ಹಾನಗಲ್ಲ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಶಾಸಕ ಶ್ರೀನಿವಾಸ್ ಮಾನೆ ಅವರ ೫೨ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ೧ ಸಾವಿರಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆಗೊಳಪಟ್ಟರು.

ಭಾನುವಾರ ಹಾನಗಲ್ಲಿನ ತಾಲೂಕು ಆಸ್ಪತೆಯಲ್ಲಿ ನಡೆದ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಜನರಲ್ ಸರ್ಜರಿ, ಎಲುಬು ಮತ್ತು ಕೀಲು, ಮಂಡಿ ನೋವು, ಜನರಲ್ ಮೆಡಿಸಿನ್, ಸ್ತ್ರೀರೋಗ, ಹೃದಯ ರೋಗ, ನರ ಮತ್ತು ಮೆದುಳು, ಚರ್ಮರೋಗ, ದಂತ, ನೇತ್ರ, ಕಿವಿ, ಮೂಗು, ಗಂಟಲು ಸೇರಿದಂತೆ ವಿವಿಧ ವಿಭಾಗಗಳ ೩೦ಕ್ಕೂ ಹೆಚ್ಚು ತಜ್ಞ ವೈದ್ಯರು ಸಾರ್ವಜನಿಕರ ತಪಾಸಣೆ ನಡೆಸಿದರು. ಇದರೊಂದಿಗೆ ಇಸಿಜಿ, ಇಕೋ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ಸಹ ಉಚಿತವಾಗಿ ನಡೆಸಲಾಯಿತು. ತಪಾಸಣೆಗೆ ಬಂದವರಿಗೆ ತಜ್ಞ ವೈದ್ಯರಿಂದ ಆರೋಗ್ಯ ಸಲಹೆ, ಅಗತ್ಯ ಚಿಕಿತ್ಸಾ ಮಾರ್ಗದರ್ಶನ ಹಾಗೂ ಮುಂದಿನ ಚಿಕಿತ್ಸೆಗೆ ಸಂಬಂಧಿಸಿದ ಸೂಚನೆ ನೀಡಲಾಯಿತು.

ಟೀಂ ಆಪತ್ಬಾಂಧವ, ಧಾರವಾಡದ ಎಸ್‌ಡಿಎಂಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಎಸ್‌ಡಿಎಂ ನಾರಾಯಣ ಹೃದಯಾಲಯ, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು. ತಜ್ಞ ವೈದ್ಯರಾದ ಡಾ.ಸಾಧಿಕ ಹುಸೇನ್ ಕಚವಿ, ಡಾ.ಮುಸ್ತಫಾ ಚಾಂದಶಾ, ಡಾ. ಚರಣ, ಡಾ. ಹರ್ಷವರ್ಧನ ಕೆ.ಸಿ., ಡಾ. ಅನುಷಾ ಶಿವಕುಮಾರ, ಡಾ.ದೀಪಕ್ ಹಳೆಮನಿ, ಡಾ. ನೇಹಾ ಪಾಟೀಲ, ಡಾ. ಅಭಿಷೇಕ ಎ.ಕೆ., ಡಾ.ವಿಜಯಲಕ್ಷ್ಮೀ ಬೆಲ್ಲದ, ಡಾ.ರಾಜೀವ್, ಡಾ.ಧ್ವನಿ, ಡಾ.ಯಶಸ್, ಡಾ.ಸೃಷ್ಟಿ ತರಿಕೇರೆ, ಡಾ.ಜ್ಯೋತ್ಸನ್ ಕೆ.ಎನ್., ಡಾ. ನಿರ್ಮಿತ್, ಡಾ. ಅರ್ಪಿತ್, ಡಾ. ಪೂಜಾ ಜಗ್ಗರಿ, ಡಾ. ರೋಹಿತ್ ರಮೇಶ, ಡಾ.ಶಿಫಾಲಿ ಪೂನ್ಜಾ, ಡಾ. ಕೀರ್ತಿ, ಡಾ. ಶಕ್ತಿ ರಾಯ್ಕರ್, ಡಾ. ರೋಶನಿ, ಡಾ. ಸಾಕ್ಷಿ ಬೆನ್ನೂರ, ಡಾ. ರವಿಕುಮಾರ ಬಿ.ಎಂ., ಡಾ.ಪುಷ್ಪಕಲಾ ಸೇರಿದಂತೆ ಇನ್ನಿತರರು ತಪಾಸಣೆ ಕೈಗೊಂಡರು.

ಶಾಸಕರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಈ ಆರೋಗ್ಯ ಶಿಬಿರವು ಜನಸೇವೆಗೆ ಆದ್ಯತೆ ನೀಡುವ ಸಮಾಜಮುಖಿ ಕಾರ್ಯಕ್ರಮವಾಗಿ ಗಮನ ಸೆಳೆಯಿತು. ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ, ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಸಹಕಾರಿಯಾಯಿತು.

ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಸಾವಿರಕ್ಕೂ ಹೆಚ್ಚು ಜನ ಪ್ರಯೋಜನ ಪಡೆದಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ವೈದ್ಯರು ತಪಾಸಣೆ ನಡೆಸಿದ್ದಾರೆ. ಶಾಸಕ ಶ್ರೀನಿವಾಸ ಮಾನೆ ಅವರ ಜನ್ಮದಿನ ಪ್ರತಿವರ್ಷ ಇಂಥ ಸಮಾಜೋಪಯೋಗಿ ಕಾರ್ಯಗಳ ಮೂಲಕ ಆಚರಿಸಲ್ಪಡುತ್ತಿರುವುದು ಮಾದರಿ ಎಂದು ನರ ಮತ್ತು ಮೆದುಳು ರೋಗ ತಜ್ಞ ಡಾ.ಮುಸ್ತಫಾ ಚಾಂದಶಾ ಹೇಳಿದರು.