ಕೊಟ್ಟೂರು ತಾಲೂಕಿನಲ್ಲಿ ಬೆಂಬಿಡದ ಮಳೆ

| Published : Jun 13 2025, 02:58 AM IST

ಸಾರಾಂಶ

ಕೊಟ್ಟೂರು ತಾಲೂಕಿನಲ್ಲಿ ಮಳೆ ವ್ಯಾಪಕವಾಗಿ ಸುರಿಯ ತೊಡಗಿದೆ. ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ರೈತರು ಬಿತ್ತನೆ ಮಾಡಿದ ಅಂದಾಜು 38 ಎಕರೆ ಪ್ರದೇಶದ ಮೆಕ್ಕೆಜೋಳ ಬೆಳೆ ಬೆಳೆಯುವ ಹಂತದಲ್ಲಿ ಹಾನಿಗೊಳಗಾಗಿದೆ.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಕೊಟ್ಟೂರು ತಾಲೂಕಿನಲ್ಲಿ ಮಳೆ ವ್ಯಾಪಕವಾಗಿ ಸುರಿಯ ತೊಡಗಿದೆ. ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ರೈತರು ಬಿತ್ತನೆ ಮಾಡಿದ ಅಂದಾಜು 38 ಎಕರೆ ಪ್ರದೇಶದ ಮೆಕ್ಕೆಜೋಳ ಬೆಳೆ ಬೆಳೆಯುವ ಹಂತದಲ್ಲಿ ಹಾನಿಗೊಳಗಾಗಿದೆ.

ತಾಲೂಕಿನ ಜೋಳದ ಕೂಡ್ಲಿಗಿಯ ಹುಣ್ಣಿಸಿಕಟ್ಟಿ ಗ್ರಾಮದ ರೈತರ ಬೆಳೆ ಹಾನಿ ಅಂದಾಜು ನಷ್ಟವನ್ನು ಕಂದಾಯ ಮತ್ತಿತರ ಇಲಾಖೆಯವರು ಗುರುವಾರ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತ ವರದಿ ನೀಡಲು ಮುಂದಾಗಿದ್ದಾರೆ.

ಕೊಟ್ಟೂರಿನಲ್ಲಿ 17.6 ಮಿಮೀ ಮಳೆ ಬಂದಿದ್ದರೆ, ಕೋಗಳಿಯಲ್ಲಿ 17.4 ಮಿಮೀ ಮಳೆ ಕಳೆದ ರಾತ್ರಿ ಸುರಿದಿದೆ. ಗುರುವಾರವೂ ಮಳೆ ಬರುವ ಲಕ್ಷಣ ಕಂಡು ಬಂದಿದ್ದು, ರೈತರ ಹೊಲಗಳಲ್ಲಿ ಮಳೆ ನೀರು ಹೆಚ್ಚಿನ ಪ್ರಮಾಣ ಶೇಖರಣೆಗೊಂಡಿದೆ. ಇದರಿಂದ ರೈತರು ಯಾವುದೇ ಕೃಷಿ ಚಟುವಟಿಕೆ ನಡೆಸದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.ಬಳ್ಳಾರಿಯಲ್ಲಿ ಮಳೆ- 9 ಮನೆಗಳು ಭಾಗಶಃ ಹಾನಿ:

ಬಳ್ಳಾರಿ ಜಿಲ್ಲೆಯ ವಿವಿಧೆಡೆಗಳಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿದ್ದು, 9 ಮನೆಗಳು ಭಾಗಶಃ ಹಾನಿಯಾಗಿವೆ. ಯಾವುದೇ ಜನ-ಜಾನುವಾರುಗಳಿಗೆ ಹಾನಿ ಪ್ರಕರಣ ವರದಿಯಾಗಿಲ್ಲ.ಜಿಲ್ಲೆಯ ಪೈಕಿ ಸಿರುಗುಪ್ಪ ತಾಲೂಕು ಹಾಗೂ ಕಂಪ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.ಉಳಿದ ತಾಲೂಕುಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಸಿರುಗುಪ್ಪದ ಹಳ್ಳಕೊಳ್ಳ ಭರ್ತಿಯಾಗಿದ್ದವು. ರಾರಾವಿ ಬಳಿಯ ಯಲ್ಲಮ್ಮನ ಹಳ್ಳಿ ತುಂಬಿ ಹರಿಯಿತು. ಬಳಿಕ ನೀರು ಇಳಿಮುಖಗೊಂಡಿತು. ಮಳೆಯಿಂದಾಗಿ ಬಳ್ಳಾರಿ, ಸಿರುಗುಪ್ಪ ಹಾಗೂ ಕಂಪ್ಲಿ ತಾಲೂಕಿನಲ್ಲಿ ತಲಾ ಮೂರು ಮನೆಗಳಿಗೆ ಹಾನಿಯಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸಿರುಗುಪ್ಪದಲ್ಲಿ ಅತಿ ಹೆಚ್ಚು ಮಳೆ:ಸಿರುಗುಪ್ಪ ನಗರ 33.8 ಮಿಮೀ, ತೆಕ್ಕಲಕೋಟೆ 35.4, ಸಿರಿಗೇರಿ 17.4 ಮಿಮೀ, ಎಂ.ಸೂಗೂರು 30.2 ಮಿಮೀ, ಹಚ್ಚೊಳ್ಳಿ 24.8 ಮಿಮೀ, ರಾವಿಹಾಳ್ 32.6 ಮಿಮೀ, ಕರೂರು 34.2 ಮಿಮೀ, ಕೆ.ಬೆಳಗಲ್ಲು 34.2 ಮಿಮೀ ಮಳೆಯಾಗಿದೆ. ಬಳ್ಳಾರಿ ತಾಲೂಕು 5.4 ಮಿಮೀ, ಸಂಡೂರು ತಾಲೂಕು 5.5 ಮಿಮೀ, ಸಿರುಗುಪ್ಪ 24 ಮಿಮೀ, ಕುರುಗೋಡು 15 ಮಿಮೀ, ಕಂಪ್ಲಿ 21 ಮಿಮೀ ಮಳೆಯಾಗಿದೆ.