ಸಾರಾಂಶ
ಕನಕಗಿರಿ:
ಆರೋಗ್ಯ ಶಿಬಿರಗಳು ಬಡವರಿಗೆ ಅನುಕೂಲವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿಯೂ ಶಿಬಿರಗಳು ನಡೆಯುವಂತಾಗಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಾತೃಭೂಮಿ ಯುವಶಕ್ತಿ ಸಂಘ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ವಿವೇಕಾನಂದ ಸೇವಾಶ್ರಮ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಮಾತೃಭೂಮಿ ಯುವಶಕ್ತಿ ಸಂಘಟನೆ ಸಮಾಜಮುಖಿ ಕಾರ್ಯ ಮಾಡುವುದನ್ನು ಮೈಗೂಡಿಸಿಕೊಂಡಿದೆ. ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಸೇವೆಗೆ ಸದಾಸಿದ್ಧರಿದ್ದಾರೆ. ಇನ್ನೂ ಬೆಂಗಳೂರಿನ ವಿವೇಕಾನಂದ ಕಣ್ಣಿನ ಆಸ್ಪತ್ರೆ ಸೇವೆ ಗಮನಾರ್ಹ. ಶಸ್ತ್ರಚಿಕಿತ್ಸೆಯ ಮೂಲಕ ಕಣ್ಣಿಲ್ಲದವರಿಗೆ ಕಣ್ಣು ಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಗ್ರಾಮೀಣ ಪ್ರದೇಶಗಳಲ್ಲಿ ಮಂಡಿನೋವಿನಿಂದ ಬಳಲುತ್ತಿರುವವರು ಸಂಖ್ಯೆ ಹೆಚ್ಚಾಗಿದೆ. ಮಂಡಿ ನೋವಿನ ನಿಯಂತ್ರಣಕ್ಕಾಗಿ ಶ್ರಮಿಸಿದಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಅದಕ್ಕಾಗಿ ಸಂಘಟನೆಗಳು ಮಂಡಿ ನೋವಿನ ನಿಯಂತ್ರಣಕ್ಕೆ ಶಿಬಿರ ಆಯೋಜಿಸಿದರೆ ಬಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ ಮಾತನಾಡಿ, 7ನೇ ಬಾರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡು ವೃದ್ಧರಿಗೆ ಮತ್ತೊಮ್ಮೆ ಕಣ್ಣು ಕೊಡುವ ಕೆಲಸ ಮಾತೃಭೂಮಿ ಸಂಘಟನೆ ಮಾಡುತ್ತಿದೆ. ಪ್ರಚಾರ ಮತ್ತು ಗುರುತಿನ ಚೀಟಿಗೆ ಸೀಮಿತವಾಗಿರುವ ಹಲವು ಸಂಘಟನೆಗಳ ನಡುವೆ ಎಲೆಮರಿ ಕಾಯಿಯಾಗಿ ಸಮಾಜ ಸೇವೆ ಮಾಡುವ ಇಂತಹ ಸಂಘಟನೆಗಳು ಅಪರೂಪ ಎಂದು ಸ್ಮರಿಸಿದರು.ಶಸ್ತ್ರ ಚಿಕಿತ್ಸೆಗೆ ಬಂದಿದ್ದ ನೂರಾರು ರೋಗಿಗಳಿಗೆ ಹಾಲು, ಬ್ರೆಡ್, ಗಂಜಿ ಹಾಗೂ ಸಹಾಯಕರಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ರಾಜಸಾಬ ನಂದಾಪೂರ, ರಾಕೇಶ ಕಂಪ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಮಹಾಂತೇಶ ಕೊಡ್ಲಿ, ಪ್ರಮುಖರಾದ ಶರಣಪ್ಪ ಸೋಮಸಾಗರ, ಮಾತೃಭೂಮಿ ಸಂಘದ ಅಧ್ಯಕ್ಷ ಮಮ್ಮದರಫಿ ಮಂಗಳೂರು, ವೆಂಕೋಬ ಭೋವಿ ಸೇರಿದಂತೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇದ್ದರು.