ಜೀವನದಲ್ಲಿ ಗುರಿ ಸಾಧಿಸುವ ಛಲ ಇರಲಿ: ಉಮೇಶ ಚಿಕ್ಕಮಠ

| Published : Sep 24 2025, 01:01 AM IST

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ಆಸಕ್ತಿ ಮುಖ್ಯ. ಅದರೊಂದಿಗೆ ಆದರ್ಶಗಳು ಸೇರಿಕೊಂಡರೆ ಆ ವ್ಯಕ್ತಿ ಮುಂದೆ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗುತ್ತಾನೆ.

ನರೇಗಲ್ಲ: ಮನುಷ್ಯನಿಗೆ ಜೀವನದಲ್ಲಿ ಗುರಿ ಇರಬೇಕು. ಅದನ್ನು ಸಾಧಿಸುವ ಛಲ ಇರಬೇಕು. ಅಂದಾಗ ಮಾತ್ರ ಆತ ತನ್ನ ನಿಶ್ಚಿತ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಹುಬ್ಬಳ್ಳಿ ದಕ್ಷಿಣ ವಲಯದ ಎಸಿಪಿ ಉಮೇಶ ಚಿಕ್ಕಮಠ ತಿಳಿಸಿದರು.ಸ್ಥಳೀಯ ಶ್ರೀ ಅನ್ನದಾನೇಶ್ವರ ಪಪೂ ಕಾಲೇಜಿನ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.ವಿದ್ಯಾರ್ಥಿ ಜೀವನದಲ್ಲಿ ಆಸಕ್ತಿ ಮುಖ್ಯ. ಅದರೊಂದಿಗೆ ಆದರ್ಶಗಳು ಸೇರಿಕೊಂಡರೆ ಆ ವ್ಯಕ್ತಿ ಮುಂದೆ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗುತ್ತಾನೆ. ಗುರುಗಳ ಮಾತನ್ನು ಎಂದಿಗೂ ತೆಗೆದು ಹಾಕಬೇಡಿ. ನೀವು ಯಾರೊಂದಿಗೆ ಸಹವಾಸ ಮಾಡಿರುತ್ತಿರೋ ಅದೇ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ ಯಾವಾಗಲೂ ಒಳ್ಳೆಯ ಮಿತ್ರರ ಸಹವಾಸದಲ್ಲಿ ಕಾಲ ಕಳೆಯಿರಿ. ಸಂಸ್ಕಾರಗಳನ್ನು ಬೆಳೆಸಿಕೊಳ್ಳಿ ಎಂದರು.

ಮುಖಂಡ ಮಿಥುನ್ ಪಾಟೀಲ ಮಾತನಾಡಿ, ಈ ಸಂಸ್ಥೆ ಉತ್ತರ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದೆ. ಇಲ್ಲಿ ಕಲಿತ ಸಹಸ್ರಾರು ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ತಮ್ಮ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವ ಮೂಲಕ ಈ ಸಂಸ್ಥೆಯ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆ ಎಂದರು.ಶ್ರೀಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ನಿಮ್ಮಲ್ಲಿ ಬಸವರಾಜ ಉಮ್ರಾಣಿಯವರ ಏಕಾಗ್ರತೆ ಬರಬೇಕು. ನಿರಂತರ ಸಂತೋಷಿಯಾಗಿ ಬದುಕುವುದನ್ನೇ ಯಶಸ್ಸು ಎನ್ನುತ್ತಾರೆ. ಯಾರ ಮನಸ್ಸು ದುರ್ಬಲವಾಗಿರುತ್ತದೆಯೋ ಅವರು ಯಾವಾಗಲೂ ಸೋಲುತ್ತಾರೆ. ಸೋತವರು ದುಃಖಿಯಾಗಿರುತ್ತಾರೆ. ಆದ್ದರಿಂದ ನೀವೆಂದಿಗೂ ಸೋಲದಂತೆ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಕು. ಇತರರ ಉನ್ನತಿಯನ್ನು ಕಂಡು ಸಂತೋಷಿಸಿ, ಬದಲಾಗಿ ಅವರ ಬಗ್ಗೆ ಹೊಟ್ಟೆಕಿಚ್ಚು ಪಟ್ಟರೆ ನಿಮ್ಮ ವ್ಯಕ್ತಿತ್ವವೇ ನಾಶವಾದಂತೆ. ಕೋಪ, ದ್ವೇಷಗಳು ಎಂದಿಗೂ ಮನುಷ್ಯನನ್ನು ಏಳಿಗೆ ಮಾಡುವುದಿಲ್ಲ. ಆದ್ದರಿಂದ ಎಂದಿಗೂ ಸಮಾಧಾನಿಯಾಗಿರುವ ಗುಣವನ್ನು ಬೆಳೆಸಿಕೊಂಡು ನಿಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಿ ಎಂದರು.ಪ್ರಾ. ವೈ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಉಮ್ರಾಣಿ, ಚೇರಮನ್ ಎಂ.ಜಿ. ಸೋಮನಕಟ್ಟಿ, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಬಸವರಾಜ ಕಳಕಣ್ಣವರ, ಎಂ.ಪಿ. ಪಾಟೀಲ, ಮಲ್ಲಣ್ಣ, ಬಿ.ಎಸ್. ಗೌಡರ, ಪ್ರಭುರಾಜ ಕರಮುಡ ಇದ್ದರು.