ಬೆಳ್ತಂಗಡಿ: ಕಳೆದ ಎರಡೂವರೆ ವರ್ಷಗಳಿಂದ ಸರ್ಕಾರದಿಂದ ಯಾವುದೇ ಅಂಗನವಾಡಿ ಕೇಂದ್ರಗಳು ಮಂಜೂರುಗೊಂಡಿಲ್ಲ. ಜಿ.ಪಂ. ಮತ್ತು ತಾ.ಪಂ.ನಿಂದ ಮಂಜೂರುಗೊಂಡಿರುವ ಅನುದಾನವನ್ನು ಆದ್ಯತೆ ಮೇರೆಗೆ ನಿಡಿಗಲ್ ಮತ್ತು ಮರೋಡಿಗೆ ಮೀಸಲಿರಿಸುವ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಸೋಮವಾರ ನಿಡಿಗಲ್ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಕಾಮಗಾರಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.17 ಲಕ್ಷ ರು. ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಲಿದೆ, ಕಲ್ಮಂಜ ಶಾಲೆಗೆ 12 ಲಕ್ಷ ರು, ಪ್ರೌಢ ಶಾಲಾ ಅಭಿವೃದ್ಧಿಗೆ 17 ಲಕ್ಷ ರು. ಅನುದಾನ ನೀಡಲಾಗಿದೆ. ಗುಮ್ಮಟಬೈಲು ತಡೆಗೋಡೆಗೆ 30 ಲಕ್ಷ ರು, ಗುತ್ತುಬೈಲು ಸೇತುವೆ ತಡೆಗೋಡೆ 35 ಲಕ್ಷ ರು, ಆರ್ಲ ರಸ್ತೆ ಮರುಡಾಮರೀಕರಣಕ್ಕೆ 6 ಲಕ್ಷ ರು ಒದಗಿಸಲಾಗಿದೆ. 3 ಸೇತುವೆ ನಿರ್ಮಾಣ 3.75 ಕೋಟಿ ರು ವೆಚ್ಚದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ, ಕಾರ್ಯದರ್ಶಿ ಸರೋಜಿನಿ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜನಾರ್ದನ ಕೆಬಿ, ಇಂಜಿನಿಯರ್ ಸಂದೀಪ್ ಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಗುತ್ತಿಗೆದಾರರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಪಂಚಾಯಿತಿ ಮಾಜಿ ಸದಸ್ಯರುಗಳು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಶಿಧರ್ ಕಲ್ಮಂಜ, ಕಲ್ಮಂಜ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್, ಗ್ರಾಮಸ್ಥರಾದ ಶ್ರೀಧರ್ ಎಂ ಪಿಲತಬೆಟ್ಟು, ಹರೀಶ್ ದೇವಾಡಿಗ ನಿಡಿಗಲ್, ಸತ್ಯನಾರಾಯಣ ಭಜನಾ ಮಂಡಳಿಯ ಸಂತೋಷ್ ಹೆಗ್ಡೆ, ಹಿರಿಯರಾದ ಮೋನಪ್ಪ ಗೌಡ, ಮೋನಪ್ಪ ಟಿ, ಧರ್ಮಪ್ಪ, ಕಿರಣ್ ಟಿ, ಸಚಿನ್, ಪೂರ್ಣಿಮಾ, ರಾಘವೇಂದ್ರ, ಹರೀಶ್, ಸುಧೀರ್, ಭದ್ರಯ್ಯ, ಪಂಚಾಯಿತಿ ಸಿಬ್ಬಂದಿ ವರ್ಗದವರು, ಅಂಗನವಾಡಿ ಸಹಾಯಕಿ ಲಕ್ಷ್ಮೀ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ನಳಿನಾಕ್ಷಿ ಸ್ವಾಗತಿಸಿ ವಂದಿಸಿದರು.

ಒಬ್ಬ ಜನಪ್ರತಿನಿಧಿ ಮಾಡಿದಂತಹ ಕೆಲಸಗಳನ್ನು ಗ್ರಾಮಸ್ಥರು ಸದಾ ನೆನಪಿನಲ್ಲಿ ಇಟ್ಟುಕೊಂಡಾಗ ಮಾತ್ರ ಆ ಗ್ರಾಮದಲ್ಲಿ ಇನ್ನಷ್ಟು ಕೆಲಸ ಮಾಡುವುದಕ್ಕೆ ಮನಸ್ಸು ಬರುತ್ತದೆ. ಕಲ್ಮಂಜ ಗ್ರಾಮಸ್ಥರು, ಮಾಡಿದ್ದನ್ನು ನೆನಪಿಟ್ಟುಕೊಳ್ಳುವಂತಹ ಜಾಯಮಾನವನ್ನು ಬೆಳೆಸಿಕೊಳ್ಳಬೇಕು. ಪಜಿರಡ್ಕದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಎಷ್ಟು ಕೆಲಸ ಮಾಡಿದ್ದೇನೆ ಎಂಬುದು ನನಗೆ ಗೊತ್ತಿದೆ. ನೀವು ಎಷ್ಟು ಮಾಡಿದ್ದೀರಿ ಎಂಬುದು ಕೂಡ ನನಗೆ ಗೊತ್ತಿದೆ. ಮಾಡಿರುವ ಕೆಲಸವನ್ನು ನೆನಪಿಟ್ಟುಕೊಳ್ಳುವಂತಹ ವ್ಯವಸ್ಥೆಯನ್ನು ಸಹ ಮಾಡಬೇಕು, ಇಲ್ಲದಿದ್ದರೆ ಅದಕ್ಕೆ ಮನುಷ್ಯತ್ವ ಎಂದು ಹೇಳುವುದಿಲ್ಲ.ಹರೀಶ್ ಪೂಂಜ ಬೆಳ್ತಂಗಡಿ ಶಾಸಕರು