ಸಾರಾಂಶ
ತಾಲೂಕಿನ ಕೌದಳ್ಳಿ, ಬಂಡಳ್ಳಿ, ಅಜ್ಜಿಪುರ ಸುತ್ತಮುತ್ತ ಒಂದೂವರೆ ತಾಸು ಭರ್ಜರಿ ಮಳೆಯಾಗಿದೆ. ಹನೂರು ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಕೌದಳ್ಳಿ, ಬಂಡಳ್ಳಿ, ಅಜ್ಜಿಪುರ ಸುತ್ತಮುತ್ತ ಒಂದೂವರೆ ತಾಸು ಭರ್ಜರಿ ಮಳೆಯಾಗಿದೆ. ಹನೂರು ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಕೌದಳ್ಳಿ ಗ್ರಾಮದಲ್ಲಿ ಪ್ರತಿ ಮಳೆಯೂ ಅವಾಂತರ ಸೃಷ್ಠಿಸುತ್ತಿದೆ. ಕೌದಳ್ಳಿ ಗ್ರಾಮದ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಜೊತೆಗೆ ಚರಂಡಿಯಲ್ಲಿ ಹೂಳು ತೆಗೆಯದೆ ರಾಡಿ ತುಂಬಿದ್ದು, ಉತ್ತಮ ಮಳೆಯಾಗಿ ಮಳೆಯ ನೀರು ಚರಂಡಿಯಲ್ಲಿ ತುಂಬಿದ್ದ ಕಲುಷಿತ ನೀರು ರಾಡಿಯನ್ನು ಹೊತ್ತು ತಂದು ಅಂಗಡಿಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ ಹೀಗಾಗಿ ವ್ಯಾಪಾರಿಗಳನ್ನು ಪರದಾಡುವಂತೆ ಮಾಡಿದೆ.ಬಂಡಳ್ಳಿ ಸುತ್ತಮುತ್ತ ಮಳೆ:
ಮಧ್ಯಾಹ್ನ ಸುರಿದ ಮಳೆಯಿಂದ ಬಂಡಳ್ಳಿ ಗ್ರಾಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಿಂದ ಅರಣ್ಯ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಬಂಡಳ್ಳಿ ಗ್ರಾಮದ ಬಳಿ ಬರುವ ಹಳ್ಳದಲ್ಲಿ ಮಳೆಯ ನೀರು ತುಂಬಿ ಹರಿಯುತ್ತಿದೆ.ರೈತರಲ್ಲಿ ಮಂದಹಾಸ:
ಕಳೆದ ಒಂದು ವಾರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಿನನಿತ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬರಗಾಲದಿಂದ ತತ್ತರಿಸಿರುವ ರೈತರ ಮೊಗದಲ್ಲಿ ಮಂದಹಾಸ ನೋಡಿದ್ದು ಕೃಷಿ ಚಟುವಟಿಕೆಗೆ ಅನುಕೂಲದಾಯಕವಾಗಿದ್ದು, ಜನ ಜಾನುವಾರುಗಳು ಮಳೆ ಇಲ್ಲದೆ ಕಂಗಾಲಾಗಿದ್ದ ಸಂದರ್ಭದಲ್ಲಿ ಉತ್ತಮ ಮಳೆಯಾಗುವ ಮೂಲಕ ಜಲಕ್ಷಾಮದ ಭೀತಿಯನ್ನು ದೂರ ಮಾಡಿದ ವರುಣ ಇದರಿಂದಾಗಿ ರೈತರು ಸಹ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಭೂಮಿ ನೀರು ಕುಡಿದು ಉತ್ತಮವಾಗಿ ಉಳುಮೆ ಮಾಡಲು ಅನುಕೂಲದಾಯಕವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.