ಸಾರಾಂಶ
ಹಜರತ್ ಜಮಾಲಶಾವಲಿ ಶರಣರ ಜಾತ್ಯತೀತ ಸಂತರು, ಅದಕ್ಕಿಂತ ಮಿಗಿಲಾಗಿ ಅಖಂಡ ಮಾನವ ಸಮುದಾಯದ ಹಿತಾಸಕ್ತಿ, ಕ್ರಿಯಾಶೀಲ ಬದುಕಿನ ಬಗ್ಗೆ ಧರ್ಮದ ಗಡಿ ದಾಟಿ ಚಿಂತಿಸಿ ಲೋಕ ಸಂಚಾರ ಮಾಡಿ ತಾವು ಕಂಡ ಜ್ಞಾನವನ್ನು ಸರಳವಾಗಿ ಪ್ರಸಾರ ಮಾಡಿದ ವಿಶ್ವ ಧರ್ಮಿಗಳಾಗಿದ್ದರು.
ರಿಯಾಜಅಹಮ್ಮದ ಎಂ. ದೊಡ್ಡಮನಿ ಡಂಬಳ
ಸಾಮರಸ್ಯದ ಸಂಕೇತವಾಗಿರುವ ಡಂಬಳ ತೋಂಟದಾರ್ಯ ಜಾತ್ರಾ ಮಹೋತ್ಸವದ ನಂತರ ಸೂಫಿ ಸಂತ ಹಜರತ್ ಜಮಾಲಶಾವಲಿ ಶರಣರ ಉರೂಸ್ ಫೆ. 15 ಮತ್ತು 16 ರಂದು ಅದ್ಧೂರಿಯಾಗಿ ಜರುಗಲಿದೆ.ಫೆ. 15 ರಂದು ರಾತ್ರಿ 8 ಕ್ಕೆ ಗಂಧದ ಮೆರವಣಿಗೆ, ಚಕ್ಕಡಿಯಲ್ಲಿ ನಗಾರಿ ಹೊತ್ತ ಎತ್ತುಗಳ ಮೆರವಣಿಗೆ ರಾತ್ರಿಯಲ್ಲ ನಡೆದು ಬೆಳಗಿನ 5 ಕ್ಕೆ ದರ್ಗಾಕ್ಕೆ ತಲುಪಲಿದೆ.
ಫೆ. 16 ರಂದು ಬೆಳಗ್ಗೆಯಿಂದ ಸಂಜೆಯವರೆಗೂ ಗ್ರಾಮದ ರೈತರಿಂದ ಎತ್ತುಗಳ ಮೆರವಣಿಗೆ ನಡೆಯಲಿದ್ದು, ರಾತ್ರಿ ಅನ್ನ ಸಂತರ್ಪಣೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಹಜರತ್ ಜಮಾಲಶಾವಲಿ ಶರಣರ ಜಾತ್ಯತೀತ ಸಂತರು, ಅದಕ್ಕಿಂತ ಮಿಗಿಲಾಗಿ ಅಖಂಡ ಮಾನವ ಸಮುದಾಯದ ಹಿತಾಸಕ್ತಿ, ಕ್ರಿಯಾಶೀಲ ಬದುಕಿನ ಬಗ್ಗೆ ಧರ್ಮದ ಗಡಿ ದಾಟಿ ಚಿಂತಿಸಿ ಲೋಕ ಸಂಚಾರ ಮಾಡಿ ತಾವು ಕಂಡ ಜ್ಞಾನವನ್ನು ಸರಳವಾಗಿ ಪ್ರಸಾರ ಮಾಡಿದ ವಿಶ್ವ ಧರ್ಮಿಗಳಾಗಿದ್ದರು.
