ಸಾರಾಂಶ
ಯಲ್ಲಾಪುರ ತಾಲೂಕಿನ ಹಿರೇಸರದ ಪ್ರಮುಖ ಸಹಕಾರಿ ಜಿ.ಎನ್. ಹೆಗಡೆ ಅವರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಖಿಲ ಹವ್ಯಕ ಮಹಾಸಭಾವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ 3ನೆಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹೆಗಡೆ ಅವರನ್ನು ಗೌರವಿಸಲಾಯಿತು.
ಯಲ್ಲಾಪುರ: ಅಖಿಲ ಹವ್ಯಕ ಮಹಾಸಭಾವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ 3ನೆಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ತಾಲೂಕಿನ ಹಿರೇಸರದ ಪ್ರಮುಖ ಸಹಕಾರಿ ಜಿ.ಎನ್. ಹೆಗಡೆ ಅವರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರ ಸಮ್ಮುಖದಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಶುಕ್ರವಾರ ನೀಡಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಎ. ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಚಲನಚಿತ್ರ ನಟರಾದ ರಮೇಶ ಅರವಿಂದ್, ಶ್ರೀಧರ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಕರ್ನಾಟಕ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ, ಪತ್ರಕರ್ತ ಚನ್ನೇಗೌಡ, ಶಾಸಕರಾದ ರವಿ ಸುಬ್ರಹ್ಮಣ್ಯ, ಸಾಹಿತಿ, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ ರಾವ್ ಹತ್ವಾರ್ (ಜೋಗಿ), ಗಾಯಕಿ ಸಂಗೀತಾ ಕಟ್ಟಿ ಉಪಸ್ಥಿತರಿದ್ದರು.
1983 ರಲ್ಲಿ ಹಿರೇಸರದ ದಳಪತಿಯಾಗಿ ನೇಮಕಗೊಂಡು ಇವರು ಗ್ರಾಮವನ್ನು ಅಪರಾಧರಹಿತವನ್ನಾಗಿಸಿದರು. ಆನಂತರ ಹಿತ್ಲಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿಯೂ ಸುಮಾರು 3 ದಶಕಗಳ ಕಾಲ ಸೇವೆ ಸಲ್ಲಿಸಿದರು. ಹಿರೇಸರದಲ್ಲಿ ಶ್ರೀಮಠ ಟ್ರಸ್ಟ್ ಸ್ಥಾಪಿಸಿ, ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ವಿಸ್ತರಿಸಿದರು. ಸ್ವರ್ಣವಲ್ಲೀ ಮಹಾಸಂಸ್ಥಾನದ ಉಪಾಧ್ಯಕ್ಷರೂ ಆಗಿದ್ದ ಜಿ.ಎನ್. ಹೆಗಡೆ ಅವರಿಗೆ ಇತ್ತೀಚೆಗೆ ಸಹಕಾರ ರತ್ನ ಪ್ರಶಸ್ತಿ ದೊರೆತಿದೆ. ಈ ಹಿಂದೆ ರಾಜೀವ ಗಾಂಧಿ ಸದ್ಭಾವನಾ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ಲಭ್ಯವಾಗಿವೆ. ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶ ಸಹಕಾರಿ ಸೌಹಾರ್ದದ ಅಧ್ಯಕ್ಷರಾಗಿರುವ ಜಿ.ಎನ್. ಹೆಗಡೆ ಅವರ ಸಹಕಾರಿ ಸಾಧನೆ ಪರಿಗಣಿಸಿ, ಈ ಪ್ರಶಸ್ತಿ ನೀಡಲಾಗಿದೆ.