ಎಚ್ಡಿಕೆ ಅಭಿವೃದ್ಧಿ ನಮ್ಮ ಕೈ ಹಿಡಿಯುತ್ತೆ: ನಿಖಿಲ್‌

| Published : Oct 29 2024, 12:48 AM IST

ಸಾರಾಂಶ

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿರವರು ಮಾಡಿರುವ ಅಭಿವೃದ್ಧಿ ಕೆಲಸಗಳು ನಮ್ಮ ಕೈ ಹಿಡಿಯುತ್ತವೆ ಎಂದು ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿರವರು ಮಾಡಿರುವ ಅಭಿವೃದ್ಧಿ ಕೆಲಸಗಳು ನಮ್ಮ ಕೈ ಹಿಡಿಯುತ್ತವೆ ಎಂದು ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಚನ್ನಪಟ್ಟಣ ಕ್ಷೇತ್ರದ ಪ್ರಸಿದ್ಧ ಹುಣಸನಹಳ್ಳಿ ಶ್ರೀ ಬಿಸಲಮ್ಮ ಕರಗದ ಮನೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಇಬ್ಬರು ನಾಯಕರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಉಳಿದ ಕಾರ್ಯಗಳನ್ನು ನಾನು ಮುಂದುವರೆಸುತ್ತೇನೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಅದಕ್ಕಾಗಿ ಯೋಗೇಶ್ವರ್ ಗೆಲ್ಲಿಸಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ಗಮನಿಸಿದ್ದೇನೆ. ರಾಜಕೀಯವಾಗಿ ಮಾತನಾಡೋದು ಸರ್ವೆ ಸಾಮಾನ್ಯ.ಆದರೆ ಮೊಮ್ಮಗನ ಪಟ್ಟಾಭಿಷೇಕಕ್ಕೆ ದೇವೇಗೌಡ್ರು ಆ್ಯಂಬುಲೆನ್ಸ್ ನಲ್ಲಿ ಬರ್ತಾರೆ ಅನ್ನೊದು ಸರಿಯಲ್ಲ. ಅಂತಹ ದುರ್ದೈವ ನಮಗೆ ಬಂದಿಲ್ಲ. ರಾಜ್ಯದ ಜನರ ಆಶಿರ್ವಾದಿಂದ ಅವರು ಶಕ್ತಿಯುತವಾಗಿದ್ದಾರೆ. ದೀಪಾವಳಿ ಬಳಿಕ ಅವರೇ ಬಂದು ಪ್ರಚಾರ ಮಾಡ್ತಾರೆ‌ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದರು.

ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ:

ದೇವೇಗೌಡರ ಬಗ್ಗೆ ವಿರೋಧಿಗಳು ಹಗುರವಾಗಿ ಮಾತನಾಡುತ್ತಿದ್ದಾರೆ. ನಾನು‌ ಮಂಡ್ಯ ಸ್ಪರ್ಧೆ ಮಾಡಿದಾಗ ಸೋಲಿಸಿದ್ದು ಯಾರು.? ಅಲ್ಲೂ ನಾನು ಮಾಡದ ತಪ್ಪಿಗೆ ಅನ್ಯಾಯ ಆಯ್ತು. ರಾಮನಗರದಲ್ಲೂ ಕೂಪನ್ ಹಂಚಿ ಅಮಾಯಕರನ್ನು ದಾರಿತಪ್ಪಿಸಿದರು. ಅಲ್ಲೂ ಕುತಂತ್ರದಿಂದ ನನ್ನನ್ನ ಸೋಲಿಸಿದರು. ಕೊನೆ ಹಂತದಲ್ಲಿ ಕಾರ್ಯಕರ್ತರನ್ನು ಉಳಿಸಬೇಕು‌ ಎರಡೂ ಪಕ್ಷಗಳ‌ ಗೌರವ ಕಾಪಾಡಲು ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.

ಪ್ರಧಾನಿ‌ ಮೋದಿ ಜೀ ಅವರ ಗೌರವ ಉಳಿಸಬೇಕು. ನಿಮ್ಮ ಮನೆ ಮಗ ಅಂತ ತಿಳಿದು ಅವಕಾಶ ಕೊಡಿ. ನಿಮ್ಮ ಪರವಾಗಿ ಕೆಲಸ ಮಾಡಲು ಈ ಬಾರಿ ಗೆಲ್ಲಿಸಿ.ನಾನು ಚಿತ್ರ ನಟ ಆಗಿ ಕೆಲಸ ಮಾಡ್ತಿದ್ದೆ. ದೇವೇಗೌಡರ ಮಾರ್ಗದರ್ಶನ ಮೇಲೆ ಜನಸೇವೆಗೆ ಬಂದಿದ್ದೇನೆ. ಅಧಿಕಾರ ಇರಲಿ, ಇಲ್ಲದೇ ಹೋಗಲಿ ಮನೆ ಬಳಿ ಬಂದವರಿಗೆ ಸಹಾಯ ಮಾಡಿದ್ದೇವೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಮಂಡ್ಯದಲ್ಲಿ ಉದ್ಯೋಗ ಮೇಳ ಮಾಡಿದ್ವಿ. 5ಸಾವಿರ ಅರ್ಜಿಗಳು ಬಂದಿದ್ದವು. 1200 ಯುವಕರಿಗೆ ಉದ್ಯೋಗ ದೊರಕಿದೆ. ಯುವಜನತೆಗೆ ಸಾಕಷ್ಟು ಓದುತ್ತಿದ್ದಾರೆ, ಅವರಿಗೆ ಉದ್ಯೋಗವಕಾಶ ಸಿಗಬೇಕು. ಅದಕ್ಕೆ ಪ್ರಮಾಣಿಕ ಪ್ರಯತ್ನ ಮಾಡ್ತೇವೆ.ಕಾರ್ಖಾನೆಗಳನ್ನ ತಂದು ಎಲ್ಲರಿಗೂ ಉದ್ಯೋಗ ಕೊಡುವ ಕೆಲಸ ಮಾಡ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ನನ್ನ ಹಣೆಬರಹ ನಿರ್ಧರಿಸೋದು ದೇವರು ಮತ್ತು ಜನ :

ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಣ್ಣ 1500 ಕೋಟಿ ಅನುದಾನ ತಂದಿದ್ದಾರೆ.ನನ್ನ ಹಣೆಯ ಬರಹ ನಿರ್ಧಾರ ಮಾಡುವುದು ಒಂದು ದೇವರು, ಇನ್ನೋಂದು ಈ ಕ್ಷೇತ್ರದ ಜನರು. ವಿರೋಧಿಗಳು ನಮ್ಮ ಹಣೆಯ ಬರಹ ಬದಲಿಸಲು ಆಗಲ್ಲ. ದಯಮಾಡಿ ಈ ಬಾರಿ ನನಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

25ಸಾವಿರ ಕೋಟಿ ಎಸ್ಇಪಿ, ಟಿಇಪಿ ಹಣ ಏನಾಯ್ತು:

ಇದು ಕೇವಲ ನಿಖಿಲ್ ಕುಮಾರಸ್ವಾಮಿ ಗೆಲುವು ಸೋಲಿನ ವಿಚಾರ ಅಲ್ಲ. ಪ್ರಾದೇಶಿಕ ಪಕ್ಷಗಳ ಅಳಿವು, ಉಳಿವಿನ ಪ್ರಶ್ನೆ. ಪಕ್ಷ ಉಳಿಯಬೇಕು ಅಂದರೆ ಬೆಂಬಲ ಕೊಡಿ. ಕಾಂಗ್ರೆಸ್ ನ ಹೇಳಿಕೆಗಳನ್ನು ಗಮನಿಸಿ. ಹಿಂದುಳಿದ ವರ್ಗಗಳ ಹೆಸರೇಳಿ ರಾಜಕೀಯ ಮಾಡುತ್ತಿದ್ದಾರೆ.ಅಧಿಕಾರಕ್ಕೆ ಬಂದಮೇಲೆ ಅದೇ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಅಂಬೇಡ್ಕರ್ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್. ಅಂಬೇಡ್ಕರ್ ತೀರಿಕೊಂಡಾಗ ಅವರಿಗೆ ಅರ್ಧ ಅಡಿ ಜಾಗ ಕೊಡಲಿಲ್ಲ. 25ಸಾವಿರ ಕೋಟಿ ಎಸ್ಇಪಿ, ಟಿಇಪಿ ಹಣ ಏನಾಯ್ತು.? ಅದನ್ನ ಎಲ್ಲಿಗೆ ವರ್ಗಾವಣೆ ಮಾಡಿದ್ದಾರೆ.? ವಾಲ್ಮೀಕಿ ಹಗರಣದ ಮಾಡಿ ಹಣ ದುರುಪಯೋಗ ಆಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

ಬಾಕ್ಸ್‌............ನಿಖಿಲ್ 2ನೇ ದಿನವೂ ಬಿರುಸಿನ ಪ್ರಚಾರ

- 18ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತಯಾಚನೆ

- ಜನರ ಸಮಸ್ಯೆ ಆಲಿಸಿ ಆಶೀರ್ವಾದ ಪಡೆದ ನಿಖಿಲ್

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಣಸ್ವಾಮಿ ಉಭಯ ಪಕ್ಷಗಳ ಮುಖಂಡರೊಂದಿಗೆ ಎರಡನೇ ದಿನವೂ ಬಿರುಸಿನ ಪ್ರಚಾರ ನಡೆಸಿದರು.

ಕ್ಷೇತ್ರದ ಪ್ರಸಿದ್ಧ ಹುಣಸನಹಳ್ಳಿ ಶ್ರೀ ಬಿಸಲಮ್ಮ ಕರಗದ ಮನೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದರು. ನಂತರ ಕೋಡಂಬಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು, ಪ್ರಚಾರದ ವೇಳೆ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಕೋಡಂಬಳ್ಳಿ, ಜೆ.ಬ್ಯಾಡರಹಳ್ಳಿ ಹಾಗೂ ವೈ.ಟಿ.ಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸುಮಾರು 18ಕ್ಕೂ ಹೆಚ್ಚು ಗ್ರಾಮಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಮತಯಾಚನೆ ಮಾಡಿದರು.

28ಕೆಆರ್ ಎಂಎನ್ 3.ಜೆಪಿಜಿ

ಚನ್ನಪಟ್ಟಣ ಕ್ಷೇತ್ರದ ಮಾಕಳಿ ಹಾಗೂ ದಶವಾರ ಪಂಚಾಯಿತಿ ವ್ಯಾಪ್ತಿಯ ಪ್ರಚಾರ ವೇಳೆ ನಿಖಿಲ್ ಕುಮಾರಸ್ವಾಮಿ ಹಿರಿಯರಿಂದ ಆಶೀರ್ವಾದ ಪಡೆದರು.