ಸಾರಾಂಶ
ಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಇರುವ ಪೆನ್ಡ್ರೈವ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವೂ ಇದೆ. ಈ ಕುರಿತು ದೂರು ಕೊಡುವ ಮುನ್ನವೇ ಎಸ್ಐಟಿ ರಚನೆ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಇರುವ ಪೆನ್ಡ್ರೈವ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವೂ ಇದೆ. ಈ ಕುರಿತು ದೂರು ಕೊಡುವ ಮುನ್ನವೇ ಎಸ್ಐಟಿ ರಚನೆ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ದೂರು ಕೊಡದಿದ್ದರೂ ಎಸ್ಐಟಿ ರಚನೆ ಮಾಡಿದರಲ್ಲ. ಮಂಜುನಾಥ ಸೇರಿದಂತೆ ಜೆಡಿಎಸ್ನ ಮೂರು ಕ್ಷೇತ್ರಗಳಲ್ಲೂ ಸೋಲುತ್ತದೆ ಎಂದು ಹೇಳಿಕೆ ನೀಡುತ್ತಿದ್ದರಲ್ಲ. ಇವೆಲ್ಲವೂ ನಿಮ್ಮ ಕೈವಾಡವೂ ಇದರಲ್ಲಿ ಇದೆ ಎಂಬುದಕ್ಕೆ ಸಾಕ್ಷಿಯಲ್ಲವೇ ಎಂದು ಟೀಕಿಸಿದರು.
ನಿಮ್ಮ ಕುಟುಂಬದಲ್ಲೂ ಒಂದು ದುರ್ಘಟನೆ ನಡೆದಿತ್ತು ಅಲ್ವಾ?. ಹಾಗಂತ ಆ ದುರ್ಘಟನೆಯನ್ನು ನಾನೇನು ರಾಜಕೀಯಕ್ಕೆ ಬಳಸಿಕೊಳ್ಳಲ್ಲ. ಅಷ್ಟೊಂದು ಕೀಳುಮಟ್ಟದ ರಾಜಕಾರಣ ನಾನು ಮಾಡಲ್ಲ ಎಂದರು.ವಿದೇಶದಲ್ಲಿ ಮೃತಪಟ್ಟ ಅವರ ಪುತ್ರನ ಮೃತದೇಹವನ್ನು ಹುಟ್ಟೂರಿಗೆ ತರಲು ಪ್ರಧಾನಿ ಮೋದಿ ಮತ್ತಿತರರಿಂದ ದೊರೆತ ಸಹಾಯವನ್ನು ಸಿದ್ದರಾಮಯ್ಯ ಮರೆತಿದ್ದಾರೆ. ಆಗ ಮೋದಿ ಹಾಗೂ ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಮಗೆ ಎಷ್ಟೊಂದು ಸಹಾಯ ಮಾಡಿದ್ದಾರೆ. ಅದನ್ನಾದರೂ ಸೌಜನ್ಯಕ್ಕಾದರೂ ನೆನಪಿಸಿಕೊಳ್ಳಿ. ಪ್ರಕರಣವನ್ನು ರಾಜಕಾರಣಕ್ಕೆ ಬಳಸಿಕೊಳ್ಳಬೇಡಿ ಎಂದರು. ಮೋದಿ ಮತ್ತು ಬಿಜೆಪಿಗೂ ಈ ಪ್ರಕರಣಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಅವರನ್ನು ಈ ಪ್ರಕರಣದಲ್ಲಿ ಯಾಕೆ ಎಳೆದು ತರುತ್ತಿದ್ದೀರಿ ಎಂದು ಕಿಡಿಕಾರಿದರು.
ಉಳಿದ ಪ್ರಕರಣಗಳಲ್ಲಿ ಎಸ್ಐಟಿಗಳಂತೆ ಇದನ್ನು ಮಾಡಬೇಡಿ. ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ಮಾಡಿ. ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು, ನಿಮಗೆ ಬೇಕಾದಂಥ ವರದಿ ತರಿಸಿಕೊಳ್ಳಬೇಡಿ ಎಂದರು.