ಸಾರಾಂಶ
ಕೆರೆಕಟ್ಟೆ, ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಎಡಬಿಡದೆ ಮಳೆ
ಕನ್ನಡಪ್ರಭ ವಾರ್ತೆ, ಶೃಂಗೇರಿತಾಲೂಕಿನಾದ್ಯಂತ ಪುಷ್ಯ ಮಳೆಯ ಆರ್ಭಟ ಮುಂದುವರಿದಿದ್ದು ಕಳೆದೆರೆಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಬುಧವಾರವೂ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಬೆಳಿಗ್ಗೆಯಿಂದಲೂ ಸುರಿಯಲಾರಂಬಿಸಿದ ಮಳೆ ಸಂಜೆವರೆಗೂ ಮುಂದುವರಿದಿತ್ತು.
ಕೆರೆಕಟ್ಟೆ, ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ ಎಡಬಿಡದೆ ಮಳೆ ಸುರಿಯುತ್ತಿದ್ದರಿಂದ ನಂದಿನಿ, ನಳಿನಿ, ತುಂಗಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ನದಿಗಳೆಲ್ಲ ತುಂಬಿ ಹರಿಯುತ್ತಿದೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಶ್ರೀಮಠದ ತುಂಗಾನದಿ ದಡದಲ್ಲಿರುವ ಕಪ್ಪೆಶಂಕರ ದೇಗುಲ ಸೇರಿದಂತೆ ತಗ್ಗುಪ್ರದೇಶಗಳೆಲ್ಲ ಮತ್ತೆ ಜಲಾವೃತ ಗೊಂಡಿದ್ದು ಮಳೆ ಇದೇ ರೀತಿ ಮುಂದುವರಿದಲ್ಲಿ ಪ್ರವಾಹದ ಭೀತಿ ಎದುರಾಗಲಿದೆ.ಮಳೆಯ ಅಬ್ಬರಕ್ಕೆ ಹಳ್ಳ,ಕೆರೆಗಳು ತುಂಬಿವೆ.ಆನೆಗುಂದ,ನೆಮ್ಮಾರು, ತ್ಯಾವಣ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡದ ಮಣ್ಣು ಕುಸಿದು ರಸ್ತೆಯ ಮೇಲೆ ಬೀಳುತ್ತಿದ್ದು ರಸ್ತೆಯೆಲ್ಲ ಕೆಸರುಮಯವಾಗುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕೆಲದಿನಗಳ ಮಳೆ ಕೊಂಚ ಬಿಡುವು ನೀಡಿದ್ದರಿಂದ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ಅಡಕೆ ತೋಟಗಳಲ್ಲಿ ಔಷಧಿ ಸಿಂಪಡಣೆ ಚುರುಕುಗೊಂಡಿದ್ದರೂ ಇದೀಗ ಮತ್ತೆ ಮಳೆ ಅಬ್ಬರಿಸುತ್ತಿರುವುದರಿಂದ ಮತ್ತೆ ಹಿನ್ನೆಡೆಯಾಗಿದೆ. ಅಡಕೆ,ಕಾಪಿ ಬೆಳೆಗಳಿಗೆ ಕೊಳೆ ರೋಗದ ಭೀತಿ ಎದುರಾಗಿದೆ. ಬುಧವಾರ ಸಂಜೆವರೆಗೂ ಮಳೆ ಮುಂದುವರಿದಿತ್ತು.
23 ಶ್ರೀ ಚಿತ್ರ 3-ಶೃಂಗೇರಿ ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ತುಂಗಾ ನದಿ ತುಂಬಿ ಹರಿಯುತ್ತಿರುವುದು.