ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಲವು ಸಮಾಜಮುಖಿ ಕಾರ್ಯಗಳ ಧ್ಯೇಯೋದ್ದೇಶಗಳನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಕ್ಯಾನ್ಸರ್ ಉಚಿತ ತಪಾಸಣೆ ಮತ್ತು ಮಾಹಿತಿ ಶಿಬಿರವು ಆ.24ರಂದು ಬೆಳಗ್ಗೆ 9.45ಕ್ಕೆ ಮೂಡುಬಿದಿರೆಯ ಕನ್ನಡಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟಿ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈಗಾಗಲೇ ತಾಲೂಕಿನ ಶಾಲೆಗಳಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಟ್ರಸ್ಟ್, ಮುಂದಿನ ದಿನಗಳಲ್ಲಿ ದಂತ ಚಿಕಿತ್ಸೆ ಮುಂತಾದ ಶಿಬಿರಗಳನ್ನು ನಡೆಸಲಿದೆ ಎಂದ ಅವರು ಮೂಲ್ಕಿ ಮತ್ತು ಕಿನ್ನಿಗೋಳಿ ಪರಿಸರಸದ ಸರಿ ಶಾಲೆಗಳಲ್ಲಿ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೂ ಶಿಬಿರಗಳನ್ನು ನಡೆಸಲಿದೆ ಎಂದರು.ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ, ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಿಕ್ಷಣದ ಆದ್ಯತೆ ಮತ್ತು ಸರ್ವಾಂಗೀಣ ಬೆಳವಣಿಗೆ, ವಿಶಿಷ್ಟ ಮಕ್ಕಳ ಸಬಲೀಕರಣ, ಪರಿಸರ ಸಂರಕ್ಷಣೆ ಟ್ರಸ್ಟ್ನ ಧ್ಯೇಯೋದ್ದೇಶವಾಗಿದೆ ಎಂದರು.ತಂದೆ ಅಮರನಾಥ ಶೆಟ್ಟಿ ಅವರು ತಮ್ಮ ಜೀವನದುದ್ದಕ್ಕೂ ದೀನ ದಲಿತರ ಸೇವೆ, ಪರೋಪಕಾರ ಹಾಗೂ ಸ್ವಾಸ್ಥ್ಯ ಸಮಾಜಕ್ಕೋಸ್ಕರ ಜೀವನ ಸವೆಸಿದ ಅತ್ಯಮೂಲ್ಯ ರತ್ನ ಎಂದು ನೆನಪಿಸಿಕೊಂಡ ಅವರು, ಅವರ ಹೆಸರಿನಲ್ಲಿ ನಮ್ಮ ಟ್ರಸ್ಟ್ ಬಡ ಜನರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ಈ ಶಿಬಿರವನ್ನು ಜೈನಮಠದ ಸ್ವಾಮೀಜಿ ಉದ್ಘಾಟಿಸಲಿದ್ದು, ಮಂಗಳೂರಿನ ಖ್ಯಾತ ವೈದ್ಯ ಡಾ.ಎಂ.ಶಾಂತರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ, ಡಾ.ಎಂ.ಮೋಹನ ಆಳ್ವ, ಪದ್ಮರಾಜ ರಾಮಯ್ಯ, ಅದಾನಿ ಗ್ರೂಪ್ನ ಕಿಶೋರ್ ಆಳ್ವ, ಕುಲದೀಪ್, ಎಂ.ಕೆ.ಶ್ರೀಪತಿ ಭಟ್, ಪ್ರಶಾಂತ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಟ್ರಸ್ಟಿಗಳಾದ ಜಯಶ್ರೀ ಅಮರನಾಥ ಶೆಟ್ಟಿ, ಆಶ್ರಿತಾ ಪಿ.ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.