ಸಾರಾಂಶ
ಕೊಪ್ಪಳ: ಕನ್ನಡ ಸಾಹಿತ್ಯ ಲೋಕದಲ್ಲಿ ಹರಿದಾಸ ಸಾಹಿತ್ಯಕ್ಕೆ ಪ್ರಮುಖ ಸ್ಥಾನಮಾನವಿದೆ ಎಂದು ನಗರದ ರಾಯರಮಠದ ಪ್ರಧಾನ ಆರ್ಚಕ ರಘು ಪ್ರೇಮಚಾರ್ಯ ಹೇಳಿದರು.ನಗರದ ಶ್ರೀವಿಠಲ ಕೃಷ್ಣ ಮಂದಿರದಲ್ಲಿ ನುಡಿಸಿರಿ ಆಚಾರ್ಯ ವಸಂತ ಕುಷ್ಟಗಿ ಪ್ರತಿಷ್ಠಾನ, ಕಲಬುರಗಿ ಏರ್ಪಡಿಸಿದ್ದ 2ನೇ ವಾರ್ಷಿಕ ಕಾರ್ಯಕ್ರಮ ಹಾಗೂ ವಸಂತರ 86ನೇ ಸಾಧನ ಹಬ್ಬ-ಸಾದ್ವಿ ಶಕುಂತಲಾ ವಸಂತ ಕುಷ್ಟಗಿ ಸ್ಮರಣೆಯಲ್ಲಿ ನೀಡಲಾಗುವ ಶ್ರೀ ಹರಿದಾಸ ಸಿರಿಬಾಗಿಣ ಹಾಗೂ ಶ್ರೀ ಹರಿದಾಸ ವಸಂತ ರತ್ನ ಸಮ್ಮಾನ್-2 ಪ್ರಶಸ್ತಿ ಪ್ರದಾನ, ಉಪನ್ಯಾಸ ಮತ್ತು ಹರಿಕೀರ್ತನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಿ ಆಶೀರ್ವಚನ ನೀಡಿದರು.ಹರಿದಾಸರ ಚಿಂತನೆಗಳ ಭಕ್ತಿ ಸಾಹಿತ್ಯದ ಪ್ರಸಾರ, ಪ್ರಚಾರ ಮಾತ್ರವಲ್ಲ ದಾಸರ ಆಶಯಗಳನ್ನು ಅರಿತು ಅನುಭವಿಸುತ್ತಾ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮಹತ್ವದ ಸಂಕಲ್ಪ. ಸ್ನೇಹದಲ್ಲಿದ್ದ ಹಿರಿಯ ಸಾಹಿತಿ ವಸಂತ ಕುಷ್ಟಗಿ ಈ ಎಲ್ಲ ಚಿಂತನೆಗಳನ್ನು ತಮ್ಮ ನಿತ್ಯ ಬದುಕಿನಲ್ಲಿ ಅನುಷ್ಠಾನ ಮಾಡಿದವರು ಎಂದರು.
ಹೈದರಾಬಾದ್ ಕರ್ನಾಟಕದಲ್ಲಿ ಆಗ ರಜಾಕರ ಹಾವಳಿ. ಅವರ ವಿರುದ್ಧ ಸೆಟೆದು ನಿಂತ ಭಾರತೀಯರು ಹಿಂದೂಸ್ಥಾನದಲ್ಲಿ ವಿಲೀನಗೊಳ್ಳಲು ಹೋರಾಟಕ್ಕಿಳಿದಿದ್ದರು. ಅದು ಮುದ್ರಣ ವ್ಯವಸ್ಥೆಯೇ ಇಲ್ಲದ ಸಂದರ್ಭ. ಆ ಕಾಲಘಟ್ಟದಲ್ಲಿ ವಸಂತರು ಬಾಲ್ಯಾವಸ್ಥೆಯ ಹುಡುಗ. ಎಲ್ಲರಲ್ಲೂ ರಾಜ್ಯದ ಬಗ್ಗೆ ಪ್ರೇಮ ತುಂಬುವ ಲೇಖನಗಳನ್ನು ರಚಿಸಿ, ಸಂಗ್ರಹಿಸಿ ಕೈಬರಹದಲ್ಲಿ ಪತ್ರಿಕೆ ಸಿದ್ಧಪಡಿಸಿದ್ದರು. ರಾಷ್ಟ್ರ, ಸನಾತನ, ಅಧ್ಯಾತ್ಮ, ಸಾಹಿತ್ಯ, ಭಾಷೆ, ಸಾಮಾಜಿಕ ನ್ಯಾಯ ಎಲ್ಲ ಆಯಾಮಗಳಲ್ಲಿ ಅವರ ಬರಹ ಹಾಗೂ ಉಪನ್ಯಾಸಗಳು ಭಕ್ತಿಯ ಸೆಲೆಯಾಗಿ ಮೂಡಿಬಂದಿವೆ ಎಂದರು.ನಿವೃತ್ತ ಶಿಕ್ಷಕಿ ರಾಧಾ ಜೋಶಿ ದೀಕ್ಷಿತ ನಾಕಂಡಂತೆ ಆಚಾರ್ಯ ವಸಂತ ಕುಷ್ಟಗಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಶಕುಂತಲಾ ವಸಂತ ಕುಷ್ಟಗಿ ಸ್ಮರಣೆಯಲ್ಲಿ ನೀಡುವ ವಾರ್ಷಿಕ ಶ್ರೀ ಹರಿದಾಸ ಸಿರಿ ಬಾಗಿಣ ಪ್ರಶಸ್ತಿಯನ್ನು ಪದ್ಮಶ್ರೀ ಪೂಜಾರ ಅವರಿಗೆ ನೀಡಲಾಯಿತು. ಹುನಗುಂದ ಮತ್ತು ಸಂಗಡಿಗರು ಹರಿ ಕೀರ್ತನೆ ನಡೆಸಿಕೊಟ್ಟರು.