ಸಾರಾಂಶ
- 25ರ ವರೆಗೆ ಚೆನ್ನೈನಲ್ಲೇ ವಿಶ್ರಾಂತಿ
ಕನ್ನಡಪ್ರಭ ವಾರ್ತೆ ಬೆಂಗಳೂರು/ಹಾಸನಹೃದಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾದ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಂದಿನ ವಾರ ಚೆನ್ನೈಗೆ ತೆರಳಲಿದ್ದಾರೆ.
ಇದೇ 19ರಂದು ಚೆನ್ನೈಗೆ ತೆರಳುವ ಅವರು 21ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರಿಗೆ ಈಗಾಗಲೇ ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆದು ಇದೇ 25ರೊಳಗೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಬಳಿಕ ಲೋಕಸಭಾ ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹಿಂದೆಯೂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಮೆ ಎನ್ನಲಾಗುತ್ತಿದೆ.ಅನಾರೋಗ್ಯದ ನಡುವೆಯೂ ಓಡಾಟ:ಬುಧವಾರ ಹಾಸನದಲ್ಲಿ ನಡೆದ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಅನಾರೋಗ್ಯದ ನಡುವೆಯೂ ಪಕ್ಷಕ್ಕಾಗಿ ಓಡಾಡುತ್ತಿದ್ದೇನೆ. ಸದ್ಯದಲ್ಲೇ ನಾನು ಮತ್ತೆ ಶಸ್ತ್ರಚಿಕಿತ್ಸೆಗೆ ಹೋಗಬೇಕಿದೆ. ಆಪರೇಷನ್ಗೆ ಹೋಗುವ ಮೊದಲು ಇಲ್ಲಿಗೆ ಬಂದು ಕಾರ್ಯಕರ್ತರನ್ನು ಹುರಿದುಂಬಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ತಿಳಿಸಿದರು.ಚಿಕ್ಕ ವಯಸ್ಸಿನಲ್ಲೇ ನಾನು ತುಂಬಾ ಅನಾರೋಗ್ಯ ಅನುಭವಿಸಿದ್ದೇನೆ, ಅದರ ಮಧ್ಯೆ ಕೂಡ ನಾನು ಪಕ್ಷ ಸಂಘಟನೆ, ಕಾರ್ಯಕರ್ತರ ಉಳಿವಿಗಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ದೇವೇಗೌಡರಿಗೂ ಓಡಾಡಲು ಆಗುತ್ತಿಲ್ಲ. ಅದರ ನಡುವೆಯೂ ಅವರು ಕಾರ್ಯಕರ್ತರಿಗೆ ನೈತಿಕ ಬೆಂಬಲ ಕೊಡುತ್ತಿದ್ದಾರೆ. ನಾನೂ ಸದ್ಯದಲ್ಲೇ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಜೆಡಿಎಸ್ ಅಭ್ಯರ್ಥಿಗಳು ನಿಲ್ಲುತ್ತಿರುವ ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ ಎಂದು ಅಂದುಕೊಂಡು ಗೆಲ್ಲಿಸಿ ಎಂದು ಗದ್ಗದಿತರಾಗಿ ಹೇಳಿದರು.