ದಾಬಸ್‍ಪೇಟೆ: ಸೋಂಪುರ ಹೋಬಳಿಯ ಮಾಕೇನಹಳ್ಳಿ ಕ್ರಷರ್‌ನಲ್ಲಿ ಸಾಮಗ್ರಿಗಳ ದರ ಏಕಾಏಕಿ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಕಡಿಮೆ ಮಾಡುವಂತೆ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಕ್ರಷರ್ ಮಾಲೀಕರು ಹಾಗೂ ಲಾರಿ ಮಾಲೀಕರ ಮುಸುಕಿನ ಗುದ್ದಾಟ ಶನಿವಾರ ನಡೆದ ಸಭೆಯಲ್ಲಿ ಮಾತಿಗೆ ಮಾತು ಬೆಳೆದು ಕ್ರಷರ್ ಮಾಲೀಕರು ಹಾಗೂ ಲಾರಿ ಮಾಲೀಕರು ಪರಸ್ಪರ ಕೈಕೈ ಮಿಲಾಯಿಸಿದರೂ ಕೊನೆಗೂ ಅಂತ್ಯಗೊಂಡಿತು.

ಸಭೆಯಲ್ಲಿ ಸ್ಥಳೀಯ ಮುಖಂಡರು ಮಧ್ಯಪ್ರವೇಶಿದ ಪರಿಣಾಮ ಮುಸುಕಿನ ಗುದ್ದಾಟದಿಂದ ಎರಡು ಬಾರಿ ಸಭೆ ಮುಂದೂಡಲಾಗಿತ್ತು. ಆದರೆ ಶನಿವಾರ ನಡೆದ ಅಂತಿಮ ಸಭೆಯಲ್ಲಿ ದರ ಇಳಿಕೆ, ಸ್ಥಳೀಯ ಲಾರಿ ಮಾಲೀಕರಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ತಾತ್ಕಾಲಿಕ ಅಂತ್ಯ ಕಂಡಿದೆ.

ಸಭೆಯಲ್ಲಿ ಮುಖಂಡ ಭಾರತೀಪುರ ಮೋಹನ್ ಕುಮಾರ್ ಮಾತನಾಡಿ, ಮಾದಾಪಟ್ಟಣದಲ್ಲಿ ಕ್ರಷರ್‌ಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಕ್ಕೆ ಪೂರೈಸಲು ಬೇಡಿಕೆ ಹೆಚ್ಚಾದ ಕಾರಣ ಆ ಭಾಗದ ಲಾರಿಗಳು ಬರುವುದನ್ನೇ ಬಂಡವಾಳ ಮಾಡಿಕೊಂಡು ಕ್ರಷರ್ ಮಾಲೀಕರು ಬೆಲೆ ಏರಿಕೆ ಮಾಡಿದ್ದು ಈ ಬಗ್ಗೆ ಕಳೆದ ಮಂಗಳವಾರ ಬಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಸಮಸ್ಯೆಗೆ ಮಾತುಕತೆ ಮೂಲಕ ತಾತ್ಕಾಲಿಕ ಮುಕ್ತಿ ದೊರೆತಿದ್ದು, ಸ್ಥಳೀಯರಿಗೆ ಪ್ರಾತಿನಿಧ್ಯ, ಸಭೆಯ ತೀರ್ಮಾನಗಳಿಗೆ ಕ್ರಷರ್ ಮಾಲೀಕರು ಬದ್ದರಾಗುವ ಭರವಸೆ ನೀಡಿದ್ದಾರೆ ಎಂದರು.

