ಸಾರಾಂಶ
ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಹಿನ್ನೆಲೆ ಹಾರ್ಡ್ವೇರ್ ಅಂಗಡಿಗೆ ಬೆಂಕಿ ತಗುಲಿ, 20 ಲಕ್ಷ ರು. ನಗದು ಹಾಗೂ 8 ಕೋಟಿ ರು. ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿಯಾಗಿರುವ ಘಟನೆ ಸಮೀಪದ ಭೀಮರಾಯನ ಗುಡಿ ಬಳಿ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
₹8 ಕೋಟಿ ಮೌಲ್ಯದ ವಸ್ತುಗಳು ಆಹುತಿ । ಅಂಗಡಿ ಮಾಲೀಕರಿಗೂ ಗಾಯ
ಕನ್ನಡಪ್ರಭ ವಾರ್ತೆ ಶಹಾಪುರಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಹಿನ್ನೆಲೆ ಹಾರ್ಡ್ವೇರ್ ಅಂಗಡಿಗೆ ಬೆಂಕಿ ತಗುಲಿ, 20 ಲಕ್ಷ ರು. ನಗದು ಹಾಗೂ 8 ಕೋಟಿ ರು. ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿಯಾಗಿರುವ ಘಟನೆ ಸಮೀಪದ ಭೀಮರಾಯನ ಗುಡಿ ಬಳಿ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
ಲಕ್ಷ್ಮಿ ಟ್ರೇಡರ್ಸ್ ಅಂಗಡಿ ಮಾಲೀಕ ಚೆನ್ನಾರೆಡ್ಡಿ ಗೌಡ ಗೋಗಿ ಎಂದಿನಂತೆ ತಮ್ಮ ಅಂಗಡಿ ಬಂದ್ ಮಾಡಿಕೊಂಡು ಸ್ವಗ್ರಾಮ ಗೋಗಿಗೆ ತೆರಳಿದ್ದರು. ಅಂಗಡಿಯಲ್ಲಿ ತಡರಾತ್ರಿ ಏಕಾಏಕಿ ಬೆಂಕಿ ಹತ್ತಿ ಉರಿಯುವುದನ್ನು ಸಿಸಿಟಿವಿ ಮೂಲಕ ಮೊಬೈಲ್ನಲ್ಲಿ ಗಮನಿಸಿ, ತಕ್ಷಣ ಅಂಗಡಿಗೆ ಧಾವಿಸಿದ್ದಾರೆ. ಬೀಗ ತೆಗೆದು ಅಂಗಡಿಯಲ್ಲಿದ್ದ 20 ಲಕ್ಷ ರು. ನಗದು ತೆಗೆದುಕೊಂಡು, ಹೊರಬರುವ ವೇಳೆ ದೊಡ್ಡ ಪ್ರಮಾಣದಲ್ಲಿ ಉರಿಯುತ್ತಿದ್ದ ಜ್ವಾಲೆಯಲ್ಲಿ ಸಿಲುಕಿದರು. ಇದರಿಂದ ಅವರ ಮೈಯೆಲ್ಲಾ ಸುಟ್ಟಿದೆ. ಅವರ ಬಳಿಯಿದ್ದ ನಗದೆಲ್ಲವೂ ಸುಟ್ಟು ಕರಕಲಾಗಿದೆ. ಅಲ್ಲಿದ್ದವರು ತಕ್ಷಣ ಚೆನ್ನಾರೆಡ್ಡಿ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ವಿದ್ಯುತ್ ಶಾರ್ಟ್ ಸಕ್ಯೂರ್ಟ್ ಅಥವಾ ಬೇರೆ ಕಾರಣದಿಂದ ಬೆಂಕಿ ತಗುಲಿದೆಯೇ ಅನ್ನುವ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಇದಕ್ಕೆ ಮೂಲ ಕಾರಣದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಂಗಡಿ ಮಾಲೀಕ ಗಾಯಗೊಂಡು ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಸದ್ಯ ಯಾವುದೇ ದೂರು ದಾಖಲಾಗಿಲ್ಲ.