ಕನ್ನಡಪ್ರಭ ವಾರ್ತೆ ಬೇತಮಂಗಲಬೇತಮಂಗಲ ಹಾಗೂ ಕ್ಯಾಸಂಬಳ್ಳಿ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಭಾರಿ ಸಿಡಿಲು-ಮಿಂಚು ಮಳೆಯಾಗಿದ್ದು, ಕೆಲ ರೈತರಿಗೆ ಸಿಹಿ ಕೆಳ ಮಧ್ಯಮ ವರ್ಗದ ರೈತರಿಗೆ ಕಹಿಯಾಗಿದೆ. ಮಂಗಳವಾರ ಮಧ್ಯಾಹ್ನ ೩.೩೦ರಿಂದ ಆರಂಭಗೊಂಡ ಬಿರುಗಾಳಿ ಸಹಿತ ಮಳೆಯಿಂದ ಸುಮಾರು ೨ ಗಂಟೆಗಳ ಕಾಲ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಸಣ್ಣ ಕೆರೆ ಕುಂಟೆಗಳಿಗೆ ನೀರು, ಉತ್ತಮವಾದ ಮಳೆಯಿಂದ ಗ್ರಾಮೀಣ ಪ್ರದೇಶದ ಸಣ್ಣ ಕೆರೆ, ಕುಂಟೆ ರಾಜಕಾಲುವೆಗಳಲ್ಲಿ ನೀರು ಸಂಗ್ರಹವಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೆ ಸಹಕಾರಿಯಾಗಿದೆ.ಭಾರಿ ಗಾಳಿಯಿಂದಾಗಿ ಬೃಹತ್ ಗಾತ್ರದ ಮರಗಳು, ಬಾಳೆ ತೋಟ, ಬೀನ್ಸ್ ಹಾಗೂ ಟೊಮೆಟೋ ಸೇರಿ ವಿವಿಧ ತೋಟಗಾರಿಕಾ ಬೆಳೆಗಳಿಗೆ ಅಪಾರ ಹಾನಿಯಾಗಿದ್ದು ರೈತರಿಗೆ ಲಕ್ಷಾಂತರ ರು. ನಷ್ಟ ಆಗಿದೆ.ಅಸಮರ್ಪಕ ರಸ್ತೆಗಳ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರು ಗುಂಡಿಗಳು ಕಾಣಿಸದೆ ಪರಿತಪಿಸಿದರು. ಇತ್ತೀಚೆಗೆ ಸುರಿದ ಮಳೆಯಿಂದ ಕ್ಯಾಸಂಬಳ್ಳಿ ಹೋಬಳಿಯ ವಿವಿಧ ಗ್ರಾಮಗಳ ರೈತರ ಬಾಳೆ ತೋಟ, ಮಾವು ಬೆಳೆಗಳು ಸಂಪೂರ್ಣವಾಗಿ ನೆಲಕ್ಕೆ ಉರಳಿದ್ದು ಲಕ್ಷಾಂತರ ರು. ನಷ್ಟ ಉಂಟಾಗಿತ್ತು, ಮಂಗಳವಾರ ಬಿಟ್ಟು ಬಿಡದೆ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿ ಸಾಲದ ಹೊರೆ ಅನುಭವಿಸುವಂತಾಗಿದೆ.ರೈತರ ನೆರವಿಗೆ ಧಾವಿಸಿ: ಪದೇ ಪದೇ ಮಳೆಯಿಂದಾಗಿ ರೈತರು ನಷ್ಟವನ್ನು ಅನುಭಸುವಂತಾಗಿದ್ದು, ಸರ್ಕಾರಗಳು ಗ್ಯಾರಂಟಿಗಳ ಬದಲಾಗಿ ಇಂತಹ ಆಪತ್ಕಾಲಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸ್ಥಳದಲ್ಲೇ ಪರಿಹಾರ ಧನವನ್ನು ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಜನಪ್ರತಿನಿಧಿಗಳು ಮಾಡಬೇಕೆಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟಾಚಲಪತಿ ಒತ್ತಾಯಿಸಿದ್ದಾರೆ.