ಗ್ರಾಹಕರಿಗೆ ಹೊರೆ: ಬೆಂ.ಗ್ರಾ ಹಾಗೂ ತುಮಕೂರು ಜಿಲ್ಲಾ ಗಡಿಯಲ್ಲಿರುವ ಮಾಕೇನಹಳ್ಳಿ ಬಳಿ ಸುಮಾರು 7 ಕ್ರಷರ್‌ಗಳಲ್ಲಿ ಸ್ಥಳೀಯ ಲಾರಿಗಳಿಗೆ, ಎಂ.ಸ್ಯಾಡ್ ಮತ್ತು ಪಿ.ಸ್ಯಾಡ್ ಇತ್ಯಾದಿ ದಾಸ್ತೂನುಗಳಿಗೆ ಮನಬಂದಂತೆ ಟನ್ ಗೆ 150 ರುಪಾಯಿವರೆಗೂ ಏರಿಕೆ ಮಾಡಿದ್ದರು. ತಾವರೆಕೆರೆಯ ಮಾದಾಪಟ್ಟಣ ಮುಚ್ಚಿದ ಪರಿಣಾಮ ಅಲ್ಲಿನ ಲಾರಿ ಮಾಲೀಕರು ಮಾಕೇನಹಳ್ಳಿಯ ಕ್ರಷರ್ ಕಡೆ ಮುಖ ಮಾಡಿದ್ದು, ಅವರಿಗೆ ಮಾಕೇನಹಳ್ಳಿ ಕ್ರಷರ್‌ಗಳಲ್ಲಿ ಹೆಚ್ಚು ಮಾನ್ಯತೆ ನೀಡಿದ್ದಾರೆ. ಬೇಡಿಕೆ ಹೆಚ್ಚಾದ ಹಿನ್ನಲೆ ಮನಬಂದಂತೆ ದರ ಹೆಚ್ಚಿಸಿದ್ದರು. ಇದರಿಂದ ಗ್ರಾಹಕರಿಗೆ ಅನಗತ್ಯ ಹೊರೆ ಬೀಳಲಿದೆ ಕಡಿಮೆ ಮಾಡಬೇಕೆಂದು ಬೀರಗೊಂಡನಹಳ್ಳಿ ಬೈರೇಶ್ ಒತ್ತಾಯಿಸಿದರು.

ಕ್ರಷರ್ ಮಾಲೀಕರಿಗೆ ಛೀಮಾರಿ:


ಈಗಾಗಲೇ ಕಳೆದ ವಾರ ಸಾಂಕೇತಿಕವಾಗಿ ಸ್ಥಳೀಯ ಮುಖಂಡರು ಪ್ರತಿಭಟನೆ ನಡೆಸಿ, ಶನಿವಾರದವರೆಗೂ ಸಮಸ್ಯೆ ಬಗೆಹರಿಸಲು ಗಡುವು ನೀಡಿದ್ದರು. ಇಂದು ಸಭೆ ಆರಂಭವಾಗುತ್ತಿದ್ದಂತೆ, ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಎಸ್‍ಎಲ್‍ಆರ್ ಕ್ರಷರ್ ಮಾಲೀಕ ನಟರಾಜು, ಟಿ.ಎನ್ ಕ್ರಷರ್‌ನ ಅಶೋಕ್ ಮೇಲೆ ಲಾರಿ ಮಾಲೀಕರು ಮುಗಿಬಿದ್ದರು. ನೀವೇ ಕೈಗಾರಿಕೆಗಳಿಗೆ ಕಡಿಮೆ ಬೆಲೆಗೆ ದಾಸ್ತಾನು ಪೂರೈಸುತ್ತಿರುವುದು ಎಷ್ಟು ಸರಿ? ನೀವೇ ಜಿಪಿಎಸ್ ಅಳವಡಿಸದ ಲಾರಿಗಳಲ್ಲಿ ಪರ್ಮಿಟ್ ಇಲ್ಲದೇ ಎಂ ಸ್ಯಾಂಡ್ ಸೇರಿದಂತೆ ಹಲವು ದಾಸ್ತಾನು ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಪೂರೈಸುತ್ತಿದ್ದೀರಿ ಎಂದು ಛೀಮಾರಿ ಹಾಕಿದರು. ಈ ವೇಳೆ ವಾಗ್ವಾದ ನಡೆಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಜೆಡಿಎಸ್ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದ್ರಿ, ಮುಖಂಡರಾದ ಬಿ.ಪಿ.ಶ್ರೀನಿವಾಸ್, ಎಚ್.ಪಿ.ಸುರೇಶ್, ಕರವೇ ಮಂಜುನಾಥ್, ರುದ್ರೇಶ್, ನಾಗರಾಜು, ಕೃಷ್ಣಸ್ವಾಮಿ, ಉಮೇಶ್, ಮಂಜುನಾಥ್, ವಿವೇಕ, ರಾಕೇಶ್, ಅನಿಲ್, ಅಲ್ಪಯ್ಯನಪಾಳ್ಯ ವೆಂಕಟೇಶ್, ಕಿರಣ್ ಇತರರು ಹಾಜರಿದ್ದರು.

ಪೋಟೋ 3 :

ದಾಬಸ್‍ಪೇಟೆಯಲ್ಲಿ ಕ್ರಷರ್ ಮಾಲೀಕರು ಹಾಗೂ ಲಾರಿ ಮಾಲೀಕರ ಸಭೆಯಲ್ಲಿ ಎರಡೂ ಕಡೆಯವರಲ್ಲಿ ಮಾತಿನ ಚಕಮಕಿ ನಡೆಯಿತು.