ಅಬ್ಬರಿಸಿದ ಮಳೆ: ಜನಜೀವನ ತೀವ್ರ ಅಸ್ತವ್ಯಸ್ತ

| Published : May 14 2025, 12:15 AM IST

ಸಾರಾಂಶ

ಬೆಳಗ್ಗೆಯಿಂದ ಬಿಸಿಲಿನ ತಾಪ ಜೋರಾಗಿತ್ತು. ಸಂಜೆ 6ರ ಸುಮಾರಿಗೆ ಸಣ್ಣದಾಗಿ ಶುರುವಾದ ಮಳೆ ಕೆಲಹೊತ್ತಿನಲ್ಲೇ ರಭಸ ಪಡೆಯಿತು. ಬರೋಬ್ಬರಿ ಮೂರು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಶ್ರೀನಗರ, ಅಂಬೇಡ್ಕರ್‌ ವೃತ್ತ, ಉಣಕಲ್‌, ಸನಾ ಕಾಲೇಜ್‌ ಬಳಿಯಲ್ಲಿರುವ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲೆಲ್ಲ ನೀರು ನಿಂತು ಬಸ್‌ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. ಕಾರಿಡಾರ್‌ನಲ್ಲಿ ಬರೋಬ್ಬರಿ ಮೊಳಕಾಲವರೆಗೂ ನೀರು ನಿಂತಿತ್ತು.

ಹುಬ್ಬಳ್ಳಿ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಂಗಳವಾರ ಕೆಲಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ತೆಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಯಿತು.

ಬೆಳಗ್ಗೆಯಿಂದ ಬಿಸಿಲಿನ ತಾಪ ಜೋರಾಗಿತ್ತು. ಸಂಜೆ 6ರ ಸುಮಾರಿಗೆ ಸಣ್ಣದಾಗಿ ಶುರುವಾದ ಮಳೆ ಕೆಲಹೊತ್ತಿನಲ್ಲೇ ರಭಸ ಪಡೆಯಿತು. ಬರೋಬ್ಬರಿ ಮೂರು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಶ್ರೀನಗರ, ಅಂಬೇಡ್ಕರ್‌ ವೃತ್ತ, ಉಣಕಲ್‌, ಸನಾ ಕಾಲೇಜ್‌ ಬಳಿಯಲ್ಲಿರುವ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲೆಲ್ಲ ನೀರು ನಿಂತು ಬಸ್‌ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. ಕಾರಿಡಾರ್‌ನಲ್ಲಿ ಬರೋಬ್ಬರಿ ಮೊಳಕಾಲವರೆಗೂ ನೀರು ನಿಂತಿತ್ತು.

ತುಳಜಾಭವಾನಿ ದೇವಸ್ಥಾನದ ಬಳಿ ರಸ್ತೆ ಮೇಲೆಲ್ಲಾ ನೀರು ನಿಂತಿತ್ತು. ದ್ವಿಚಕ್ರವಾಹನಗಳು ತೇಲಿ ಹೋಗುತ್ತವೆಯೋ ಏನೋ ಎಂಬಂತೆ ಭಾಸವಾಗುತ್ತಿತ್ತು. ಅಲ್ಲಿ ಪಾರ್ಕ್‌ ಮಾಡಿದ್ದ ವಾಹನಗಳೆಲ್ಲ ನೀರಲ್ಲೇ ಅರ್ಧಕ್ಕರ್ಧ ಮುಳುಗಿದ್ದವು.

ಆನಂದನಗರ, ಕಾರವಾರ ರಸ್ತೆ, ಮಂಟೂರು ರಸ್ತೆ ಸೇರಿದಂತೆ ವಿವಿಧೆಡೆ ತೆಗ್ಗು ಪ್ರದೇಶಗಳಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ಕಾರವಾರ ರಸ್ತೆಯ ಚಟ್ನಿ ಕಾಂಪ್ಲೆಕ್ಸ್‌ನಲ್ಲೂ ನೀರು ನುಗ್ಗಿ ಅಲ್ಲಿನ ವ್ಯಾಪಾರಸ್ಥರು ಪರದಾಡುವಂತಾಗಿತ್ತು. ಜನತಾ ಬಜಾರ್‌, ದುರ್ಗದಬೈಲ್‌ನಲ್ಲಿ ಮಳೆಯಿಂದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುವಂತಾಯಿತು. ಚರಂಡಿಗಳೆಲ್ಲ ತುಂಬಿ ಕೊಳಚೆಯೆಲ್ಲ ರಸ್ತೆಯಲ್ಲಿ ಹರಿಯುತ್ತಿತ್ತು. ಕೆಲವೆಡೆ ವಾಹನಗಳ ಪಾರ್ಕಿಂಗ್‌ ಸ್ಥಳಕ್ಕೆ ನೀರು ನುಗ್ಗಿತ್ತು. ಮಳೆ ರಭಸತೆಯಿಂದಾಗಿ ಕೆಲಕಾಲ ನಗರದ ಅಲ್ಲಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಮಳೆಯಿಂದ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು.