ಸಾರಾಂಶ
ಮಾಗಡಿ: ಪಟ್ಟಣದಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆಗೆ ಮರಗಳು ಧರೆಗುರುಳಿದ್ದು ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.
ಬುಧವಾರ ರಾತ್ರಿ 8 ಗಂಟೆಗೆ ಆರಂಭವಾದ ಮಳೆ ಬಿರುಗಾಳಿ ಸಹಿತ ಗುಡುಗು ಮಿಂಚಿನಿಂದ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಹೊಸಪೇಟೆ ವೃತ್ತದ ಗಣಪತಿ ದೇವಸ್ಥಾನದ ಪಕ್ಕದಲ್ಲಿದ್ದ ಮರ ದೇವಸ್ಥಾನದ ಮೇಲೆ ಬಿದ್ದು ಪಕ್ಕ ನಿಂತಿದ್ದ ಕಾರಿಗೆ ಹಾನಿ ಉಂಟಾಗಿದೆ. ಜೋಗಿ ಕಟ್ಟೆ ಬಡಾವಣೆಯಲ್ಲಿ ನಾಲ್ಕು ಬೇವಿನ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿವೆ.ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿದ್ದ ಅರಳಿಮರ ಬಿದ್ದಿದೆ.ಪಟ್ಟಣದ ಹೊಸಪೇಟೆಯ ದ್ದು ಸಾಕಷ್ಟು ಹಾನಿ ಉಂಟು ಮಾಡಿದೆ, ಹೊಸಪೇಟೆಯ ಶಾದಿ ಮಹಲ್ ಕಾಂಪೌಂಡ್ ಗೋಡೆ ಕೂಡ ಕುಸಿದಿದೆ. ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿದ್ದ ಸಿಲ್ವರ್ ಮರ ಕೂಡ ಮಳೆಗೆ ಧರೆಗುರುಳಿದೆ.ನಟರಾಜು ಬಡಾವಣೆಯಲ್ಲಿ ಎನ್ಇಎಸ್ನಿಂದ ಕೆಂಪೇಗೌಡ ವೃತ್ತದವರೆಗೂ ರಸ್ತೆ ಕಾಮಗಾರಿ ಮಾಡುತ್ತಿದ್ದು ಕೆಂಪೇಗೌಡ ಶಾಲಾ ಮುಂಭಾಗದ ಖಾಲಿ ಜಾಗ ಸಂಪೂರ್ಣ ನೀರಿನಿಂದ ತುಂಬಿ ಮನೆಗಳಿಗೆ ನುಗ್ಗಿದೆ. ಇಲ್ಲಿ ಒಳಚರಂಡಿ ನೀರು ಕೂಡ ಮಳೆ ನೀರಿಗೆ ಸೇರಿ ಬಡಾವಣೆ ಜನ ರಾತ್ರಿ ಇಡಿ ಜಾಗರಣೆ ಮಾಡುವಂತಾಗಿತ್ತು. ಗುರುವಾರ ಬೆಳಗ್ಗೆ ಪುರಸಭೆ ಜೆಸಿಬಿ ಯಂತ್ರಗಳಿಂದ ನೀರನ್ನು ಹೊರ ಹಾಕಿದರು. ನೀರು ಸರಾಗವಾಗಿ ಹರಿಯದೆ ಕೆರೆಯಂತಾಗಿ ಬಡಾವಣೆಯ ಜನ ಪುರಸಭೆಗೆ ಹಿಡಿ ಶಾಪ ಹಾಕುವಂತೆ ಆಗಿದೆ. ಮಾಗಡಿ ಬೆಂಗಳೂರು ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಹೊಂಬಾಳಮ್ಮನಪೇಟೆ ಪಕ್ಕದ ರಸ್ತೆಯ ಮಣ್ಣು ಕುಸಿದು ಸಂಚಾರಕ್ಕೆ ಅಡಚಣೆಯಾಗಿತ್ತು. ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಕೆಸರು ರಸ್ತೆಯಲ್ಲಿ ಓಡಾಡಬೇಕಾಯಿತು. ಮಳೆಗೆ ಸಾಕಷ್ಟು ಅನಾಹುತಗಳು ಸಂಭವಿಸಿದೆ.
(ಫೋಟೊ ಕ್ಯಾಫ್ಷನ್)ಮಾಗಡಿಯ ಅರಣ್ಯ ಇಲಾಖೆ ಆವರಣದಲ್ಲಿದ್ದ ಸಿಲ್ವರ್ ಮರ ಬಿರುಗಾಳಿ ಸಹಿತ ಭಾರಿ ಮಳೆಗೆ ಧರೆಗುರುಳಿರುವುದು.