ಸಾರಾಂಶ
ಪ್ರಧಾನಿ ಮೋದಿಯವರು ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬಜೆಟ್ ನಲ್ಲಿ 1.4 ಲಕ್ಷ ಕೋಟಿ ರು. ಹಣವನ್ನು ಕೃಷಿಗಾಗಿಯೇ ನೀಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಿಂದಲೂ ರೈತರಿಗೆ ಹಣ ಬರುತ್ತಿದೆ. ಇದೆಲ್ಲ ಹರಿಯಾಣದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿ ಆಗಿದೆ .
ರಾಮನಗರ: ಹರಿಯಾಣ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ಮತ್ತು ಹರಿಯಾಣದಲ್ಲಿ ಕೇಂದ್ರ ಸರ್ಕಾರದ ಹಲವು ಕೃಷಿ ನೀತಿಗಳ ಬಗ್ಗೆ ಹೋರಾಟ ನಡೆದಿತ್ತು. ಈಗ ಹರಿಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿರುವುದು ಸಂತೋಷದ ವಿಚಾರ ಎಂದರು.ಪ್ರಧಾನಿ ಮೋದಿಯವರು ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬಜೆಟ್ ನಲ್ಲಿ 1.4 ಲಕ್ಷ ಕೋಟಿ ರು. ಹಣವನ್ನು ಕೃಷಿಗಾಗಿಯೇ ನೀಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಿಂದಲೂ ರೈತರಿಗೆ ಹಣ ಬರುತ್ತಿದೆ. ಇದೆಲ್ಲ ಹರಿಯಾಣದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿ ಆಗಿದೆ ಎಂದು ಹೇಳಿದರು.
ಕಾಶ್ಮೀರದಲ್ಲಿ ಇನ್ನೂ ವಾಸ್ತವ ಜನರಿಗೆ ಮನವರಿಕೆ ಆಗಿಲ್ಲ. ಆರ್ಟಿಕಲ್ 370 ರದ್ದಿನ ಬಳಿಕ ಅಲ್ಲಿಯ ಪರಿಸ್ಥಿತಿ ಬದಲಾಗಿದೆ. ಕಾಲಕ್ರಮೇಣ ಅಲ್ಲೂ ಬಿಜೆಪಿ ಬೇರೂರಲಿದೆ. ಸದ್ಯ ಅಲ್ಲಿ ಕಾಂಗ್ರೆಸ್ ಒಕ್ಕೂಟಕ್ಕೆ ಜಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಜನರಿಗೆ ವಾಸ್ತವ ಅರ್ಥವಾದ ಬಳಿಕ ಅಲ್ಲೂ ಬದಲಾವಣೆ ಆಗಲಿದೆ ಎಂದು ತಿಳಿಸಿದರು.ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಎರಡೂ ಪಕ್ಷಗಳ ವರಿಷ್ಠರು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ನಾನು ಮಾತನಾಡುವುದಿಲ್ಲ. ಅಭ್ಯರ್ಥಿ ಆಯ್ಕೆಗೆ ಸಮನ್ವಯ ಸಮಿತಿ ಇದೆ. ಆದರೆ, ಆ ಸಮಿತಿಯಲ್ಲಿ ನಾನು ಇಲ್ಲದಿರುವ ಕಾರಣ ನನಗೆ ಮಾಹಿತಿ ಇಲ್ಲ ಎಂದು ಮಂಜುನಾಥ್ ಉತ್ತರಿಸಿದರು.