕಾರಿಗಳಿಗೆ ತಾಕೀತು ಮಾಡಬೇಕೆಂದು ಗ್ರಾಮಸ್ಥರು ಮತ್ತು ಸಂತ್ರಸ್ಥೆಯು ಹನೂರು ಶಾಸಕ ಎಂ.ಆರ್‌. ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅಧಿಕಾರಿಗಳಿಗೆ ಹಿಡಿಶಾಪ:

ಪಿಂಚಣಿ ಕೊಡುವಲ್ಲಿ ಸತಾಯಿಸುತ್ತಿರುವ ರಾಮಪುರ ನಾಡ ಕಚೇರಿ ಮತ್ತು ಹನೂರು ತಹಸೀಲ್ದಾರ್‌ ಕಚೇರಿಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಡಿಶಾಪ ಹಾಕಿದ್ದಾರೆ. ವಿಕಲಚೇತನ ಮಹಿಳೆಯನ್ನು ವಿನಾಃಕಾರಣ ಅಲೆದಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲಗೊಂಡಿದ್ಧಾರೆ.

---

8ಸಿಎಚ್ಎನ್‌12ವಿಕಲಚೇತನ ಮಹಿಳೆ ರಾಚಮ್ಮ