ಹಾವೇರಿ: ಸಮುದಾಯದಲ್ಲಿ ಬೆರೆತು ಕೆಲಸ ಮಾಡುವಾಗ ಸಾಮಾಜಿಕ ಕಾರ್ಯಕರ್ತರ ಆರೋಗ್ಯ ಮುಖ್ಯ. ಹಲವು ಸ್ವಭಾವದ ಜನರೊಡನೆ ಕೂಡಿದಾಗ ತನ್ನ ಆರೋಗ್ಯ ಸಂಪತ್ತು ಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ಸೇವಕರಾಗಲು ಸಾಧ್ಯ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ಹೇಳಿದರು.ಇಲ್ಲಿಯ ಶಿವಾಜಿ ನಗರದ ಮೂರನೇಯ ಕ್ರಾಸ್‌ನಲ್ಲಿರುವ ಮಹಿಳಾ ಶಕ್ತಿ ಸದನದಲ್ಲಿ ನಡೆದ ಎರಡು ದಿನಗಳ ಹಾವೇರಿ ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರಿಗೆ ಜರುಗಿದ ಮಾನಸಿಕ ಆರೋಗ್ಯ ಕಾರ್ಯಾಗಾರವನ್ನು ಉದ್ಘಾಟನೆ ಮಾತನಾಡಿದರು.

ಬೆಂಗಳೂರಿನ ನಿಮಾಮ್ಸ್ ಮತ್ತು ನಗರದ ಇಡಾರಿ ಸಂಸ್ಥೆಗಳು ಜಂಟಿಯಾಗಿ ಏರ್ಪಡಿಸಿದ್ದ ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಗಳ 35 ಕಾರ್ಯಕರ್ತರು ಪಾಲ್ಗೊಂಡಿದ್ದರು. ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗ ಮತ್ತು ರಾಷ್ಟ್ರೀಯ ಮಾನಸಿಕ ನರವಿಜ್ಞಾನ ಸಂಸ್ಥೆಯ ಸಂಶೋಧಕ ಡಾ. ಶಿವಾನಂದ ಯರೇಶೀಮಿ ಶಿಬಿರದ ನಿರ್ದೇಶಕರಾಗಿ ಮಾತನಾಡಿ, ನನ್ನ ತವರು ಜಿಲ್ಲೆಯಾದ ಹಾವೇರಿಯನ್ನೇ ಸಮುದಾಯ ಮಾನಸಿಕ ಆರೋಗ್ಯ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದು, ಇನ್ನೂ ಅನೇಕ ಕಾರ್ಯಾಗಾರಗಳನ್ನು ನಡೆಸಲು ಇಚ್ಛಿಸಿದ್ದೇನೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಪರಿಮಳಾ ಜೈನ್ ಮಾತನಾಡಿ, ಮಹಿಳಾ ಸ್ವಧಾರದಲ್ಲಿ ಮಾನಸಿಕವಾಗಿ ತೊಂದರೆಗೆ ಒಳಗಾದ ಅನೇಕ ಮಹಿಳೆಯರು ಆಗಾಗ ದಾಖಲಾಗುತ್ತಿದ್ದಾರೆ. ಅಂಥವರ ಮನೋ ರೋಗವನ್ನು ಗುಣಪಡಿಸಿ ಮುಖ್ಯವಾಹಿನಿಗೆ ತರುವುದೇ ಕಾರ್ಯಾಗಾರದ ಉದ್ದೇಶ ಎಂದರು.

ಈ ವೇಳೆ ಬಸವರಾಜ ಪೂಜಾರ, ರೇಣುಕಾ ಕಹಾರ, ಡಾ. ಬಸನಗೌಡ ಪಾಟೀಲ, ನಾಗರಾಜ ಹುಡೇದ, ಮಂಜುನಾಥ ಸಣ್ಣಿಂಗಮ್ಮನವರ, ಎಚ್.ಎಫ್. ಮಜೀದ್, ಡಾ. ಶಂಕರ ಪೇಠಕರ, ಶೈಲಾ ಎನ್, ಹಾಲಮ್ಮಾ ಕಳಸಾಪೂರ, ಭಾಗ್ಯಾ ಎಂ.ಕೆ, ಮುಂತಾದವರು ಭಾಗವಹಿಸಿದ್ದರು.