ಆಕರ್ಷಣೆ:ಗ್ರಾಮದಲ್ಲಿ ಎಲ್ಲ ರೈತರು ಉರೂಸ್ ದಿನದಂದು ಎತ್ತುಗಳನ್ನು ಸಿಂಗರಿಸಿಕೊಂಡು ವಾದ್ಯಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದರ್ಗಾದ ಸುತ್ತ ಐದು ಬಾರಿ ಸುತ್ತನ್ನು ಹಾಕಿಸಿ ಸಕ್ಕರೆಯ ಪೂಜೆ ಮಾಡಿಸುವ ಮೂಲಕ ಭಕ್ತಿ ಸಲ್ಲಿಸುವುದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.ಪವಾಡಗಳ ದರ್ಗಾ: ಎತ್ತುಗಳ ಆರೋಗ್ಯದಲ್ಲಿ ಏರುಪೇರಾದರೆ ರೈತರು ಜಮಾಲಶಾವಲಿ ಶರಣರ ದರ್ಗಾಕ್ಕೆ ತೆರಳಿ ಭಕ್ತಿ ಸಮರ್ಪಿಸಿದ ನಂತರ ಎತ್ತುಗಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ. ಭಕ್ತರ ಆಶಯ, ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ.
ಧರ್ಮ ಸಮನ್ವಯ, ಸಾಮರಸ್ಯತ್ವ ಮೂಡಿಸಿ ಜಾತ್ಯತೀತ ತತ್ವ ಜಾಗೃತಗೊಳಿಸಿ ಭಕ್ತರ ಪಾಲಿನ ಆಶಾಕಿರಣವಾಗಿ, ಜೀವನೋತ್ಸಾಹ ತುಂಬುತ್ತಿರುವ ಜಮಾಲಶಾವಲಿ ಶರಣರು ಹಾಕಿಕೊಟ್ಟ ಸದ್ವಿಚಾರಗಳು ಇಂದಿಗೂ ಪ್ರಸ್ತುತ ಎಂದು ಖಾಜಾಹುಸೇನ್, ಮಹಮ್ಮದರಫೀಕ ಹೇಳಿದರು.ಬಸವತತ್ವದ ಜಾಗೃತಪೀಠ ತೋಂಟದಾರ್ಯ ಮಠದ ಜಾತ್ರೆಯ ನಂತರ ಪ್ರತಿ ವರ್ಷ ಹಜರತ ಜಮಾಲಶಾವಲಿ ಶರಣರ ಗಂಧ ಮತ್ತು ಉರೂಸ್ ನಡೆಯುವುದು ಭಾವೈಕ್ಯತೆಯ ಸಂಕೇತವಾಗಿದೆ ಎಂದು ಸಮಾಜ ಸೇವಕ ಜಾಕೀರ ಖಾದರಸಾಬ ಮೂಲಿಮನಿ ಹೇಳಿದರು.
ಲಿಂ. ಡಾ ಸಿದ್ಧಲಿಂಗ ಶ್ರೀಗಳು, ಡಾ. ಸಿದ್ದರಾಮ ಶ್ರೀಗಳು ಭಾವೈಕ್ಯತೆ ಮೂಡಿಸಿದ ಹಜರತ್ ಜಮಾಲಶಾವಲಿ ಶರಣರು ಭಕ್ತರ ಪಾಲಿನ ಆಶಾ ಕಿರಣವಾಗಿದ್ದಾರೆ ಎಂದು ಸಮಿತಿ ಸದಸ್ಯರಾದ ಗೌಸುಸಾಬ್ ಆಲೂರ, ಶಫೀಕ್ ಮೂಲಿಮನಿ, ಮೋಹದ್ದಿನ ಚಾಂದಖಾನವರ, ಹಾಮದ ಸರಕಾವಾಸ, ಬುಡ್ನೆಸಾಬ್ ಅತ್ತಾರ, ಇಂತಿಯಾಜ ದಪೇದಾರ, ಮಹಬೂಬ್ ಬನ್ನಿಕೊಪ್ಪ, ಮುರ್ತುಜಾ ಮನಿಯಾರ ತಿಳಿಸಿದ್ದಾರೆ.